ಚುನಾವಣಾ ಫಲಿತಾಂಶ ಬಂದ ಹತ್ತು ದಿನಗಳ ಬಳಿಕ ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿಯಾಗಿ ವಿ. ಡಿ. ಸತೀಶನ್ ಅವರ ಹೆಸರನ್ನು ಅಂತಿಮಗೊಳಿಸಿದೆ.
ಎಐಸಿಸಿಯ ಕೇರಳ ಉಸ್ತುವಾರಿ ದೀಪಾ ದಾಸ್ಮುನ್ಶಿಯವರು ಸತೀಶನ್ ಅವರ ಹೆಸರನ್ನು ಮುಖ್ಯಮಂತ್ರಿ ಎಂದು ಎಲ್ಲ ಪರಿಶೀಲನೆಗಳ ಬಳಿಕ ಘೋಷಿಸಿದರು.

ಹೆಸರು ಅಂತಿಮಗೊಳಿಸುವಲ್ಲಿ ಎಐಸಿಸಿ ಕಾರ್ಯದರ್ಶಿಗಳಾದ ಅಜಯ್ ಮಾಕನ್, ಮುಕುಲ್ ವಾಸ್ನಿಕ್, ಜೈರಾಮ್ ರಮೇಶ್ ಅವರು ಕೂಡ ಚರ್ಚಿಸಿ ಹೆಸರು ಘೋಷಣೆ ಅಂತಿಮಗೊಳಿಸಿದರು. ಮೊದಲು ಇವರು ಕೇರಳ ಕಾಂಗ್ರಸ್ಸಿನ ನಾನಾ ಮಟ್ಟದ ಅಧ್ಯಕ್ಷರುಗಳ ಜೊತೆಗೆ ಆಳವಾದ ಮಾತುಕತೆ ನಡೆಸಿದ ಮೇಲೆ ಮುಖ್ಯಮಂತ್ರಿ ಹೆಸರು ಅಂತಿಮಗೊಳಿಸಿದ್ದಾರೆ.

ಕೆ. ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತಲ ಅವರ ಹೆಸರುಗಳು ಕೂಡ ಮುಖ್ಯಮಂತ್ರಿ ಆಯ್ಕೆಯ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದವು. ಅಂತಿಮವಾಗಿ ಸತೀಶನ್ರಿಗೆ ಹೆಚ್ಚಿನ ಶಾಸಕರ ಬೆಂಬಲವಿರುವುದು ಮನವರಿಕೆ ಮಾಡಿಕೊಂಡು ಹೆಸರು ಘೋಷಿಸಿರುವುದಾಗಿ ಹೇಳಲಾಗಿದೆ.

ಸತೀಶನ್ ಅವರು ಎಡರಂಗದ ಸರಕಾರವಿದ್ದಾಗ ಪ್ರತಿಪಕ್ಷದ ನಾಯಕನಾಗಿ ಇದ್ದರು. ಎರ್ನಾಕುಲಂ ಜಿಲ್ಲೆಯ ಪರವೂರ್ ಕ್ಷೇತ್ರವನ್ನು ಅವರು ಕಾಲು ಶತಮಾನದಿಂದ ಪ್ರತಿನಿಧಿಸುತ್ತಿದ್ದಾರೆ. ಪ್ರಮುಖ ಮೈತ್ರಿ ಪಕ್ಷಗಳಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಜೋಸೆಫ್ ಕೇರಳ ಕಾಂಗ್ರೆಸ್ ಶಾಸಕರು ಕೂಡ ಸತೀಶನ್ರಿಗೆ ಹೆಚ್ಚಿನ ಒಲವು ತೋರಿಸಿದರು ಎನ್ನಲಾಗಿದೆ.

