HomeFresh Newsಎಸ್.ಡಿ.ಎಂ. ರಸಾಯನಶಾಸ್ತ್ರ ರಾಷ್ಟ್ರೀಯ ಕಾರ್ಯಾಗಾರ

ಎಸ್.ಡಿ.ಎಂ. ರಸಾಯನಶಾಸ್ತ್ರ ರಾಷ್ಟ್ರೀಯ ಕಾರ್ಯಾಗಾರ

ಉಜಿರೆ, ಜೂನ್ 6: ಸಮಾಜ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ವೈಜ್ಞಾನಿಕ ಸಾಮಾಜಿಕ ಹೊಣೆಗಾರಿಕೆಯೊಂದಿಗಿನ ರಚನಾತ್ಮಕ ಪರಿಹಾರವನ್ನು ಕಂಡುಕೊಳ್ಳುವ ಅಗತ್ಯವಿದೆ ಎಂದು ಇಂಡಿಯನ್ ನಾಷನಲ್ ಯಂಗ್ ಅಕಾಡೆಮಿ ಆಫ್ ಸೈನ್ಸಸ್ ಸದಸ್ಯ ಡಾ. ಹೆಚ್. ಎಸ್. ಎಸ್. ರಾಮಕೃಷ್ಣ ಮಟ್ಟೆ ಅಭಿಪ್ರಾಯಪಟ್ಟರು.

ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದಲ್ಲಿ ರಸಾಯನಶಾಸ್ತ್ರ ವಿಭಾಗ ಮತ್ತು ಇಂಡಿಯನ್ ನಾಷನಲ್ ಯಂಗ್ ಅಕಾಡೆಮಿ ಆಫ್ ಸೈನ್ಸಸ್ ಜಂಟಿಯಾಗಿ ‘ಮಾಲಿಕ್ಯುಲರ್ ಡಾಕಿಂಗ್ ಮತ್ತು ಎಲೆಕ್ಟ್ರೋ-ಅನಾಲಿಟಿಕಲ್ ತಂತ್ರಗಳು’ ಕುರಿತು ಆಯೋಜಿಸಿದ್ದ ರಾಷ್ಟ್ರ ಮಟ್ಟದ ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಸಾಮಾಜಿಕ ಸಮಸ್ಯೆಗಳಿಗೆ ವಿಜ್ಞಾನ ವಲಯವು ಪರಿಹಾರ ಒದಗಿಸಿಕೊಡುವ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಬೇಕಿದೆ. ಸಾಮಾಜಿಕ ಬದುಕಿನ ಪ್ರತಿಹಂತಗಳನ್ನೂ ಸೂಕ್ಷ್ಮವಾಗಿ ಗಮನಿಸಿ ವೈಜ್ಞಾನಿಕ ಅಧ್ಯಯನ ನಡೆಸಬೇಕಿದೆ. ಈ ದೃಷ್ಟಿಯಿಂದ ರಸಾಯನಶಾಸ್ತ್ರ ಸಂಶೋಧನೆಯ ಕಡೆಗೆ ಸಂಶೋಧನಾರ್ಥಿಗಳನ್ನು ಆಕರ್ಷಿಸುವ ಕೆಲಸ ವ್ಯಾಪಕವಾಗಿ ನಡೆಯಬೇಕಿದೆ ಎಂದು ಹೇಳಿದರು.

ವೈಜ್ಞಾನಿಕ ಸಂಶೋಧನೆ ಕೇವಲ ಪ್ರಯೋಗಾಲಯಗಳಿಗೆ ಮಾತ್ರ ಸೀಮಿತವಾಗಬಾರದು. ದೈನಂದಿನ ಜೀವನದ ಪ್ರತಿಯೊಂದು ಕಾರ್ಯ ಚಟುವಟಿಕೆಗಳಿಗೆ ಅನ್ವಯಗೊಂಡು ಇದರ ವ್ಯಾಪ್ತಿ ದೊಡ್ಡದಾಗಬೇಕು. ಹಾಗಾದಾಗ ಮಾತ್ರ ಸಮಾಜದ ಬಿಕ್ಕಟ್ಟುಗಳಿಗೆ ವಿಜ್ಞಾನವು ಸಾಮಾಜಿಕ ಹೊಣೆಗಾರಿಕೆಯ ಪ್ರಜ್ಞೆಯೊಂದಿಗಿನ ಮಹತ್ವದ ಪರಿಹಾರವನ್ನು ಒದಗಿಸಬಹುದು ಎಂದು ಹೇಳಿದರು.

ವಿದ್ಯಾರ್ಥಿಗಳು ಸದಾ ಅನ್ವೇಷಣೆ ನಡೆಸುತ್ತಿರಬೇಕು. ಪ್ರತಿಯೊಂದು ವಿಷಯದ ಕುರಿತು ಮಾಹಿತಿ ಕಲೆಹಾಕುತ್ತಿರಬೇಕು. ಸೂಕ್ತವೆನಿಸುವ ವಿಷಯ ಯಾವುದೆಂದು ಅರಿತು ಅದರ ಕುರಿತು ಅಧ್ಯಯನ ಮುಂದುವರಿಸಬೇಕು. ದೇಶದ ಪ್ರತಿಷ್ಠಿತ ಸಂಶೋಧನಾ ಕೇಂದ್ರಗಳಲ್ಲಿ ಅಧ್ಯಯನ ನಡೆಸಿ ಸಂಶೋಧನಾ ವಲಯದಲ್ಲಿನ ಆಸಕ್ತಿ ಹೆಚ್ಚಿಸಿಕೊಳ್ಳಬಹುದು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ ಮಾತನಾಡಿದರು. ಆರೋಗ್ಯ, ಹವಾಮಾನ, ಆಹಾರ ಉತ್ಪಾದನಾ ವಲಯಗಳಲ್ಲಿನ ಸವಾಲುಗಳಿಗೆ ಮಾಲಿಕ್ಯುಲರ್ ಡಾಕಿಂಗ್ ಮತ್ತು ಎಲೆಕ್ಟ್ರೋ-ಅನಾಲಿಟಿಕಲ್ ತಂತ್ರಗಳು ಸೂಕ್ತ ಪರಿಹಾರ ಒದಗಿಸುತ್ತವೆ. ಆದ್ದರಿಂದ ಈ ವಿಷಯದ ಕುರಿತ ಸಂಶೋಧನೆ ಮಹತ್ವದ್ದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿದರು. ಕುತೂಹಲದ ಮನೋಭಾವವು ಎಲ್ಲಾ ವಿಜ್ಞಾನಗಳ ತಾಯಿ. ಜಗತ್ತಿನ ಪ್ರತಿ ಆವಿಷ್ಕಾರಕ್ಕೆ ಕುತೂಹಲ ಮೂಲ ಕಾರಣವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಕುತೂಹಲದ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಸ್ನಾತ್ತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ. ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕಿ ಡಾ. ಸೌಮ್ಯ ಬಿ.ಪಿ ಸ್ವಾಗತಿಸಿದರು. ವಿದ್ಯಾರ್ಥಿನಿ ಸೌಜನ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅನುರಾಧಾ ಮತ್ತು ತಂಡದವರು ಪ್ರಾರ್ಥಿಸಿದರು. ಮತ್ತೊಬ್ಬ ಸಂಯೋಜಕಿ ಡಾ. ನಫೀಸತ್ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments