ಉಡುಪಿ: ರಾಷ್ಟ್ರೀಯ ಏಕತೆಯ ಹರಿಕಾರ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನೋತ್ಸವದ ಪ್ರಯುಕ್ತ ಭಾರತದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ 28 ರಾಜ್ಯಗಳ 28 ಭಾಷೆಗಳಲ್ಲಿ ಸತತ 28 ಗಂಟೆಗಳ ಕಾಲ ನಿರಂತರ ಗಾಯನ ಮಾಡುವ ಐತಿಹಾಸಿಕ ವಿಶ್ವದಾಖಲೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕರ್ನಾಟಕದ ಖ್ಯಾತ ಗಾಯಕ ಶ್ರೀ ಎಂ.ಜಿ. ಯಶವಂತ ಆಚಾರ್ಯ ಅವರ ಗಾಯನದಲ್ಲಿ ನಡೆಯಲಿರುವ ಈ ವಿಶಿಷ್ಟ ಕಾರ್ಯಕ್ರಮಕ್ಕೆ “ವಂದೇ ಭಾರತ ಮಾತರಂ – ಒಂದು ದೇಶ, ಒಂದು ಧ್ವನಿ, ಒಂದು ಭಾವ” ಎಂಬ ಘೋಷವಾಕ್ಯವನ್ನು ಹೊಂದಿಸಲಾಗಿದೆ.
“ಏಕ್ ಭಾರತ್ – ಶ್ರೇಷ್ಠ ಭಾರತ್” ಎಂಬ ರಾಷ್ಟ್ರೀಯ ಏಕತೆಯ ಸಂದೇಶವನ್ನು ಸಾರುವ ಈ ಅಪೂರ್ವ ಕಾರ್ಯಕ್ರಮವು 2026ರ ಅಕ್ಟೋಬರ್ 6 ಮತ್ತು 7ರಂದು ಬೆಂಗಳೂರಿನ ಜೆ.ಪಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ಈ ಐತಿಹಾಸಿಕ ಕಾರ್ಯಕ್ರಮದ ಆಕರ್ಷಕ ಪೋಸ್ಟರ್ ಅನ್ನು ಪರಮಪೂಜ್ಯ ಜಗದ್ಗುರುಗಳವರ ಅಮೃತಹಸ್ತದಿಂದ ಇಂದು ಮಹಾಸಂಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು. ಪೋಸ್ಟರ್ ಬಿಡುಗಡೆಗೊಂಡ ಈ ಕ್ಷಣವು ರಾಷ್ಟ್ರಭಕ್ತಿ, ರಾಷ್ಟ್ರೀಯ ಏಕತೆ ಹಾಗೂ ಭಾರತೀಯ ಸಂಸ್ಕೃತಿಯ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಅಮೃತಮಯ ಹಾಗೂ ಅವಿಸ್ಮರಣೀಯ ಕ್ಷಣವಾಗಿ ಮೂಡಿಬಂತು.
28 ರಾಜ್ಯಗಳು, 28 ಭಾಷೆಗಳು ಮತ್ತು 28 ಗಂಟೆಗಳ ನಿರಂತರ ಗಾಯನದ ಮೂಲಕ ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸುವ ಈ ಕಾರ್ಯಕ್ರಮವು ರಾಷ್ಟ್ರೀಯ ಏಕತೆ ಮತ್ತು ಅಖಂಡ ಭಾರತದ ಸಂಕಲ್ಪಕ್ಕೆ ಸಂಗೀತದ ಮೂಲಕ ಸಲ್ಲಿಸುವ ವಿಶಿಷ್ಟ ನಮನವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

