ಮೂಡುಬಿದಿರೆ: ಬೈಲ ಕುರಲ್ ಖ್ಯಾತಿಯ “ಭಾಷಾ” ಇನ್ನಿಲ್ಲ

ಮೂಡುಬಿದಿರೆ: ಕಳೆದ ಮೂರು ದಶಕಗಳಿಂದ ನಾಟಕ ರಂಗದಲ್ಲಿ ವಿವಿಧ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ತುಳು ನಾಟಕ ಕಲಾವಿದ ಬೈರ ಕುರಲ್ ಖ್ಯಾತಿಯ “ಭಾಷಾ” ವಸಂತ್ ಶೆಟ್ಟಿ ತೋಡಾರು ಅವರು ಅನಾರೋಗ್ಯದಿಂದ ಭಾನುವಾರ ನಿಧನರಾಗಿದ್ದಾರೆ.
ತೋಡಾರು ಗಗನ್ ನಿವಾಸದ ಸುಂದರ ಶೆಟ್ಟಿ ಅವರ ಪುತ್ರ ವಸಂತ ಶೆಟ್ಟಿ(52) ಕಳೆದ ಮೂರು ವರುಷಗಳಿಂದ ಅನಾರೋಗ್ಯವನ್ನು ಹೊಂದಿದ್ದರು.
ಸುರೇಂದ್ರ ಕುಮಾರ್ ಕಲತ್ರಪಾದೆ ಅವರ ರಚನೆಯ ಅತ್ಯುತ್ತಮ ನಾಟಕ ಬೈರ ಕುರಲ್ ನಲ್ಲಿ “ಭಾಷಾ” ಎಂಬ ಹೆಸರಿನೊಂದಿಗೆ ಖಳನಾಯಕನಾಗಿ ಹೆಸರು ಮಾಡಿದ ವಸಂತ್ ಶೆಟ್ಟಿ ಅವರು ನಂತರ ತುಳು ರಂಗಭೂಮಿಯ ಪ್ರತಿಭಾನ್ವಿತ ಕಲಾವಿದನಾಗಿ ಬೆಳೆದು ಬಂದಿದ್ದರು.

ತೋಡಾರು ಬಂಗಬೆಟ್ಟು ಶಾಲೆಯಲ್ಲಿ ೫ ನೇ ತರಗತಿಯಲ್ಲಿರುವಾಗಲೇ ನಾಟಕದಲ್ಲಿ ಅಭಿನಯಿಸಿ ನಾಟಕ ರಂಗದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಓದು ಮುಗಿಸಿದ ಬಳಕ ಅವರು ತುಳು ನಾಟಕಗಳಲ್ಲಿ ತೊಡಗಿಸಿಕೊಂಡರು. ‘ಯಶಸ್ವಿ ಕಲಾವಿದೆರ್’ ಮಂಗಳೂರು ತಂಡದ ಸದಸ್ಯರಾಗಿ ಕೆಲವು ನಾಟಕಗಳಲ್ಲಿ ಅಭಿನಯಿಸಿದ್ದರು.
ನಂತರ ‘ನಮ್ಮ ಕಲಾವಿದೆರ್ ಬೆದ್ರ’ ತಂಡಕ್ಕೆ ಸೇರ್ಪಡೆಯಾಗಿ ಜಿಲ್ಲೆಯಾದ್ಯಂತ ಅನೇಕ ತುಳು ನಾಟಕಗಳಲ್ಲಿ ಅಭಿನಯಿಸಿ ಯಶಸ್ವಿ ನಟರಾಗಿ ಬೆಳೆದು ಬಂದರು. ‘ಬೈಲ ಕುರಲ್’, ‘ಮೇಘ ಮುರಾರಿ’, ‘ದೇವರ್ ಮುನಿಂಡ’, ‘ದೇವರ್ ಕೈಬುಡ್ನಗೆ’ ಇವರು ಅಭಿನಯಿಸಿದ ಜನಪ್ರಿಯ ತುಳು ನಾಟಕಗಳು. ಖಳನಾಯಕನ ಪಾತ್ರದ ಮೂಲಕ ಜನಮನ್ನಣೆ ಪಡೆದಿದ್ದ ಅವರು ನಾಯಕ ನಟರಾಗಿ, ಪೋಷಕ ನಟರಾಗಿ ಹಾಗೂ ಹಾಸ್ಯ ಕಲಾವಿದರಾಗಿಯೂ ಅಭಿನಯಿಸಿ ವಿಭಿನ್ನ ಪಾತ್ರಗಳಿಗು ಸೈ ಅನ್ನಿಸಿಕೊಂಡಿದ್ದರು. ಕನ್ನಡ ಟಿ.ವಿ ವಾಹಿನಿಯಲ್ಲಿ ಪ್ರಸಾರಾವಾದ ‘ಗೊತ್ತಾನಗ ಪೊರ್ತಾಂಡ್’ ತುಳು ಧಾರವಾಹಿಯಲ್ಲೂ ಅಭಿನಯಿಸಿದ್ದರು. ತುಳು ರಂಗಭೂಮಿಯಲ್ಲಿ ಸುಮಾರು ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ವಸಂತ ಶೆಟ್ಟಿ ಎಲ್ಲಾ ಪಾತ್ರಗಳಿಗೂ ಜೀವ ತುಂಬಿದವರು. ಎಡಪದವಿನ ರೆಸ್ಟೋರೆಂಟ್ ಒಂದರಲ್ಲಿ ಸುಮಾರು 20 ವರ್ಷ ಕೆಲಸ ಮಾಡಿದ್ದು ನಂತರ ಮೂಡುಬಿದಿ ರೆಯಲ್ಲಿ ಶಿಕ್ಷಣ ಸಂಸ್ಥೆಯೊಂದರ ಕ್ಯಾಂಟೀನಲ್ಲು ಕೆಲಸ ಮಾಡಿದ್ದರು.
ಅನಾರೋಗ್ಯ ನಿಮಿತ್ತ ಒಂದು ವರ್ಷದಿಂದ ಮನೆಯಲ್ಲಿ ಇದ್ದರು. ಅವರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳಿದ್ದಾರೆ.

Related Posts

Leave a Reply

Your email address will not be published.