ಹುಬ್ಬಳ್ಳಿಯಲ್ಲಿ ಐಟಿಐನಲ್ಲಿ ಕಲಿಯುತ್ತಿದ್ದ ಯುವಕನೊಬ್ಬ ಬಸ್ಸಿನಲ್ಲಿ ಹೋಗುವಾಗ ಕಿಟಕಿಯಲ್ಲಿ ತಲೆ ಹೊರಗೆ ಹಾಕಿದ್ದಾಗ, ಟಿಪ್ಪರ್ ಒಂದು ಬಂದು ಬಡಿದು ಆತನ ತಲೆ ತೆಗೆದಿದೆ.
ಅನಿರೀಕ್ಷಿತ ದುರಂತ ಅಂತ್ಯ ಕಂಡ ಯುವಕ ಹದಿನೆಂಟರ ಪ್ರಾಯದ ಪಕೀರಯ್ಯ ಚನ್ನಯ್ಯ ಮುತ್ತಳ್ಳಿಮಠ. ಈತನು ಶಿರೂರು ಗ್ರಾಮದವನು; ಹುಬ್ಬಳ್ಳಿಯಲ್ಲಿ ಐಟಿಐ ಮಾಡುತ್ತಿದ್ದ. ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರ ಕಡೆಗೆ ಹೋಗುವ ಬಸ್ಸಿನಲ್ಲಿ ಹಿಂಬದಿ ಆಸನದಲ್ಲಿ ಕುಳಿತಿದ್ದ ಆತ ನಿಯಮ ಬಾಹಿರವಾಗಿ ಕಿಟಕಿಯಿಂದ ತಲೆ ಹೊರಗೆ ಹಾಕಿದ್ದ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸೆರೆವಾಡ ಗ್ರಾಮದ ಸಮೀಪ ಬುಧವಾರ ಸಂಜೆ ಈ ದುರಂತ ನಡೆದಿದೆ. ವೇಗವಾಗಿ ಬಂದ ಟಿಪ್ಪರ್ ಮುಂದೆ ಹೋಗುವ ಆತುರದಲ್ಲಿ ಯುವಕನ ತಲೆಯನ್ನು ಕತ್ತರಿಸಿಕೊಂಡು ಹೋಗಿದೆ.

ಕೂಡಲೆ ಬಸ್ ನಿಲ್ಲಿಸಿದ ಓಡಿಸುವವನು ಕುಂದಗೋಳ ಪೋಲೀಸರಿಗೆ ಮಾಹಿತಿ ನೀಡಿದ್ದಾನೆ. ಪೋಲೀಸರು ಸ್ಥಳಕ್ಕೆ ಬಂದು ಮಹಜರು ನಡೆಸಿದರು ಮತ್ತು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ಟಿಪ್ಪರ್ಗಾಗಿ ಹುಡುಕಾಟ ನಡೆದಿದೆ.

