ಪುತ್ತೂರು: ಕಾಡಾನೆ ಹಾವಳಿ – ಸ್ಥಳಿಯರಲ್ಲಿ ಆತಂಕ

ಪುತ್ತೂರು : ಕಳೆದೊಂದು ವಾರದಿಂದ ಪಾಲ್ತಾಡಿ ಸವಣೂರು ಭಾಗದಲ್ಲಿ ಬೀಡು ಬಿಟ್ಟಿದ್ದ ಒಂಟಿ ಸಲಗ ಎರಡು ದಿನದ ಹಿಂದೆ ಶಾಂತಿಗೋಡು ಗ್ರಾಮದ ವೀರಮಂಗಲಕ್ಕೆ ದಾಂಗುಡಿ ಇಟ್ಟಿತ್ತು. ಆದರೇ ಇನ್ನಷ್ಟು ಉತ್ತರಾಭಿಮುಖವಾಗಿ ಚಲಿಸಿರುವ ಆನೆ ಮಂಗಳವಾರ ಬೆಳಿಗ್ಗೆ ಉಪ್ಪಿನಂಗಡಿ ಹೋಬಳಿ ಪ್ರವೇಶಿಸಿದೆ. ಜೂ 11 ರಂದು ನಸುಕಿನ ಜಾವ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಪ್ಪಾಡಿ ಬಳಿ ಬಾರ್ತೋಲಿ ಎಂಬ ತೋಟದಲ್ಲಿ ಕಾಣಿಸಿಕೊಂಡಿದೆ.

ಕೆಲವು ತಿಂಗಳುಗಳ ಹಿಂದೆ ಕೊಳ್ತಿಗೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಗದ್ದಲ ಎಬ್ಬಿಸಿದ್ದ ಈ ಆನೆ ಕೇರಳದಿಂದ ಬಂದಿದೆ ಎನ್ನಲಾಗುತ್ತಿದೆ. ಜೂ.3ರಂದು ಪಾಲ್ತಾಡಿ ಗ್ರಾಮದ ಅಸಂತಡ್ಕ,ಖಂಡಿಗೆಗೆ ಆಗಮಿಸಿದ ಆನೆ ಜೂ.4ರಂದು ರಾತ್ರಿ ಮಲೆಮಾಡಾವಿನಲ್ಲಿ ಕೃಷಿಕರ ತೋಟಕ್ಕೆ ನುಗ್ಗಿತ್ತು.
ಜೂ.7ರಂದು ಪುಣ್ಯಪ್ಪಾಡಿ ಗ್ರಾಮದ ಬೆದ್ರಂಪಾಡಿ ಅರಣ್ಯದಲ್ಲಿ ಬೀಡುಬಿಟ್ಟಿದ್ದ ಕಾಡಾನೆ ಪುಪ್ಪಾಡಿ ಗ್ರಾಮದ ಕುಚ್ಚೆಜಾಲು ಮೂಲಕ ಸವಣೂರು ಗ್ರಾಮಕ್ಕೆ ಬಂದಿತ್ತು. ಬಳಿಕ ಅದು ವೀರ ಮಂಗಲದತ್ತ ಪ್ರಯಾಣ ಬೆಳೆಸಿ ಜೂ 10ರಂದು ಶಾಂತಿಗೋಡು ತಲುಪಿತ್ತು. ಇದೀಗ ಅಲ್ಲಿಂದ ಹೊಳೆ ಬದಿಯಿಂದಲೇ ಸಾಗಿ, ಬೆಳ್ಳಿಪ್ಪಾಡಿ ಗ್ರಾಮದ ಕಟಾರ ಎಂಬಲ್ಲಿಗೆ ತಲುಪಿದೆ. ಸದ್ಯ ಆನೆ ಕೊಡಿಮರದಲ್ಲಿದೆ ಎನ್ನಲಾಗಿದೆ.
