ಮೂಡುಬಿದಿರೆ: ಶತಾಯುಷಿ , ಹಿರಿಯ ಗಮಕಿ ವಿದ್ವಾನ್ ಬಿ. ಚಂದ್ರಯ್ಯ ಅವರ ಪತ್ನಿ ಶ್ರೀಮತಿ ಎನ್. ಸರೋಜಿನಿ ಚಂದ್ರ ಯ್ಯ ( 92ವ)ಬೆಂಗಳೂರಿನ ಡಾಲರ್ಸ್ ಕಾಲನಿಯಲ್ಲಿರುವ ತಮ್ಮ ಪುತ್ರನ ನಿವಾಸದಲ್ಲಿ ನಿಧನ ಹೊಂದಿದರು. ಅವರು ಪತಿ ಬಿ. ಚಂದ್ರಯ್ಯ ಸಹಿತ ಓರ್ವ ಪುತ್ರ ಹಾಗೂ ಈರ್ವರು ಪುತ್ರಿಯರನ್ನು ಅಗಲಿದ್ದಾರೆ.
ಮೂಲತಃ ಬಂಟ್ವಾಳ ತಾಲೂಕಿನ ನಂದಾವರದವರಾದ ಸರೋಜಿನಿಯವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎನ್. ಉಪೇಂದ್ರ ನಾಯಕ್ ಮತ್ತು ಭವಾನಿ ಅಮ್ಮನವರ ಹಿರಿಯ ಸುಪುತ್ರಿ. 1933ರಲ್ಲಿ ಕೇರಳದ ಕಣ್ಣೂರಿನಲ್ಲಿ ಜನಿಸಿದ ಇವರು 1954ರಲ್ಲಿ ಚಂದ್ರಯ್ಯ ಅವರನ್ನು ವಿವಾಹವಾದ ಬಳಿಕ ಪತಿಯ ಸಾಹಿತ್ಯ ಕೃಷಿಗೆ ಬೆನ್ನೆಲುಬಾಗಿ ನಿಂತವರು. ನಿರಂತರ ಸಾಹಿತ್ಯದ ಓದಿನ ಮೂಲಕ ಗಮನ ಸೆಳೆದ ಅವರು ಉತ್ತಮ ಪಾಕ ತಜ್ಞೆಯಾಗಿ ಸ್ನೇಹಮಯಿ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದರು. ಶತಾಯುಷಿ ಪತಿ ಚಂದ್ರಯ್ಯ ಅವರಿಗೆ ಸಾಹಿತ್ಯ ಸಾಧನೆಗಾಗಿ ಶುಕ್ರವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ 2024 ರ ಸಾಲಿನ ಚಾವುಂಡರಾಯ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳುವ ಉತ್ಸಾಹದಿಂದ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಪ್ರಶಸ್ತಿ ಪ್ರದಾನದ ಮುನ್ನಾ ದಿನವೇ ಅವರು ಇಹ ಲೋಕ ತ್ಯಜಿಸಿದ್ದಾರೆ. ಪ್ರಶಸ್ತಿ ಘೋಷಣೆಯ ಹಿನ್ನೆಲೆಯಲ್ಲಿ ವಾರದ ಹಿಂದ ಚಂದ್ರಯ್ಯ ಅವರ ನಿವಾಸದಲ್ಲಿ ದಂಪತಿಯನ್ನು ಗೌರವಿಸಿ ಹರಸಿದ್ದ ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಶ್ರೀಯವರು ಎನ್. ಸರೋಜಿನಿ ಚಂದ್ರ ಯ್ಯ ಅವರ ಅಗಲಿದ ಆತ್ಮಕ್ಕೆ ಸದ್ಗತಿ ಪ್ರಾರ್ಥನೆ ಸಲ್ಲಿಸಿದ್ದಾರೆ.


