ವಿದ್ಯಾಗಿರಿಯಲ್ಲಿ ವೈವಿಧ್ಯಮಯ ಹಣ್ಣುಗಳ ಮೇಳ ಸಮಾಪನ

ಮೂಡುಬಿದಿರೆ: ಹಲಸು- ವೈವಿಧ್ಯಮಯ ಹಣ್ಣುಗಳ ಮಹಾಮೇಳ ಸಮಿತಿ ನೇತೃತ್ವದಲ್ಲಿ ಕೃಷಿಋಷಿ ಡಾ.ಎಲ್.ಸಿ. ಸೋನ್ಸ್ ಸ್ಮರಣಾರ್ಥ ವಿದ್ಯಾಗಿರಿಯಲ್ಲಿ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಭವನದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡ ಹಲಸು ಮತ್ತು ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಮತ್ತು ಕೃಷಿ ಪ್ರದರ್ಶನಗಳ ಪರಿಕರಗಳ ಪ್ರದರ್ಶನ ಮತ್ತು ಮಾರಾಟ `ಸಮೃದ್ಧಿ’ಯು ಸಮಾಪನಗೊಂಡಿತ್ತು.

ಶ್ರೀಮತಿ ಮೋಹಿನಿ ಅಪ್ಪಾಜಿ ನಾಯಕ್ ವೇದಿಕೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಹಿಂದೆ ಕೃಷಿ ಬದುಕಿನಲ್ಲಿದ್ದವರು, ಬಡವರು ಆಷಾಢ ತಿಂಗಳಿನಲ್ಲಿ ಕೆಲಸ ಇಲ್ಲದಾಗ ಹಲಸಿನ ಹಣ್ಣಿಗಳನ್ನು ಮತ್ತು ಅವುಗಳಿಂದ ತಯಾರಿಸಿದ ತಿಂಡಿಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.ಆದರೆ ಇಂದು ಅಲಕ್ಷ್ಯಕ್ಕೆ ಒಳಗಾಗುತ್ತಿರುವ ಹಲಸಿನ ಕುರಿತು ಇಂದಿನ ಪೀಳಿಗೆಗೆ ಅರಿವನ್ನು ಮೂಡಿಸುವ ಹಾಗೂ ಪ್ರದರ್ಶನದ ಮೂಲಕ ಅನುಭವ ನೀಡುವ ಈ ಮೇಳದ ಉದ್ದೇಶ ಸಾರ್ಥಕ ಎಂದು ಶಾಸಕ ಉಮಾನಾಥ.ಎ.ಕೋಟ್ಯಾನ್ ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ವಿದೇಶದ ಹಲವಾರು ವೈವಿಧ್ಯಮಯ ತಳಿಗಳನ್ನು ನಮ್ಮ ಜಿಲ್ಲೆಗೆ ಪರಿಚಯಿಸಿದವರು ಡಾ. ಸೋನ್ಸ್. ಇವತ್ತು ನಮ್ಮ ಸುತ್ತಮುತ್ತ ಇರುವ ಎಷ್ಟೋ ಗಿಡಗಳಿಗೆ ಮೂಲ ಕಾರಣವೇ ಇವರು. ನಮ್ಮ ಮೂಡುಬಿದಿರೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕೃಷಿಋಷಿ ಡಾ.ಎಲ್.ಸಿ.ಸೋನ್ಸ್ ರವರ ಸ್ಮರಣೆಯಲ್ಲಿ ‘ಸಮೃದ್ಧಿ ‘ ಹೆಸರಿನಿಂದ ಈ ಮಹಾಮೇಳ ನಡೆದಿದೆ ಎಂದರು.

ಹಣ್ಣುಗಳು ನಮಗೆ ಹಲವಾರು ಸಂದರ್ಭಗಳಲ್ಲಿ ಬದುಕಲಿಕ್ಕೆ ಆಹಾರವಾಗಿವೆ. ಇದರ ಪರಿಚಯವೇ ಇಲ್ಲದ ಇಂದಿನ ಪೀಳಿಗೆಗೆ ವೈವಿಧ್ಯಮಯ ಹಣ್ಣುಗಳನ್ನು ಪರಿಚಯಿಸುವುದು ಮತ್ತು ಅದನ್ನು ಪ್ರದರ್ಶನ ಮಾಡಿ ಎಲ್ಲರಿಗೂ ಸಂಭ್ರಮ ನೀಡುವ ನಿಟ್ಟಿನಲ್ಲಿ ಮೇಳ ಆಯೋಜಿಸಲಾಗಿದೆ ಎಂದರು.

ನಮ್ಮಲ್ಲಿರುವ ವೈವಿಧ್ಯತೆಯ ಕುರಿತು ನಮಗೆ ಗೌರವದ ಭಾವನೆ ಇರಬೇಕು. ಅದರೊಂದಿಗೆ ಅವುಗಳ ಪರಿಚಯ ಇರಬೇಕು. ಅವುಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯಕರ್ತವ್ಯ ಆಗಬೇಕು ಎಂದರು.

ಮಂಗಳೂರಿನ ಕೃಷಿಕ ಸಮಾಜದ ಅಧ್ಯಕ್ಷರು ಸಂಪತ್ ಸಾಮ್ರಾಜ್ಯ, ಮೂಡುಬಿದಿರೆಯ ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ್.ಬಿ, ಮೂಡುಬಿದಿರೆಯ ತುಳುಕೂಟದ ಅಧ್ಯಕ್ಷ ಧನಕೀರ್ತಿ ಬಲಿಪ ಮತ್ತು ಸಂಘಟನೆಯ ಸದಸ್ಯರುಗಳಾದ ಸುಭಾಷ್ ಚಂದ್ರ ಚೌಟ, ರಾಜವರ್ಮ ಬೈಲಂಗಡಿ, ಆದಿರಾಜ ಇದ್ದರು. ಕಾರ್ಯಕ್ರಮವನ್ನು ವೇಣುಗೋಪಾಲ್ ಶೆಟ್ಟಿ ನಿರೂಪಿಸಿದರು.

Related Posts

Leave a Reply

Your email address will not be published.