HomeFresh Newsವಂಚಕ ಕಂಪೆನಿಗಳು ಜನರನ್ನು ದೋಚಲು ಸರಕಾರಗಳ ನೀತಿಗಳೇ ಕಾರಣ - ಮುನೀರ್ ಕಾಟಿಪಳ್ಳ

ವಂಚಕ ಕಂಪೆನಿಗಳು ಜನರನ್ನು ದೋಚಲು ಸರಕಾರಗಳ ನೀತಿಗಳೇ ಕಾರಣ – ಮುನೀರ್ ಕಾಟಿಪಳ್ಳ

ಜನಸಾಮಾನ್ಯರ ಮುಗ್ದತೆ, ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ವಂಚಿಸುವ ಹಣಕಾಸು, ಮಾರ್ಕೆಟಿಂಗ್, ಚೈನ್ ಲಿಂಕ್, ಸ್ಕೀಮ್ ಕಂಪೆನಿಗಳು ಕಾನೂನಿನ ಭಯವಿಲ್ಲದೆ ದಿನಕ್ಕೊಂದರಂತೆ ಮಂಗಳೂರು ನಗರದಲ್ಲಿ ತಲೆ ಎತ್ತುತ್ತಿವೆ. ಇಂತಹ ಕಂಪೆನಿಗಳ ವೈಭವೋಪೇತ ಕಾರ್ಯಕ್ರಮಗಳಲ್ಲಿ ರಾಜಕೀಯ ನೇತಾರರು, ಧಾರ್ಮಿಕ ಕ್ಷೇತ್ರದ ಗಣ್ಯರು ಮುಂದಾಲೋಚನೆ ಇಲ್ಲದೆ ಕಾಣಿಸಿಕೊಳ್ಳುವುದು ವಂಚಕ ಕಂಪೆನಿಗಳಿಗೆ ಜನಸಾಮಾನ್ಯರ ನಡುವೆ ವಿಶ್ವಾಸಾರ್ಹತೆಯನ್ನು ಗಳಿಸಲು ಸಹಾಯ ಮಾಡುತ್ತದೆ‌. ಇಂತಹ ಕಂಪೆನಿಗಳು ಬಾಗಿಲು ಮುಚ್ಚಿ ಪರಾರಿಯಾಗುವವರೆಗೆ ಕಾನೂನು ಜಾರಿ ಸಂಸ್ಥೆಗಳು ಸಕ್ರಿಯಗೊಳ್ಳದಿರುವುದು ವಿಷಾದನೀಯ.ಮಾತ್ರವಲ್ಲದೆ ಇಂತಹ ವಂಚನೆಗಳಿಗೆ ಸರಕಾರದ ನೀತಿಗಳೂ ಕೂಡ ಕಾರಣವಾಗಿದೆ. PACL, ಆದೀಶ್ವರ್ ಮುಂತಾದ ಬ್ಲೇಡ್ ಕಂಪೆನಿಗಳಿಂದ ವಂಚನೆಗೊಳಗಾದ ಸಂತ್ರಸ್ತರಿಗೆ ನ್ಯಾಯ ಒದಗಿಸಲು, ವಂಚಕ ಕಂಪೆನಿಗಳ ಜಾಲಕ್ಕೆ ಕಡಿವಾಣ ಹಾಕುವ ನಿಯಮ ರೂಪಿಸಲು ಜಿಲ್ಲೆಯ ಸಂಸದ ಶಾಸಕರು ಮುಂದಾಗಬೇಕಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ರವರು ಹೇಳಿದರು.

PACL ನಿಂದ ವಂಚಿತರಾದ ಸಂತ್ರಸ್ತ ಏಜಂಟರು, ಹೂಡಿಕೆದಾರರ ದ.ಕ.ಜಿಲ್ಲಾ ಸಮಾವೇಶವನ್ನು ಉದ್ಘಾಟಿಸುತ್ತಾ ಅವರು ಈ ಮಾತುಗಳನ್ನು ಹೇಳಿದರು .

ಮುಖ್ಯ ಅತಿಥಿಗಳಾಗಿ DYFI ಜಿಲ್ಲಾ ಅಧ್ಯಕ್ಷರಾದ ಬಿ.ಕೆ.ಇಮ್ತಿಯಾಜ್,CITU ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು, DYFI ಮಂಗಳೂರು ನಗರ ಅಧ್ಯಕ್ಷರಾದ ನವೀನ್ ಕೊಂಚಾಡಿಯವರು ಮಾತನಾಡುತ್ತಾ, ಜನಸಾಮಾನ್ಯರ ಸಂಕಷ್ಟಗಳನ್ನು,ಏಜೆಂಟರ ಬವಣೆಗಳನ್ನು ವಿವರಿಸುತ್ತಾ ಇಂತಹ ಮೋಸದಾಟಗಳನ್ನು ನಿಲ್ಲಿಸಲು ಸರಕಾರಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸಭೆಯ ಅಧ್ಯಕ್ಷತೆಯನ್ನು PACL ಏಜೆಂಟರ ಹೋರಾಟ ಸಮಿತಿಯ ಗೌರವ ಅಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್ ರವರು ವಹಿಸಿದ್ದರು. ವೇದಿಕೆಯಲ್ಲಿ ಹೋರಾಟ ಸಮಿತಿಯ ಮುಖಂಡರಾದ ತೆಲ್ಮಾ ಮೊಂತೆರೋ,ಅಸುಂತ ಡಿಸೋಜ, ಶಾಲಿನಿ ಡಿಸೋಜ, ಜೇಮ್ಸ್ ಪ್ರವೀಣ್,ಜನಾರ್ಧನ ಪುತ್ತೂರುರವರು ಉಪಸ್ಥಿತರಿದ್ದರು.

ಸಮಾವೇಶದಲ್ಲಿ ನೂತನ ಸಮಿತಿಯನ್ನು ಪುನರ್ ರಚಿಸಲಾಯಿತು.ನೂತನ ಅಧ್ಯಕ್ಷರಾಗಿ ಜೇಮ್ಸ್ ಪ್ರವೀಣ್, ಪ್ರಧಾನ ಕಾರ್ಯದರ್ಶಿಯಾಗಿ ತೆಲ್ಮಾ ಮೊಂತೆರೋ, ಖಜಾಂಚಿಯಾಗಿ ಶಾಲಿನಿ ಡಿಸೋಜರವರು ಸರ್ವಾನುಮತದಿಂದ ಆಯ್ಕೆಯಾದರು. ಹಾಗೂ ಗೌರವಾಧ್ಯಕ್ಷರಾಗಿ ಸುನಿಲ್ ಕುಮಾರ್ ಬಜಾಲ್, ಗೌರವ ಸಲಹೆಗಾರರಾಗಿ ಬಿ.ಕೆ.ಇಮ್ತಿಯಾಜ್, ಸಂತೋಷ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ನವೀನ್ ಕೊಂಚಾಡಿಯವರು ಆಯ್ಕೆಗೊಂಡರು.

ಉಪಾಧ್ಯಕ್ಷರಾಗಿ ಅಸುಂತ ಡಿಸೋಜ, ಜನಾರ್ದನ ಪುತ್ತೂರು,ದೇವಿಕಾ, ರಾಮಚಂದ್ರ ಭಟ್,ಜನಾರ್ದನ ಸುಳ್ಯ,ಕಾರ್ಯದರ್ಶಿಗಳಾಗಿ ವಾಯಿಲೆಟ್ ಪಿಂಟೋ, ಯಶೋಧಾ ಬೆಳ್ತಂಗಡಿ, ಮೋಲಿ ಡಿಸೋಜ, ಅರುಣಾ ಕೋಟ್ಯಾನ್, ಸುನೀತಾ ರೋಡ್ರಿಗಸ್ ರವರನ್ನು ಆಯ್ಕೆ ಗೊಳಿಸಲಾಯಿತು. ಕಾರ್ಯಕಾರಿ ಸಮಿತಿಗೆ ಸುಮಾರು 15 ಮಂದಿಯನ್ನು ಆರಿಸಲಾಯಿತು.

vnr gold
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments