ಬಂಟ್ವಾಳ: ಶನಿವಾರ ಸಂಜೆ ನೇತ್ರಾವತಿ ನದಿ ಅಪಾಯದ ಮಟ್ಟ ತಲುಪಿ, ನೆರೆಯ ಮುನ್ಸೂಚನೆ ನೀಡಿದ್ದರೂ ಭಾನುವಾರ ಬೆಳಗ್ಗಿನ ಜಾವಾ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿ ಆತಂಕಗೊಂಡಿದ್ದ ನದಿ ತೀರದ ಜನ ತುಸು ನಿಟ್ಟುಸಿರು ಪಡುವಂತಾಯಿತು.

ಶನಿವಾರ ರಾತ್ರಿಯ ವೇಳೆ ಅಪಾಯದ ಗರಿಷ್ಠ ಮಟ್ಟ 8.4 ಮೀಟರ್ ಎತ್ತರಕ್ಕೆ ನೀರಿನ ಮಟ್ಟ ದಾಖಲಾಗಿತ್ತು. ಅಲ್ಲದೆ ರಾತ್ರಿಯಡೀ ಭಾರೀ ಗಾಳಿ ಮಳೆ ಸುರಿದಿದ್ದು ಬೆಳಗ್ಗಿನ ವೇಳೆ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಆತಂಕ ವ್ಯಕ್ತವಾಗಿತ್ತು. ಆದರೆ ಭಾನುವಾರ ಮುಂಜಾನೆ 7.4 ಮೀಟರ್ ಎತ್ತರಕ್ಕೆ ನದಿ ನೀರು ಇಳಿಕೆಯಾಗಿತ್ತು.

ನದಿ ತೀರದ ತಗ್ಗು ಪ್ರದೇಶಗಳಾದ ಆಲಡ್ಕ, ಶ್ರೀ ಶಾರದ ಪ್ರೌಢಶಾಲೆಯ ಮೈದಾನ, ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ತೋಟಗಳಿಗೆ ನೀರು ನುಗ್ಗಿತ್ತು. ಸಂಜೆಯ ವೇಳೆಗೆ ಮಳೆಯ ಅಬ್ಬರ ಇಲ್ಲದೆ ಇದ್ದರೂ ನದಿಯಲ್ಲಿ 8.6 ಮೀಟರ್ ಎತ್ತರದಲ್ಲಿ ಅಪಾಯದ ಮಟ್ಟವನ್ನು ಮೀರಿ ನೀರು ಹರಿದು ನೆರೆ ಭೀತಿ ಹುಟ್ಟಿಸಿದೆ. ಸೋಮವಾರ ಬೆಳಗ್ಹಿನ ವೇಳೆ ಮಳೆ ಮುಂದುವರರಿದುದ್ದರೂ ನದಿ ನೀರಿನ ಮಟ್ಟ 6.9 ಮೀಟರ್ ಗೆ ಇಳಿಕೆಯಾಗಿದೆ
ಈ ನಡುವೆ ರಾಯಿ ಗ್ರಾಮದ ಹೊರಂಗಳ ಎಂಬಲ್ಲಿ ವ್ಯಕ್ತಿ ಯೊಬ್ಬರು ಶನಿವಾರ ರಾತ್ರಿಯಿಂದ ನಾಪತ್ತೆಯಾಗಿರುವುದು ವರದಿಯಾಗಿದೆ.
ಇಲ್ಲಿನ ನಿವಾಸಿ ಜೀವನ್ ಪಿಂಟೋ ಎಂಬವರು ಶನಿವಾರ ರಾತ್ರಿಯಿಂದ ನಾಪತ್ತೆಯಾಗಿದ್ದು, ಅವರ ಚಪ್ಪಲಿ ಹಾಗೂ ಟಾರ್ಚ್ ಮನೆಯ ತೊರೆಯ ಬಳಿ ಪತ್ತೆಯಾಗಿದ್ದು, ಎನ್ ಡಿ ಆರ್ ಎಫ್ ತಂಡ ,ಪೊಲೀಸರು ಹಾಗೂ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಹುಡುಕಾಟ ಮುಂದುವರೆದಿದೆ


