ಧರ್ಮಜಾಗೃತಿಯಿಂದ ಹಿಂದುತ್ವಕ್ಕೆ ಶಕ್ತಿ ಕೊಡುವ ಕಾರ್ಯ ಆಗಬೇಕು:ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿಕೆ

ಉಳ್ಳಾಲ: ದೇವಸ್ಥಾನಗಳ ಮುಖಾಂತರ ಧರ್ಮಕೇಂದ್ರದ ಚಟುವಟಿಕೆಗಳು ಹಾಗೂ ಧರ್ಮಜಾಗೃತಿಯ ಮುಖೇನ ಹಿಂದುತ್ವಕ್ಕೆ ಶಕ್ತಿ ಕೊಡುವ ಕಾರ್ಯಗಳಾಗಬೇಕಿದೆ ಎಂದು ಸಂಸದ ಕ್ಯಾ.ಬೃಜೇಶ್ ಚೌಟ ಅಭಿಪ್ರಾಯಪಟ್ಟರು.
ತಲಪಾಡಿ ದೇವಿಪುರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ತನ್ನ ಕುಟುಂಬದ ದೊಡ್ಡಮನೆಗೆ ನೂತನ ಸಂಸದರಾಗಿ ಆಯ್ಕೆಗೊಂಡು ಆಶೀರ್ವಾದ ಪಡೆಯಲು ಬಂದವರು ತಲಪಾಡಿ ದೇವಸ್ಥಾನದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಶೇ. 30% ಮುಸಲ್ಮಾನರಿದ್ದು, ಜಿಲ್ಲೆಯ ಹಿಂದೂಗಳು ಅನೇಕ ಸವಾಲುಗಳನ್ನು ಎದುರಿಸುವ ಸ್ಥಿತಿಯಲ್ಲಿದ್ದಾರೆ. ದ.ಕ ಜಿಲ್ಲೆಯಲ್ಲಿ ಜಾತಿಮೀರಿ ದೇವಸ್ಥಾನಗಳಲ್ಲಿ ಎಲ್ಲರೂ ಒಗ್ಗಟ್ಟಾಗುತ್ತಾರೆ. ಆದರೆ ಹಿಂದೂ ಸಮಾಜದ ವಿವಿಧ ಸಮುದಾಯ ವನ್ನು ಈಗಲೂ ದೇವಸ್ಥಾನಗಳಿಂದ ದೂರವಿಡುವ ಪರಿಪಾಠ ಬೇರೆ ಜಿಲ್ಲೆಗಳಲ್ಲಿ ನಡೆಯುತ್ತಿರುವುದು ಹಿಂದುತ್ವಕ್ಕೆ ಮಾಡುತ್ತಿರುವ ಅನ್ಯಾಯ ಎಂದರು

ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ,ಉಳ್ಳಾಲದಲ್ಲಿ 64,000 ಮತ ಸಂಸದರಿಗೆ ಬಿದ್ದಿರುವುದು ಇದೇ ಮೊದಲ ಬಾರಿ. ಬೃಜೇಶ್ ಅವರು ನಮ್ಮ ಊರಿನ ತಲಪಾಡಿಯ ಸಂಸದ ಎಂಬ ಹೆಮ್ಮೆಯಿದೆ. ಆಡಳಿತಾತ್ಮಕ ವಾಗಿ ಇಡೀ ಜಿಲ್ಲೆಯ ಅಧ್ಯಯನ ಹಾಗೂ ಅಭಿವೃದ್ಧಿ ಉದ್ದೇಶ ಹೊಂದಿರುವ ಸಂಸದರ ಕಾರ್ಯಗಳಿಗೆ ಉತ್ತೇಜಿಸಿರಿ ಎಂದರು.
ಈ ಸಂದರ್ಭ ಮಂಗಳೂರು ಮಂಡಲ ಪ್ರಭಾರ ಅಧ್ಯಕ್ಷ ಹೇಮಂತ್ ಶೆಟ್ಟಿ ದೇರಳಕಟ್ಟೆ, ಜಿಲ್ಲಾ ಬಿಜೆಪಿ ಯುವಮೋರ್ಚ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಮಂಡಲ ಉಪಾಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಹಿರಿಯ ಶ್ರೀನಿವಾಸ ನೆಲ್ಲಿತ್ತಾಯ, ಗಣೇಶ್ ಭಟ್, ತಲಪಾಡಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಮೋಹನ್ ದಾಸ್ ರೈ ಸಾಂತ್ಯಗುತ್ತು ಮತ್ತಿತರರು ಉಪಸ್ಥಿತರಿದ್ದರು.
