ಪೀಠ ಕ್ರಿಯೇಷನ್ ವತಿಯಿಂದ ’ವಿವಾಸ್ವತ’ ಕನ್ನಡ ಕಿರುಚಿತ್ರದ ಲೋಕಾರ್ಪಣೆ ಕಾರ್ಯಕ್ರಮವು ಮಂಗಳೂರಿನ ಮ್ಯಾಪ್ಸ್ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮ್ಯಾಪ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಭಾಕರ್ ನೀರ್ಮಾರ್ಗ ಅವರು ’ವಿವಾಸ್ವತ’ ಕನ್ನಡ ಕಿರುಚಿತ್ರವನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಪೀಠ ಕ್ರಿಯೇಶನ್ನವರು ವಿವಾಸ್ವತ ಎಂಬ ಕಿರುಚಿತ್ರವನ್ನು ಹೊರತಂದಿದೆ. ಸಮಾಜಕ್ಕೆ ಕನ್ನಡಿ ಹಿಡಿದು ಸಮಾಜವನ್ನು ತಿದ್ದುವ ಕೆಲಸ ಇವರ ಕಿರುಚಿತ್ರ ಮಾಡಿದೆ ಎಂದು ಹೇಳಲು ಹೆಮ್ಮೆಯೆನಿಸುತ್ತಿದೆ. ಸದಾ ಹೊಸತನವು ಈ ಕಿರುಚಿತ್ರದಲ್ಲಿ ಕಾಣುತ್ತಿದೆ ಎಂದು ಅವರು ವಿವಾಸ್ವತ ಕಿರುಚಿತ್ರದ ತಂಡಕ್ಕೆ ಶುಭಕೋರಿದರು.
ಆನಂತರ ಕಿರುಚಿತ್ರದ ನಿರ್ದೇಶಕರಾದ ದಿಲೀಪ್ ರೈ ಅವರು ಮಾತನಾಡಿ, ಬದುಕಿನಲ್ಲಿ ಯಾವುದು ಶಾಶ್ವತವಲ್ಲ ಎನ್ನುವ ಥೀಮ್ನ್ನು ಇಟ್ಟುಕೊಂಡು ಕಿರುಚಿತ್ರವನ್ನು ಮಾಡಲು ಹೊರಟಿದ್ದೇವು. ಇದು ಕಲ್ಪನೆಯಲ್ಲಿ ಬಿಂಬಿತವಾದ ಚಿತ್ರವಾಗಿದ್ದು, ನೈಜವಾಗಿ ಚಿತ್ರೀಕರಣ ಮಾಡುವ ಪ್ರಯತ್ನವನ್ನು ಮಾಡಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಾಸ್ವತ ಕಿರುಚಿತ್ರದ ಸಿನಿಮಾಟೋಗ್ರಫಿ ಮಹೇಶ್ ಮೂಲ್ಯ, ಎಕ್ಸಿಕ್ಯೂಟಿವ್ ಪ್ರೋಡ್ಯುಸರ್ ಯತೀಶ್ ಕುಡುಪು, ದೀಪಿಕಾ ಶೆಟ್ಟಿ, ಶಿವಪ್ರಕಾಶ್, ಗುಣಕರ್ ಉಪಸ್ಥಿತರಿದ್ದರು.
