“ದೇವತಾ” ಕಲಾ ಪ್ರದರ್ಶನ : ಡಾ. ಎಂ ಮೋಹನ್ ಆಳ್ವರಿಂದ ಉದ್ಘಾಟನೆ

“ದೇವತಾ” ವಿಭಿನ್ನ ಕಲಾ ಪ್ರದರ್ಶನ ಮೇ 26 ರಿಂದ 28 ರವರೆಗೆ ಅದಿತಿ ಗ್ಯಾಲರಿನಲ್ಲಿ ಪ್ರದರ್ಶನಗೊಳ್ಳಲಿದ್ದು, ಈ ಪ್ರಯುಕ್ತ ಮೇ 25, 2023 ರ ಗುರುವಾರದಂದು ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಅದಿತಿ ಗ್ಯಾಲರಿನಲ್ಲಿ ಜರುಗಿತ್ತು. ಮೂಡುಬಿದರೆಯ ಆಳ್ವಾಸ್ ಫೌಂಡೇಶನ್ ಅಧ್ಯಕ್ಷರಾದ ಡಾ. ಎಂ ಮೋಹನ್ ಆಳ್ವರವರು ಕಲಾವಿದೆ ಪ್ರವೀಣಾ ಮೋಹನ್ ಅವರ ಆಕ್ರಿಲಿಕ್ ಕಲಾಕೃತಿಗಳ ಪ್ರದರ್ಶನ “ದೇವತಾ” ವಿದ್ಯುಕ್ತವಾಗಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇವ ದೇವತೆಯರಿಗೆ ಸು ಸ್ವರೂಪ ನೀಡುವ ಸ್ವಾತಂತ್ರ್ಯ ಎಲ್ಲ ಕಲಾವಿದರಿಗಿದೆ. ಆದರೆ ಮುಂದಿನ ಪೀಳಿಗೆಗೆ ಈ ಕಲೆಯನ್ನು ಹಸ್ತಾಂತರಿಸುವ ಜವಾಬ್ದಾರಿಯು ಅವರಿಗಿದೆ ಎಂದು ತಮ್ಮ ಅಭಿಪ್ರಾಯವನ್ನಿಟ್ಟರು ಮತ್ತು ಕಲಾವಿದೆ ಪ್ರವೀಣಾ ಮೋಹನ್ ಅವರದ್ದು ಸಾಂಪ್ರದಾಯಿಕ ಶೈಲಿಯ ಅದ್ಭುತ ಕಲಾ ವಿನ್ಯಾಸ. ಮಾತನಾಡುವ ರೇಖೆಗಳು ದೇವತೆಗಳ ಚಿತ್ರಕ್ಕೆ ನ್ಯಾಯ ಒದಗಿಸಿದೆ ಎಂದರು.
ಉಜ್ವಲ್ ಸಮೂಹದ ಆಡಳಿತ ನಿರ್ದೇಶಕರಾದ ಅಜೆಯ್ ಪಿ ಶೆಟ್ಟಿ ಮಾತನಾಡಿ, ಸನಾತನ ವಿಚಾರಧಾರೆಗಳ ಎಂದಿಗೂ ಪ್ರಸ್ತುತ. ಈ ಬಗ್ಗೆ ತರುಣ ಪೀಳಿಗೆ ಚಿಂತನೆ ನಡೆಸಬೇಕೆಂದರು. ನಂತರ ಮಂಗಳೂರಿನ ಲ್ಯಾಮಿನ್ ಫ್ರೇಮ್ಸ್ ನ ಮಾಲಕರಾದ ನರೇಂದ್ರ ಶೆಣೈ ಸ್ಮರಿಣಿಕೆ, ಸ್ಟಿಕ್ಕರ್ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಕಲಾವಿದೆ ಪ್ರವೀಣಾ ಮೋಹನ್ ಉಪಸ್ಥಿತರಿದ್ದರು. ಗ್ಯಾಲರಿಯ ಆಡಳಿತ ವಿಶ್ವಸ್ಥರಾದ ಡಾ. ಕಿರಣ್ ಆಚಾರ್ಯ ಸ್ವಾಗತಿಸಿ, ವಿದುಷಿ ಪ್ರತಿಮಾ ಆಚಾರ್ಯ ವಂದಿಸಿದರು. ಗ್ಯಾಲರಿಯ ಮತ್ತೋರ್ವ ವಿಶ್ವಸ್ಥ ಆಸ್ಟ್ರೊ ಮೋಹನ್ ಕಾರ್ಯಕ್ರಮ ನಿರೂಪಿಸಿದರು.
“ದೇವತಾ” ಕಲಾ ಪ್ರದರ್ಶನವು ಮೇ 25 ರಿಂದ ಮೇ 28 ರವರೆಗೆ ಕುಂಜಿಬೆಟ್ಟಿನ ಅದಿತಿ ಆರ್ಟ್ ಗ್ಯಾಲರಿಯಲ್ಲಿ ಬೆಳಗ್ಗೆ 11 ಗಂಟೆಯಿಂದ ಸಂಜೆ 7 ಗಂಟೆ ತನಕ ಜರುಗಲಿದೆ.
