ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ : 5ನೇ ದಿನ ಅತಿರುದ್ರ ಮಹಾಯಾಗದ ಸಭಾ ಕಾರ್ಯಕ್ರಮ

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 26, 2023 ರ ಭಾನುವಾರದಂದು ನಡೆದ ಅತಿರುದ್ರ ಮಹಾಯಾಗದ ಐದನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಡೀನ್ ಡಾ. ಪದ್ಮರಾಜ್ ಹೆಗ್ಡೆ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅತಿರುದ್ರ ಮಹಾಯಾಗವು ಊರಿನ ಎಲ್ಲರಿಗೂ ಆಯಸ್ಸು-ಆರೋಗ್ಯ ನೀಡಲಿ ಎಂದು ಶುಭ ಹಾರೈಸಿದರು. ನಂತರ ಬೆಂಗಳೂರಿನ ಅಖಿಲ ಭಾರತ ಪತ್ರಿಕೆಯ ಸಂಪಾದಕರಾದ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪುಟ್ಟು ಪರಶುರಾಮ ಕುಲ್ಕರ್ಣಿ ಅವರು ಮಾತನಾಡಿ, ಅತಿರುದ್ರ ಮಹಾಯಾಗ ಒಂದು ಅನುಭವ ಮಾತ್ರವಲ್ಲದೇ ಅನುಭೂತಿಯಾಗಿದೆ. ಇಂತಹ ಸಭೆಗೆ ಸುಧರ್ಮ ಎನ್ನುತ್ತಾರೆ. ಸುಧರ್ಮ ಸಭೆಯೊಳಗೆ ಭಾಗವಹಿಸಲು ಪೂರ್ವ ಜನ್ಮದ ಪುಣ್ಯ ಇರಬೇಕು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ, ಉಡುಪಿ ಎಚ್ ಎಂ ಟಿ ಮೋಟರ್ಸ್ ನ ಗಣನಾಥ್ ಹೆಗ್ಡೆ, ಕಲ್ಯಾಣಿ ಕಾಂಕ್ರೀಟ್ ನ ಉದ್ಯಮಿಯಾದ ಗಣೇಶ್ ಪ್ರಭು, ಉದ್ಯಮಿಯಾದ ರಂಜಿತ್ ಶೆಟ್ಟಿ, ಅಶ್ವತ್ಥಪುರ ದೇಶಸ್ಥ ಬ್ರಾಹ್ಮಣ ಸಮಾಜದ ಕಿರಣ್ ಮಂಜನಬೈಲು, ದಕ್ಷಿಣ ಕನ್ನಡ ಮತ್ತು ಉಡುಪಿಯ ಗುರುವಂದನಾ ಸಮಿತಿಯ ಅಧ್ಯಕ್ಷರಾದ ಮಾಧವ ಖಾರ್ವಿ, ಉಡುಪಿ ಜಿಲ್ಲಾ ಹಿಂದೂ ಜಾಗರಣ ಸಮಿತಿ ವೇದಿಕೆಯ ಜಿಲ್ಲಾ ಸಮಿತಿಯ ಸದಸ್ಯರಾದ ಹಾಗೂ ಪ್ರಖರ ವಾಗ್ಮಿ ಶ್ರೀಕಾಂತ್ ಶೆಟ್ಟಿ, ಬಂಟರ ಚಾವಡಿ ಪರ್ಕಳ ಘಟಕದ ತಾರಾನಾಥ್ ಹೆಗ್ಡೆ, ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷರಾದ ಶಾಸಕ ಕೆ. ರಘುಪತಿ ಭಟ್, ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಮಹೇಶ್ ಠಾಕೂರ್, ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ನ ಮೊಕ್ತೇಸರರು, ಆಡಳಿತ ಸಮಿತಿಯ ಸದಸ್ಯರು ಮತ್ತು ಅತಿರುದ್ರ ಮಹಾಯಾಗ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ಉಡುಪಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯರಾದ ಶ್ರೀಕಾಂತ್ ಶೆಟ್ಟಿ ಕಾರ್ಕಳ ಇವರಿಂದ ಧಾರ್ಮಿಕ ಉಪನ್ಯಾಸ, ಬೆಂಗಳೂರಿನ ಕಪರ್ಧಿನಿ ಸ್ಕೂಲ್ ಆಫ್ ಡಿವೈನ್ ಡ್ಯಾನ್ಸಿಂಗ್ ಇವರಿಂದ ಭಾರತೀಯ ಶಾಸ್ತ್ರೀಯ ನೃತ್ಯ “ಮಹಾರುದ್ರ” ಮತ್ತು ವಿದ್ವಾನ್ ಸುಧೀರ್ ಕೊಡವೂರು, ವಿದುಷಿ ಮಾನಸಿ ಸುಧೀರ್ ಅವರ ನೃತ್ಯ ನಿರ್ದೇಶನದಲ್ಲಿ, ಡಾ. ಶ್ರೀಪಾದ ಭಟ್ ಅವರ ನಿರ್ದೇಶನದಲ್ಲಿ, ಶ್ರೀಮತಿ ಸುಧಾ ಆಡುಕಳ ಅವರ ರಚನೆಯಲ್ಲಿ, ನೃತ್ಯ ನಿಕೇತನ ಕೊಡವೂರು ಇವರಿಂದ ನೃತ್ಯ ರೂಪಕ – ನಾರಸಿಂಹ ಜರುಗಿತು.