ಪರಿಸರ ಸ್ನೇಹಿ ಅಭಿವೃದ್ದಿ ನಮ್ಮೆಲ್ಲರ ಹೊಣೆಯಾಗಬೇಕು – ಡಾ.ಜೀವನ ರಾಜ್ ಕುತ್ತಾರ್

 ಪರಿಸರವನ್ನು ಅತ್ಯಂತ ಜೋಪಾನವಾಗಿ ಕಾಪಾಡಬೇಕಾದ ಮನುಷ್ಯರು ತಮ್ಮ ಉತ್ತಮ ಬದುಕಿಗಾಗಿ ಪರಿಸರವನ್ನೇ ಹಾಳು ಮಾಡುತ್ತಿರುವುದು ಅತ್ಯಂತ ಅಪಾಯಕಾರಿ ಸಂಗತಿಯಾಗಿದೆ.ಪರಿಸರ ನಾಶಗೊಂಡರೆ ಮಾನವ ಕುಲಕ್ಕೆ ಉಳಿಗಾಲವಿಲ್ಲ.ನೆಲ ಜಲ ಗಾಳಿ ಗಿಡ ಮರ ಪ್ರಾಣಿ ಪಕ್ಷಿ ಸೇರಿದಂತೆ ಇಡೀ ಪರಿಸರವನ್ನು ಸಂರಕ್ಷಣೆ ಮಾಡುವುದರ ಜೊತೆಗೆ ಮಾನವನ ಅಭಿವೃದ್ಧಿಯೂ ಆಗಬೇಕು. ಅದು ಪರಿಸರ ಸ್ನೇಹಿ ಅಭಿವೃದ್ಧಿಯಾಗುವತ್ತ ನಮ್ಮೆಲ್ಲರ ಹೊಣೆಯಾಗಬೇಕು ಎಂದು ಯೆನೆಪೋಯ ಪದವಿ ಕಾಲೇಜ್ ಉಪ ಪ್ರಾಂಶುಪಾಲರಾದ ಡಾ.ಜೀವನ ರಾಜ್ ಕುತ್ತಾರ್ ರವರು ಅಭಿಪ್ರಾಯಪಟ್ಟರು

 ಗಿಡ ಮರ ಬೆಳೆಸಿ,ಪರಿಸರ ಉಳಿಸಿ ಎಂಬ ಘೋಷಣೆಯೊಂದಿಗೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಚಿಣ್ಣರ ಚಾವಡಿ ಮಂಗಳೂರು ಇದರ ಆಶ್ರಯದಲ್ಲಿ ಇಂದು ನಗರದ ಸಂತ ಅಲೋಶಿಯಸ್ ಹೈಸ್ಕೂಲ್ ಹೊರಾಂಗಣದಲ್ಲಿ ಜರುಗಿದ ಸಸಿ ವಿತರಣಾ ಕಾರ್ಯಕ್ರಮವನ್ನು ಉದ್ಘಟಿಸುತ್ತಾ ಅವರು ಮಾತುಗಳನ್ನು ಹೇಳಿದರು

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಹಸಿರುದಳದ ಸಂಯೋಜಕರಾದ ನಾಗರಾಜ್ ಬಜಾಲ್ ರವರು ಮಾತನಾಡುತ್ತಾ, ಐಷಾರಾಮಿ ಬದುಕು ಹಾಗೂ ತ್ಯಾಜ್ಯಗಳ ಹೆಸರಿನಲ್ಲಿ ದೊಡ್ಡ ಪ್ರಮಾಣದ ಪರಿಸರ ಮಾಲಿನ್ಯವಾಗುತ್ತಿದ್ದು, ಇದನ್ನು ಕೂಡಲೇ ಮಟ್ಟ ಹಾಕದಿದ್ದಲ್ಲಿ ಘೋರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ನಿಯಂತ್ರಣ ಮಾಡಬೇಕಾಗಿದೆ. ಎಳೆಯ ಪ್ರಾಯದ ಮಕ್ಕಳಲ್ಲಿ ಗಿಡಗಳನ್ನು ಬೆಳೆಸುವ ಮನೋಭಾವವನ್ನು ಹೆಚ್ಚೆಚ್ಚು ಮೂಡಿಸಬೇಕಾಗಿದೆ ಎಂದು ಹೇಳಿದರು

ಪ್ರಾಸ್ತಾವಿಕವಾಗಿ ಮಾತನಾಡಿದ ಚಿಣ್ಣರ ಚಾವಡಿ ಮಂಗಳೂರು ಸಂಚಾಲಕರಾದ ಸುನಿಲ್ ಕುಮಾರ್ ಬಜಾಲ್ ರವರು 1973 ಜೂನ್ 5ರಂದು ಪ್ರಾರಂಭಗೊಂಡ ವಿಶ್ವ ಪರಿಸರ ದಿನಾಚರಣೆಗೆ ಇಂದು ಸುವರ್ಣ ಮಹೋತ್ಸವದ ಸಂಭ್ರಮವಾಗಿದೆ.ಕಳೆದ 50 ವರ್ಷಗಳಲ್ಲಿ ಜನತೆಯಲ್ಲಿ ಮೂಡಿಸಿದ ಪರಿಸರದ ಬಗ್ಗೆಗಿನ ಕಾಳಜಿ ಹಾಗೂ ಮಹತ್ವವನ್ನು ಇನ್ನಷ್ಟು ಆಳವಾಗಿ ಜನ ಸಮೂಹದ ಮಧ್ಯೆ ಕೊಂಡುಹೋಗಬೇಕೆಂದು ಹೇಳಿದರು

 ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಮಾಜಿಕ ಚಿಂತಕರಾದ ಶೋಭಾ ಕೇಶವ್ ಪಡೀಲ್ ಹಾಗೂ ದಿಶಾ ರೀಟಾ ಡಿಸೋಜಾರವರು ಪರಿಸರದ ಬಗ್ಗೆ ಸಂದರ್ಭೋಚಿತವಾಗಿ ಮಾತನಾಡಿದರು.

 ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಆರಿಫ್ ಪಡುಬಿದ್ರಿ,ಯುವ ವಕೀಲರಾದ ರಾಮಚಂದ್ರ ಬಬ್ಬುಕಟ್ಟೆ, ಶರಿಲ್ ಅರುಣ್ ಬಂಗೇರ,ಯುವ ನಾಯಕರಾದ ಬಿ ಕೆ ಇಮ್ತಿಯಾಜ್, ನವೀನ್ ಕೊಂಚಾಡಿ,ಪೋಷಕರಾದ ಅಶ್ವಿನಿ,ನವಾಝ್,ಚಂದ್ರಕಲಾ, ರೇಖಾ ಮುಂತಾದವರು ಉಪಸ್ಥಿತರಿದ್ದರು.ಮಕ್ಕಳಿಗೆ ಪರಿಸರದ ಬಗ್ಗೆ  ಸ್ಥಳದಲ್ಲೇ ಅಶು ಭಾಷಣ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ಬಳಿಕ ವಿಧ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸಸಿಗಳನ್ನು ವಿತರಿಸಲಾಯಿತು.

Related Posts

Leave a Reply

Your email address will not be published.