ಸಕಲೇಶಪುರ: ಚಿನ್ನದ ಸರ ಕಳವು ಪ್ರಕರಣ ; ಗದಗ ಮೂಲದ ಸೈಯದ್ ಅಲಿ ಬಂಧನ

ಸಕಲೇಶಪುರ: ತಾಲೂಕಿನ ಮಠಸಾಗರ ಗ್ರಾಮದಲ್ಲಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯೊಬ್ಬರಿಂದ 25 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾದ ಆರೋಪಿ ಸೈಯದ್ ಅಲಿ ನಡಾಫ್ ಬಿನ್ ಬಾಳಾಸಾಬ್ (27), ಗದಗ ಜಿಲ್ಲೆಯ ಹುಲ್ಲೂರು ಗ್ರಾಮದವನು, ಸಕಲೇಶಪುರ ನಗರ ಪೊಲೀಸರು ಸೆರೆಹಿಡಿದಿದ್ದಾರೆ.
ಮಾರ್ಚ್ 25 ರಂದು ನಡೆದ ಈ ಕಳವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಸಿಸಿ ಕ್ಯಾಮರಾ ದೃಶ್ಯಗಳು ಹಾಗೂ ತಂತ್ರಜ್ಞಾನ ವಿಭಾಗದ ನೆರವಿನಿಂದ ಆರೋಪಿಯನ್ನು ಪತ್ತೆಹಚ್ಚಲು ಯಶಸ್ವಿಯಾದರು. ಗದಗ ಬಸ್ ನಿಲ್ದಾಣದಲ್ಲಿ ಬಂಧಿತನಾದ ಸೈಯದ್ ಅಲಿ ವಿಚಾರಣೆಯಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಆರೋಪಿ ಸೈಯದ್ ಅಲಿ 2016ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗದಗ ಜಿಲ್ಲೆಗೆ 2ನೇ ಟಾಪರ್ ಆಗಿದ್ದನು. ಅಬ್ಬರದ ಕನಸುಗಳು, ಐಪಿಎಲ್ ಬೆಟ್ಟಿಂಗ್ ಚಟುವಟಿಕೆ ಮತ್ತು ಜೀವನದಲ್ಲಿ ಎದುರಾದ ವೈಫಲ್ಯಗಳು ಇವನನ್ನು ಕಳ್ಳತನದ ದಾರಿಗೆ ಕೊಂಡೊಯ್ದದ್ದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಈ ಪ್ರಕರಣವನ್ನು ಭೇದಿಸಲು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಹೆಚ್ಚುವರಿ ಎಸ್ಪಿಗಳಾದ ವೆಂಕಟೇಶ್ ನಾಯ್ಡು ಮತ್ತು ತಮ್ಮಯ್ಯ ರವರ ಮಾರ್ಗದರ್ಶನ, ಸಕಲೇಶಪುರ ಡಿವೈಎಸ್ಪಿ ಪ್ರಮೋದ್ ಕುಮಾರ್ ಹಾಗೂ ಪಿಎಸ್ಐಗಳಾದ ಮಹೇಶ್, ಕೃಷ್ಣಪ್ಪ ನೇತೃತ್ವದಲ್ಲಿ ಕ್ರೈಂ ತಂಡದ ಶ್ರಮ ಫಲ ನೀಡಿದೆ. ತಂಡದಲ್ಲಿ ಹೆಡ್ ಕಾನ್ಸ್ಟೇಬಲ್ ಪೃಥ್ವಿ, ಪಿಸಿ ಗಳು ಚಂದ್ರಕಾಂತ್, ರೇವಣ್ಣ, ಅಶೋಕ, ಶಾಂತರಾಜು ಹಾಗೂ ತಂತ್ರಜ್ಞಾನ ವಿಭಾಗದ ಪೀರ್ ಖಾನ್, ಲೋಕೇಶ್, ಆತ್ಮಾನಂದ ಮೊದಲಾದವರು ಪಾಲ್ಗೊಂಡಿದ್ದರು.