ಅಡಿಕೆ ಅಡಮಾನ ಯೋಜನೆಗೆ ಸಂಕಷ್ಟ, ಪುತ್ತೂರು ಎಪಿಎಂಸಿ ಆಡಳಿತ ಸುಧಾರಣೆಗೆ ತಕ್ಷಣ ಕ್ರಮ : ತಹಶೀಲ್ದಾರ್ ಕುಂಞ ಅಹಮ್ಮದ್ ಹೇಳಿಕೆ

ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ರೈತರಿಗೆ ನೀಡಲಾಗುವ ಅಡಕೆ ಅಡಮಾನ ಯೋಜನೆಗೆ ಪ್ರಸ್ತುತ ಕಂಟಕವೊಂದು ನಿರ್ಮಾಣವಾಗಿದೆ.
ಪುತ್ತೂರು ಎಪಿಎಂಸಿಯಲ್ಲಿ ಆಡಳಿತ ಮಂಡಳಿ ಇಲ್ಲ. ಹಾಗಾಗಿ ಇಲ್ಲಿ ಅಧಿಕಾರಿಗಳ ಕಾರುಬಾರು. ಹಲವು ವರ್ಷಗಳಿಂದ ಪುತ್ತೂರು ಎಪಿಎಂಸಿಗೆ ಕಾರ್ಯದರ್ಶಿಯೇ ಇರಲಿಲ್ಲ. ಇದೀಗ ಹಲವು ಸಮಯದ ಹಿಂದೆ ಕಾರ್ಯದರ್ಶಿ ಹುದ್ದೆಗೆ ಖಾಯಂ ಅಧಿಕಾರಿಯೊಬ್ಬರು ಬಂದಿದ್ದಾರೆ. ಆದರೆ ಆಡಳಿತ ವ್ಯವಸ್ಥೆ ಇಲ್ಲದ ಕಾರಣ ಪುತ್ತೂರು ತಹಶೀಲ್ದಾರ್ ಕುಂಞ ಅಹಮ್ಮದ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ಸರ್ಕಾರ ನೇಮಕ ಮಾಡಿದೆ. ಪ್ರಭಾರ ಕಾರ್ಯದರ್ಶಿ ಹುದ್ದೆ ನಿಭಾಯಿಸುತ್ತಿದ್ದ ರಾಮಚಂದ್ರ ಎಂಬವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಪುತ್ತೂರು ಎಪಿಎಂಸಿ ಈ ಹಿಂದೆ ಅಡಿಕೆ ಬೆಳೆಗಾರರಿಗೆ ನೆರವು ನೀಡುವ ಹಿನ್ನಲೆಯಲ್ಲಿ ಅಡಕೆ ಅಡಮಾನ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಯ ಪ್ರಕಾರ 8 ಕ್ವಿಂಟಾಲ್ ಅಡಿಕೆ ಅಡಮಾನ ಇಟ್ಟ ರೈತ 3 ತಿಂಗಳ ತನಕ ಯಾವದೇ ಬಡ್ಡಿ ಪಾವತಿ ಮಾಡದೆ ರೂ. 2 ಲಕ್ಷ ಸಾಲ ಪಡೆಯಬಹುದಾಗಿದೆ. ಈ ಯೋಜನೆಯ ಸೌಲಭ್ಯವನ್ನು ಅವಿಭಜಿತ ಪುತ್ತೂರು ತಾಲೂಕಿನ ಅಡಿಕೆ ಬೆಳೆಯುವ ರೈತರು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ತುರ್ತು ಸಂದರ್ಭದಲ್ಲಿ ರೈತರ ಪಾಲಿಗೆ ಈ ಯೋಜನೆ ಆಪತ್ಭಾಂದವ' ಆಗಿತ್ತು. ಆದರೆ ಇದೀಗ ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಹೊಸದೊಂದು ಸಂಕಷ್ಟ ಪ್ರಾರಂಭವಾಗಿದೆ. ಆಡಳಿತ ವ್ಯವಸ್ಥೆ ಇದ್ದ ಸಂದರ್ಭ ಅಡಮಾನ ಸಾಲ ನೀಡುವ ಜವಾಬ್ದಾರಿ ಅಧ್ಯಕ್ಷರದ್ದಾಗಿತ್ತು. ಈಗ ಅಧಿಕಾರಿಗಳ ಕೈಯಲ್ಲಿಯೇ ಇದೆ. ಆದರೆ ಈ ಎಪಿಎಂಸಿಯಿಂದ ಗೇಟ್ಪಾಸ್ ಪಡೆದಿರುವ ಸಿಬಂದಿಯೋರ್ವ ಒಂದಷ್ಟು
ಆಟ’ವಾಡಿರುವ ಕಾರಣ ರೈತರ ಅರ್ಜಿಗೆ ಆಡಳಿತಾಧಿಕಾರಿ ಸಹಿ ಬೇಕಾಗಿದೆ.
ಪ್ರಸ್ತುತ ಆಡಳಿತಾಧಿಕಾರಿ ಪುತ್ತೂರು ತಹಶೀಲ್ದಾರ್ ಆಗಿದ್ದು, ಚುನಾವಣೆಯ ಹಿನ್ನಲೆಯಲ್ಲಿ ಹೆಚ್ಚು ಒತ್ತಡ ಇರುವ ಕಾರಣ ಎಪಿಎಂಸಿ ಬಗ್ಗೆ ಸಂಪೂರ್ಣ ದೃಷ್ಟಿ ಇಡಲು ಕಷ್ಟಸಾಧ್ಯವಾಗಿತ್ತು. ಈ ಕಾರಣದಿಂದ ಅಡಿಕೆ ಅಡಮಾನ ಸಾಲಕ್ಕೆ ಬಂದ ಅರ್ಜಿಗಳ ವಿಲೇವಾರಿ ತಡವಾಗುತ್ತಿದೆ. ರೈತರು ತಮ್ಮ ಸೌಲಭ್ಯ ಪಡೆಯುವಲ್ಲಿ ಸಮಸ್ಯೆ ಉಂಟಾಗುತ್ತಿದೆ.

ಈ ಹಿಂದೆ ಪುತ್ತೂರು ಎಪಿಎಂಸಿ ಪ್ರಭಾರ ಕಾರ್ಯದರ್ಶಿಯಾಗಿದ್ದ ಪ್ರಸ್ತುತ ಸೇವೆಯಿಂದ ಅಮಾನತು ಗೊಂಡಿರುವ ಸಿಬಂದಿಗೆ ಮಾಡಿರುವ ಕಿತಾಪತಿಯೇ ಈ ಅಡಮಾನ ಸಾಲದ ಅಜಿ ವಿಲೇವಾರಿಗೆ ತೊಡಕಾಗಿದೆ. ಎಪಿಎಂಸಿಯಲ್ಲಿ ಕೆಲಸ ಮಾಡುವ ಸಿಬಂದಿಗಳು ಅಡಿಕೆ ಗುಣಮಟ್ಟವನ್ನು ನೋಡದೆ ಅಡಮಾನ ಇಡಲಾಗುತ್ತಿದೆ. ಇದರಿಂದ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಆಡಳಿತಾಧಿಕಾರಿಯಲ್ಲಿ ಆರೋಪ ಮಾಡಿರುವ ಕಾರಣ, ಅಡಮಾನ ಸಾಲ ವಿಳಂಬಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಪುತ್ತೂರು ಎಪಿಂಎಸಿಯಲ್ಲಿ ರೈತರಿಗೆ ನೀಡಲಾದ ಯಾವುದೇ ಸೌಲಭ್ಯಗಳಿಂದ ಯಾವುದೇ ರೈತರು ವಂಚನೆಗೊಳಗಾಗಬಾರದು. ಯಾವುದೇ ಸಿಬಂದಿಗಳ ನಡುವಿನ ಸಮಸ್ಯೆಯಿಂದ ರೈತರಿಗೆ ಸಂಕಷ್ಟ ಉಂಟಾಗಬಾರದು. ಕಾನೂನು ಪ್ರಕಾರ ಇಲ್ಲಿನ ವ್ಯವಸ್ಥೆಯನ್ನು ಸುಧಾರಿಸುವ ಹಿನ್ನಲೆಯಲ್ಲಿ ಶುಕ್ರವಾರ ಪುತ್ತೂರು ಕಚೇರಿಗೆ ಭೇಟಿ ನೀಡಿ, ಅಡಿಟ್ ವ್ಯವಸ್ಥೆ ಮಾಡಿಸಿ ಅಲ್ಲಿರುವ ಕೊರತೆಗಳನ್ನು ನೀಗಿಸುವ ಪ್ರಯತ್ನ ಮಾಡುತ್ತೇನೆ. ಇಲ್ಲಿನ ಅಧಿಕಾರಿ ಹಾಗೂ ಸಿಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ವ್ಯವಸ್ಥೆ ಸರಿಪಡಿಸಿಕೊಳ್ಳುವಂತೆ ತಿಳಿಸಿದ್ದೇನೆ. ಸಾರ್ವಜನಿಕ ವ್ಯವಸ್ಥೆಯಲ್ಲಿ ಇಲ್ಲಿನ ವರ್ತಕರು ಹಾಗೂ ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವ ರೀತಿಯಲ್ಲಿ ಆಡಳಿತ ಸುಧಾರಣೆ ನಡೆಸಲು ತೀರ್ಮಾನಿಸಿದ್ದೇನೆ.

ಅಮಾನತುಗೊಂಡಿರುವ ಸಿಬಂದಿ ಪುತ್ತೂರು ಎಂಪಿಎಸಿ ವಿಚಾರದಲ್ಲಿ ಸುಮ್ಮನೆ ಕೈಯಾಡಿಸದಂತೆ ಸೂಕ್ತ ಎಚ್ಚರಿಕೆ ನೀಡಿದ್ದೇನೆ ಎಂದು ಪುತ್ತೂರು ತಹಶೀಲ್ದಾರ್ ಹಾಗೂ ಪುತ್ತೂರು ಎಪಿಎಂಸಿ ಆಡಳಿತಾಧಿಕಾರಿ ಕುಂಞ ಅಹಮ್ಮದ್ ಮಾಧ್ಯಮಕ್ಕೆ ಮಾಹಿತಿ ನೀಡಿದರು.
