ಮೂಡುಬಿದಿರೆ : ಇಲ್ಲಿನ ಸ್ವರಾಜ್ಯ ಮೈದಾನದ ಬಳಿ ಇರುವ ಮಾರಿಗುಡಿಗೆ ನುಗ್ಗಿ ಗದ್ದುಗೆ ಮಂಟಪದಲ್ಲಿದ್ದ ಮೂರು ಕಾಣಿಕೆ ಡಬ್ಬಗಳನ್ನು ಕಳವುಗೈದಿರುವ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಬಂಧಿಸಿ ಶನಿವಾರ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಹೆಜಮಾಡಿಯ ಕೊಕ್ರಾಣಿ ಗ್ರಾಮದ ಕಕ್ವಾ ನಿವಾಸಿ ವಿಜಯ ಯಾನೆ ಕೊಕ್ರಾಣಿ ವಿಜಯ್ ಬಂಧಿತ ಆರೋಪಿ. ಈತ ಜ.15ರಂದು ರಾತ್ರಿ ಮೂಡುಬಿದಿರೆಯ ಮಾರಿಗುಡಿಗೆ ಪ್ರವೇಶಿಸಿ ಕಾಣಿಕೆ ಡಬ್ಬಿಗಳನ್ನು ಕಳವುಗೈದಿದ್ದ ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾಣಿಕೆ ಡಬ್ಬಿಗಳಲ್ಲಿ ಸುಮಾರು 40,000ದಷ್ಟು ನಗದು ಇತ್ತೆನ್ನಲ್ಲಾಗಿದೆ. ಆದರೆ ಆರೋಪಿಯು ಡಬ್ಬಿಯಲ್ಲಿ 17,000 ಮಾತ್ರ ಇತ್ತು ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಈತನ ವಿರುದ್ಧ ಈ ಹಿಂದೆ ಬೇರೆ ಬೇರೆ ಠಾಣೆಗಳಲ್ಲಿ ಕಳ್ಳತನದ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ.
