ಮಂಗಳೂರು : ಹಿರಿಯ ವಿದ್ವಾಂಸ ಪ್ರೊ.ಬಿ.ಎ.ವಿವೇಕ ರೈ ಅವರು ತನ್ನ ಅನುಭವ , ಅಧ್ಯಯನದ ನೆಲೆಯಿಂದ ವಾಸ್ತವ ವಿಚಾರಗಳನ್ನು ಸಮಚಿತ್ತವಾಗಿ ಮತ್ತು ಸ್ಪಷ್ಟವಾಗಿ ಪ್ರಸ್ತುತಪಡಿಸುವಂತ ಖಚಿತತೆ ಇರುವವರು. ವಿವೇಕ ರೈ ಅವರು ತುಳು, ಬ್ಯಾರಿ, ಕೊಂಕಣಿ ಸೇರಿದಂತೆ ಎಲ್ಲಾ ಭಾಷಿಗರಿಗೂ ಮಾರ್ಗದರ್ಶಕರಾರಿರುವವರು ಎಂದು ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಕಾಸರಗೋಡು ಚಿನ್ನಾ ಅವರು ಹೇಳಿದರು.

ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಶನಿವಾರ ಹಮ್ಮಿಕೊಂಡ ‘ಬೆನ್ನಿದ ಪನಿ ದೊಂಪ’ ವಿವೇಕ ರೈ ಅವರ ತುಳು ಸಾಹಿತ್ಯ ಅವಲೋಕನ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಅವರು ಮಾತನಾಡಿ, ಬ್ಯಾರಿ ಅಕಾಡೆಮಿಯು ಪ್ರಕಟಿಸಿದ ಬ್ಯಾರಿ ಶಬ್ದಕೋಶ ರೂಪಿಸಲು ಪ್ರೊ.ಬಿ.ಎ.ವಿವೇಕ ರೈ ಅವರು ದೊಡ್ಡ ಮಟ್ಟದ ಸಲಹೆ ಸಹಕಾರ ನೀಡಿದ್ದರು ಎಂದು ನೆನಪಿಸಿದರು.
ನಿವೃತ್ತ ಪ್ರಾಂಶುಪಾಲ ಹಾಗೂ ತುಳು ಜಾನಪದ ಸಂಶೋಧಕ ಡಾ.ಪೂವಪ್ಪ ಕಣಿಯೂರು ಮಾತನಾಡಿ, ವಿವೇಕ ರೈ ತನ್ನ ವಿದ್ಯಾರ್ಥಿಗಳಿಗೆ ಬದುಕು ರೂಪಿಸುವ ಬಗ್ಗೆ ಹಾಗೂ ಸಂಸ್ಕ್ರತಿಯ ನಡೆಗಳನ್ನು ತಿಳಿಸಿಕೊಡುತ್ತಿದ್ದರು ಎಂದರು. ನೂರಾರು ಯುವ ಸಂಶೋಧಕರಿಗೆ ಮಾರ್ಗದರ್ಶಕರಾಗಿ ಪ್ರೊ.ಬಿ.ಎ.ವಿವೇಕ ರೈ ಅವರು ನಿರಂತರ ಬೆಂಬಲ ನೀಡುವ ಕೆಲಸ ಮಾಡುತ್ತಾ ಬಂದವರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಪ್ರಸ್ತಾವಿಕ ಮಾತನಾಡಿದರು. ಅಕಾಡೆಮಿ ಸದಸ್ಯರಾದ ಕುಂಬ್ರ ದುರ್ಗಾ ಪ್ರಸಾದ್ ರೈ, ಅಕ್ಷಯ ಆರ್ ಶೆಟ್ಟಿ, ಪಾಂಗಾಳ ಬಾಬು ಕೊರಗ ಉಪಸ್ಥಿತರಿದ್ದರು.
ಅಕಾಡೆಮಿ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

