ಪಡುಬಿದ್ರಿ:14 ವರ್ಷಗಳಿಂದ ತಲೆಮರಿಸಿಕೊಂಡಿರುವ LPC ವಾರಂಟ್ ಆಸಾಮಿಯ ಬಂಧನ

ಉಡುಪಿ ಜಿಲ್ಲೆಯ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 22-01-2010 ರಂದು ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಮಾರು 14 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರಸಿಕೊಂಡಿದ್ದ ವಾರಂಟು ಆಸಾಮಿ ಮೈಸೂರಿನ ನಿವಾಸಿ ಇಕ್ಬಾಲ್ ಅಹಮದ್ ಅನ್ಸಾರಿ ಎಂಬಾತನನ್ನು ಪಡುಬಿದ್ರಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲವು ಆರೋಪಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿರುತ್ತದೆ.
ದಿನಾಂಕ 22-1-2010 ರಂದು ಹಗಲಿನ ವೇಳೆ ಕುಖ್ಯಾತ ಕಳ್ಳರಾದ ಮುತ್ತಪ್ಪ ಬಳೆಗಾರ ಮತ್ತು ಸುದರ್ಶನ ಬಳೆಗಾರ ಎಂಬವರು ಕಾಪು ತಾಲೂಕು ನಂದಿಕೂರು ಗ್ರಾಮದ ರಾಘವೇಂದ್ರ ಭಟ್ ಎಂಬವರ ಮನೆಯ ಹಿಂಬದಿಯ ಬಾಗಿಲನ್ನು ಮುರಿದು ಒಳ ಪ್ರವೇಶಿಸಿ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಮತ್ತು ಎಲೆಕ್ಟ್ರಾನಿಕ್ ಸ್ವತ್ತುಗಳನ್ನು ಕಳವು ಮಾಡಿಕೊಂಡು ಹೋಗಿ ಅದರಲ್ಲಿ ಚಿನ್ನಾಭರಣಗಳನ್ನು ಮೈಸೂರಿನ ಮಹಮ್ಮದ್ ಇಕ್ಬಾಲ್ ಅನ್ಸಾರಿ ಎಂಬಾತನಲ್ಲಿ ಕೊಟ್ಟು ಮಾರಾಟ ಮಾಡಿರುತ್ತಾರೆ. ಅಲ್ಲದೆ ಮುತ್ತಪ್ಪ ಬಳೆಗಾರ ಮತ್ತು ಸುದರ್ಶನ ಬಳೆಗಾರ ಮೈಸೂರಿನ ರಿಯಾಜ್ ಅಹಮದ್ ಎಂಬಾತನೊಂದಿಗೆ ಸೇರಿಕೊಂಡು 2010 ನೇ ಇಸವಿಯಲ್ಲಿ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 70 ವರ್ಷ ಪ್ರಾಯದ ಶಿವರಾಯ ಆಚಾರ್ಯ ಎಂಬವರನ್ನು ಕೊಲೆ ಮಾಡಿ ಅವರ ಮೈ ಮೇಲಿನ ಚಿನ್ನಾಭರಣಗಳನ್ನು ಕಳವು ಮಾಡಿದ್ದು ಹಾಗೂ ಶಿರ್ವ ಠಾಣಾ ವ್ಯಾಪ್ತಿಯಲ್ಲಿ 2 ಹಗಲು ಮನೆ ಕಳ್ಳತನ ಮತ್ತು ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ 1 ಹಗಲು ಮನೆ ಕಳ್ಳತನ ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ಹಗಲು ಮನೆ ಕಳ್ಳತನ ಮಾಡಿದ್ದು ಸದರಿ ಪ್ರಕರಣಗಳಲ್ಲಿ ಕಳವು ಮಾಡಿದ ಚಿನ್ನಾಭರಣಗಳನ್ನು ಮೈಸೂರಿನ ಇಕ್ಬಾಲ್ ಅಹಮದ್ ಅನ್ಸಾರಿ ಮೈಸೂರಿನಲ್ಲಿ ಚಿನ್ನದ ಅಂಗಡಿಯಲ್ಲಿ ಮಾರಾಟ ಮಾಡಿರುತ್ತಾನೆ. ಬಳಿಕ ಆರೋಪಿಗಳನ್ನು ಪೊಲೀಸರು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನಂತರ ಇಕ್ಬಾಲ್ ಅಹಮದ್ ಅನ್ಸಾರಿ ನ್ಯಾಯಾಲಯದಿಂದ ಜಾಮೀನು ಪಡೆದು ಬಳಿಕ ವಿಚಾರಣೆ ಸಮಯ ಸುಮಾರು 14 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದು ನ್ಯಾಯಾಲಯ ಆರೋಪಿಯ ದಸ್ತಗಿರಿಗೆ LPC ವಾರಂಟ್ ಹೊರಡಿಸಿದ್ದು.
ಉಡುಪಿ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಶ್ರೀ ಹರಿರಾಮ್ ಶಂಕರ IPS ರವರ ಆದೇಶದಂತೆ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಸದಾನಂದ ಎಸ್ ನಾಯಕ್ ರವರ ಮಾರ್ಗದರ್ಶನದಂತೆ ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾI ಹರ್ಷ ಪ್ರಿಯಂವಧ IPS ಮತ್ತು ಕಾಪು ವೃತ್ತ ನಿರೀಕ್ಷಕರಾದ ಜಯಶ್ರೀ ಮಾನೆ ರವರ ನೇತೃತ್ವದಲ್ಲಿ ಪಡುಬಿದ್ರಿ ಪೊಲೀಸ್ ಠಾಣಾ ಪೋಲಿಸ್ ಉಪನಿರೀಕ್ಷಕರಾದ ಶ್ರೀ ಸಕ್ತಿವೇಲು( ಕಾ.ಸು) ಅನಿಲ್ ಕುಮಾರ್(ತನಿಖೆ) ಸಿಬ್ಬಂದಿಗಳಾದ ಎ ಎಸ್ ಐ ರಾಜೇಶ್ ಪಿ, ಕಾನ್ಸ್ಟೇಬಲ್ ಗಳಾದ ಸಂದೇಶ, ಶರಣ್ ಜೆ ಪುತ್ರನ್ LPC ವಾರಂಟ್ ಹಾಸನ್ ಇಕ್ಬಾಲ್ ಅಹಮದ್ ಅನ್ಸಾರಿ ಎಂಬಾತನ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಆತನು ನಿನ್ನೆ ದಿನಾಂಕ 29-08-2025 ರಂದು ವಿದೇಶದಿಂದ
ಬೆಂಗಳೂರಿಗೆ ಬರುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಬೆಂಗಳೂರಿನಲ್ಲಿ ವಶಕ್ಕೆ ಪಡೆದು ಈ ದಿನ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಈತನ ವಿರುದ್ಧ ಶಿರ್ವ ಪೊಲೀಸ್ ಠಾಣೆ ಮತ್ತು ಮಣಿಪಾಲ ಪೊಲೀಸ್ ಠಾಣೆಗಳಲ್ಲಿ ಅರೆಸ್ಟ್ ವಾರಂಟ್ ಇರುತ್ತದೆ.
ಸದರಿ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಮುತ್ತಪ್ಪ ಬಳೆಗಾರ ಮತ್ತು ಮೈಸೂರಿನ ರಿಯಾಜ್ ಅಹಮದ್ ಉಡುಪಿ ಜಿಲ್ಲಾ ಕಾರಾಗೃಹ ದಲ್ಲಿ ನಡೆದ ವಿನೋದ್ ಶೆಟ್ಟಿಗಾರ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಪ್ರಸ್ತುತ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.