ಆಗಸ್ಟ್ 14ರಂದು ಲೋಕ ಅದಾಲತ್
ಜಿಲ್ಲೆಯಾದ್ಯಂತ ಆಗಸ್ಟ್ 14 ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದ್ದು, ಕಕ್ಷಿದಾರರಿಗೆ ರಾಜಿ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿರುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪೃಥ್ವಿರಾಜ್ ವರ್ಣೇಕರ್ ತಿಳಿಸಿದರು.
ಅವರು ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಲೋಕ ಅದಾಲತ್ನಲ್ಲಿ ರಾಜಿ ಮೂಲಕ ಪರಿಹರಿಸಲಾದ ಪ್ರಕರಣಗಳಲ್ಲಿ ಮೇಲ್ಮನವಿಗೆ ಯಾವುದೇ ಅವಕಾಶವಿರುವುದಿಲ್ಲ. ಮೋಟರ್ ವೆಹಿಕಲ್ ಪ್ರಕರಣ, ಬ್ಯಾಂಕ್ ಚೆಕ್ ಬೌನ್ಸ್, ವಿದ್ಯುತ್ ಕಳ್ಳತನದಂತಹ ಪ್ರಕರಣಗಳನ್ನು ರಾಜಿ ಮೂಲಕ ಪರಿಹರಿಸಲಾಗುತ್ತದೆ. ಕೆಲವು ಕ್ರಿಮಿನಲ್ ಹಾಗೂ ಸಿವಿಲ್ ಪ್ರಕರಣಗಳನ್ನೂ ಇತ್ಯರ್ಥಪಡಿಸಲಾಗುತ್ತದೆ. ಕಕ್ಷಿದಾರರಲ್ಲದಿದ್ದರೂ ಕೂಡ ಯಾವುದಾದರೂ ವ್ಯಾಜ್ಯವಿದ್ದರೂ ಪರಿಹರಿಸಿಕೊಳ್ಳಬಹುದು. ಇದೆಲ್ಲದರಿಂದಾಗಿ ಸಮಾಜದಲ್ಲಿ ಎಲ್ಲರೂ ಶಾಂತಿಯುತವಾಗಿ ಬದುಕಲು ಅವಕಾಶವಾಗುತ್ತದೆ ಎಂದು ಅವರು ಹೇಳಿದರು.