ಕರಾವಳಿ ಭಾಗದ ಕೆಲವು ಕಡೆಗಳಲ್ಲಿ ರವಿವಾರ ಸಾಧಾರಣ ಮಳೆಯಾಗಿದೆ. ಮುಂಗಾರು ಮಳೆ ಬಿರುಸು ಪಡೆಯುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆಯು ಜೂ. 8ರಿಂದ 10ರವರೆಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ “ರೆಡ್ ಅಲರ್ಟ್’ ಘೋಷಣೆ ಮಾಡಿದೆ.
ಮೂರು ದಿನಗಳ ಕಾಲ ಗುಡುಗು, ಗಾಳಿ ಸಹಿತ 204.5 ಮಿ. ಮೀ.ಗೂ ಅಧಿಕ ಮಳೆ ಸುರಿಯುವ ಸಾಧ್ಯತೆ ಇದೆ. ಅರಬ್ಬಿ ಸಮುದ್ರದಲ್ಲಿ ಗಂಟೆಗೆ 60 ಕಿ. ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಜೂ. 10ರ ವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಮೂಡುಬಿದಿರೆ, ಬಂಟ್ವಾಳ, ಬೆಳ್ತಂಗಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರವಿವಾರ ಸಾಧಾರಣ ಮಳೆಯಾಗಿದೆ. ಮಂಗಳೂರಿನಲ್ಲಿ ಬೆಳಗ್ಗೆ ಮಳೆ ಸುರಿದಿದೆ. ಬಳಿಕ ಬಿಟ್ಟು ಬಿಟ್ಟು ಮಳೆಯಾಗಿದ್ದು, ಮೋಡದಿಂದ ಕೂಡಿದ ವಾತಾವರಣ ಇತ್ತು. ಮಂಗಳೂರಿನಲ್ಲಿ 28.9 ಡಿ. ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 2.1 ಡಿ. ಸೆ. ಇಳಿಕೆ ಮತ್ತು 23.5 ಡಿ. ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.3 ಡಿ. ಸೆ. ಉಷ್ಣಾಂಶ ಇಳಿಕೆ ಕಂಡಿತ್ತು.
ಜಿಲ್ಲಾದ್ಯಂತ ರವಿವಾರ ಸಾಧಾರಣ ಮಳೆಯಾಗಿದೆ. ಬೆಳಗ್ಗಿನಿಂದಲೇ ಮೊಡಕವಿದ ವಾತಾವರಣ ಗೊಂದಿಗೆ ಹನಿಹನಿ ಮಳೆ ಸುರಿದಿದೆ. ಆಗಾಗ್ಗೆ ಸೂರ್ಯನ ಕಿರಣಗಳು ಕಂಡುಬಂದವು.
ಉಡುಪಿ ನಗರಾದ್ಯಂತ, ಮಣಿಪಾಲ, ಪರ್ಕಳ, ಆತ್ರಾಡಿ, ಹಿರಿಯಡಕ, ಅಲೆವೂರು, ಕುಕ್ಕಿಕಟ್ಟೆ, ಕಟಪಾಡಿ ಸುತ್ತಮುತ್ತ, ಕಾಪು, ಹೆಬ್ರಿ, ಕಾರ್ಕಳ, ಬ್ರಹ್ಮಾವರ, ಕುಂದಾಪುರ, ಬೈಂದೂರು ತಾಲೂಕಿನೆ ಹಲವೆಡೆ ಗುಡುಗು ಸಹಿತ ಸಾಧಾರಣ ಮಳೆ ಸುರಿದಿದೆ.ಮಧ್ಯಾಹ್ನದ ವೇಳೆ ಸ್ವಲ್ಪ ಬಿಸಿಲಿನ ವಾತಾವರಣವಿತ್ತು. ಸಂಜೆ ವೇಳೆ ಹನಿಹನಿ ಮಳೆಯಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಕಾರ್ಕಳ – 25.8, ಬೈಂದೂರು – 25.1, ಕಾಪು – 22.3, ಬ್ರಹ್ಮಾವರ – 13.1, ಕುಂದಾಪುರ – 10.3, ಉಡುಪಿ – 9.6, ಹೆಬ್ರಿ – 5.7 ಮಿ. ಮೀ. ಮಳೆಯಾಗಿರುವ ಕುರಿತು ಹವಾಮಾನ ಇಲಾಖೆ ವರದಿ ತಿಳಿಸಿದೆ.


