HomeFresh Newsವಿದ್ಯಾರ್ಥಿಗಳಿಗೆ ಅಂಕದ ಹುಚ್ಚು ಬಿಡಿಸಿ, ಪುಸ್ತಕದ ಹುಚ್ಚು ಹಿಡಿಸಿ: ಡಾ. ಶಿಕಾರಿಪುರ ಕೃಷ್ಣಮೂರ್ತಿ

ವಿದ್ಯಾರ್ಥಿಗಳಿಗೆ ಅಂಕದ ಹುಚ್ಚು ಬಿಡಿಸಿ, ಪುಸ್ತಕದ ಹುಚ್ಚು ಹಿಡಿಸಿ: ಡಾ. ಶಿಕಾರಿಪುರ ಕೃಷ್ಣಮೂರ್ತಿ

ದ.ಕ.ಜಿಲ್ಲಾ ಸಾಹಿತ್ಯ ಪರಿಷತ್ ನ ತಾಲೂಕು ಘಟಕದ ಆಶ್ರಯದಲ್ಲಿ, ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮತ್ತು ಮಂಗಳೂರು ಲಯನ್ಸ್ ಮತ್ತು ಲಿಯೋ ಕ್ಲಬ್ ಸಹಕಾರದಲ್ಲಿ, ಶಿಕ್ಷಕರ ದಿನಾಚರಣೆ ಮತ್ತು ಶಿಕ್ಷಕರಿಗೆ ಸಂಮಾನ ಕಾರ್ಯಕ್ರಮ ನಂತೂರು ಪದುವ ಶ್ರೀ ಭಾರತೀ ಕಾಲೇಜಿನ ಶ್ರೀ ಶಂಕರಶ್ರೀ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆಯಿತು.

ಲಯನ್ಸ್ ಕ್ಲಬ್ ಮಂಗಳೂರು ಅಧ್ಯಕ್ಷ ಲ. ಶೀನ ಪೂಜಾರಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ನಮ್ಮ ರಾಷ್ಟ್ರಪತಿ ಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣ ರವರ ಜನ್ಮದಿನವನ್ನು ಶಿಕ್ಷಕರ ದಿನವಾಗಿ ಆಚರಿಸಲಾಗುತ್ತಿದೆ. ಸ್ವತಃ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ರಾಧಾಕೃಷ್ಣನ್ ನವರು ತಮಗೆ ಜನ್ಮದಿನದ ಸಂಭ್ರಮದ ಬದಲು, ಅದನ್ನು ಶಿಕ್ಷಕರ ದಿನವಾಗಿ ಆಚರಿಸುವಂತೆ ಕರೆ ನೀಡಿ, ಶಿಕ್ಷಕರ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ತಿಳಿಸಿದರು.

ನಿವೃತ್ತ ಪ್ರಾಧ್ಯಾಪಕ, ಡಾ. ಶಿಕಾರಿಪುರ ಕೃಷ್ಣಮೂರ್ತಿ, ಮಕ್ಕಳಿಗೆ ಪುಸ್ತಕದ ಹುಚ್ಚು ಹಿಡಿಸಿ, ಅಂಕದ ಹುಚ್ಚು ಬಿಡಿಸಿ, ಕೇವಲ ಅಂಕ ಗಳಿಕೆ ಬುದ್ಧಿವಂತಿಕೆಯ ಮಾನದಂಡವಲ್ಲ, ಬದಲಿಗೆ ಅವರ ಕ್ರಿಯಾಶೀಲತೆಯನ್ನು, ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಕಲಿಸಿ, ಸ್ವತಃ ಶಿಕ್ಷಕರು ಇದನ್ನು ಬೆಳೆಸಬೇಕಾಗಿದೆ ಎಂದು,”ಇಂದಿನ ಶಿಕ್ಷಣ ವ್ಯವಸ್ಥೆ” ಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ದ.ಕ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕೃಷ್ಣ ನೀರಮೂಲೆ ಇವರನ್ನು ಈ ಸಂದರ್ಭದಲ್ಲಿ ಸಂಮಾನಿಸಲಾಯಿತು.ಮಂಗಳೂರಿನ ಒಂದು ಮೂಲೆಯಲ್ಲಿದ್ದರೂ ತುಂಬಾ ಕುಗ್ರಾಮದ ಸ್ಥಿತಿಯಲ್ಲಿದ್ದ ಗೋರಿಗುಡ್ಡೆ ಕಿಟ್ಟೆಲ್ ಮೆಮೋರಿಯಲ್ ಅನುದಾನಿತ ಶಾಲೆಯನ್ನು ತನ್ನಿಂದ ಆದಷ್ಟೂ ಅಭಿವೃದ್ಧಿ ಪಡಿಸಿದ್ದೇನೆ, ಇದನ್ನು ಗುರುತಿಸಿ, ಈ ಸಲದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿದ್ದಾರೆ ಎಂದು, ಕೃಷ್ಣ ನೀರಮೂಲೆ ತನ್ನನ್ನು ಕರೆದು ಗೌರವಿಸಿದ ಕನ್ನಡ ಸಾಹಿತ್ಯ ಪರಿಷತ್ ಮತ್ತು ಜಂಟಿ ಸಂಸ್ಥೆಗಳಿಗೆ ವಂದನೆ ಸಲ್ಲಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ್ ಎಸ್. ರೇವಣ್ ಕರ್ ಅಧ್ಯಕ್ಷತೆ ವಹಿಸಿದ್ದರು.
ಶ್ರೀಮತಿ ಉಷಾ ಜಿ. ಪ್ರಸಾದ್ ಪ್ರಾರ್ಥನೆಗೈದರು.ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಮುರಲೀ ಮೋಹನ್ ಚೂಂತಾರು ಸ್ವಾಗತಿಸಿ, ಪ್ರಸ್ತಾವನೆಗೈದರು.ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ಸಂಮಾನಿತರ ಪರಿಚಯಗೈದರು.ರೇಖಾ ಶಂಕರ್ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ವಂದಿಸಿದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments