HomeFresh Newsಮಹರ್ಷಿ ವಾಲ್ಮೀಕಿಯವರ ತತ್ವಾದರ್ಶಗಳು ಮುಂದಿನ ಪೀಳಿಗೆಗೂ ಮಾದರಿ -ಜಿಲ್ಲಾಧಿಕಾರಿ  ಡಾ. ಕೆ, ವಿದ್ಯಾಕುಮಾರಿ

ಮಹರ್ಷಿ ವಾಲ್ಮೀಕಿಯವರ ತತ್ವಾದರ್ಶಗಳು ಮುಂದಿನ ಪೀಳಿಗೆಗೂ ಮಾದರಿ -ಜಿಲ್ಲಾಧಿಕಾರಿ  ಡಾ. ಕೆ, ವಿದ್ಯಾಕುಮಾರಿ

ಉಡುಪಿ,: ಶ್ರೀ ಮಹರ್ಷಿ ವಾಲ್ಮೀಕಿಯವರು  ನಾಗರಿಕ ಸಮಾಜದ ಮೊದಲ ಅಕ್ಷರ   ಜ್ಞಾನಿ. ಅವರು ರಾಮಾಯಣದ ಮೂಲಕ ಬಿಂಬಿಸಿದ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು  ನಮ್ಮ ಮುಂದಿನ ಪೀಳಿಗೆಗೂ ಮಾದರಿಯಾಗಿರೋಣ ಎಂದು ಜಿಲ್ಲಾಧಿಕಾರಿ  ಡಾ. ಕೆ, ವಿದ್ಯಾಕುಮಾರಿ ತಿಳಿಸಿದರು.


ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್‌, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ,   ಉಡುಪಿ ನಗರಸಭೆ ಮತ್ತು ಪರಿಶಿಷ್ಟ ಪಂಗಡಗಳ  ಸಂಘಟನೆಗಳ ಸಹಯೋಗದೊಂದಿಗೆ  ನಡೆದ ಜಿಲ್ಲಾ ಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಹರ್ಷಿ ವಾಲ್ಮೀಕಿ ಅವರ ವೈಚಾರಿಕತೆಯಲ್ಲಿರುವಂತೆ ಪ್ರಮಾಣೀಕರಾಗಿ, ಅಕ್ಷರ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಮಾನವೀಯ ನೆಲೆಯಲ್ಲಿ ಸ್ವಾಸ್ಥ್ಯ ಸಮಾಜವನ್ನು ಕಟ್ಟಲು ನಾವೆಲ್ಲರೂ ಬದ್ದರಾಗೋಣ. ವಾಲ್ಮೀಕಿಯ ವರು ರಚಿಸಿದ ರಾಮಾಯಣ ಮಹಾಕಾವ್ಯದಲ್ಲಿರುವ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅದನ್ನು ದೈನಂದಿನ ಜೀವನದಲ್ಲಿ ಪಾಲಿಸೋಣ ಎಂದರು .
ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್‌ ಬಾಯಲ್‌ ಮಾತನಾಡಿ, ಮಹರ್ಷಿ ವಾಲ್ಮೀಕಿ ಯವರ ಚಿಂತನೆಗಳನ್ನು ಕೇವಲ ಅವರ ಜಯಂತಿಯಂದು ಮಾತ್ರ ಸ್ಮರಿಸದೇ ಅದನ್ನು ಜೀವನದ ಪ್ರತಿ ಹಂತದಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದರು.
ಉಪನ್ಯಾಸಕ ಚೇತನ್‌ ಶೆಟ್ಟಿ  ಕೋವಾಡಿ ಮಹರ್ಷಿ ವಾಲ್ಮೀಕಿ ಅವರ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿ,ಮಹರ್ಷಿ ವಾಲ್ಮೀಕಿಯವರು ರಾಮಾಯಣ ಮಹಾಕಾವ್ಯದ ಮೂಲಕ ನೀಡಿದ ಚಿಂತನೆಗಳು ದಿನೇ ದಿನೇ ಪ್ರಸಿದ್ದಿಯನ್ನು ಪಡೆದುಕೊಂಡು ಸಾರ್ವಕಾಲಿಕವಾಗಿ  ದಾರಿದೀಪವಾಗಿವೆ ಎಂದರು.


ರಾಮಾಯಣ ಮಹಾಕಾವ್ಯದಲ್ಲಿನ ಶ್ಲೋಕಗಳು  ಸಾಮಾಜಿಕ ಮೌಲ್ಯಗಳು, ಆದರ್ಶ ಪರಂಪರೆ, ಮಾನವೀಯ ಮೌಲ್ಯಗಳು, ಮಮತೆ, ಭ್ರಾತೃತ್ವ, ತ್ಯಾಗ, ದೇಶಪ್ರೇಮದ ಸಂದೇಶಗಳು ಸದಾ ಕಾಲಕ್ಕೆ ಅನ್ವಯವಾಗುವ  ಜೀವನ ಸಂದೇಶಗಳನ್ನು ನೀಡುತ್ತವೆ.ವಾಲ್ಮೀಕಿ ಅವರ ಇಚ್ಚಾಶಕ್ತಿ, ಅದಮ್ಯ ಚೇತನ ಎಲ್ಲರಿಗೂ ಮಾದರಿಯಾಗುವ ಜೊತೆಗೆ ರಾಮಾಯಣದ ಆದರ್ಶ ಮೌಲ್ಯಗಳನ್ನು ಪ್ರತಿಯೊಬ್ಬರೂ ಬೆಳಸಿಕೊಂಡು, ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ 2023-24 ನೇ ಸಾಲಿನಲ್ಲಿ ಕೊರಗ,  ಮರಾಟಿ ನಾಯ್ಕ್‌  ಹಾಗೂ ಮಲೈಕುಡಿ ಸಮುದಾಯದ ಎಸ್‌.ಎಸ್‌.ಎಲ್‌.ಸಿ ಹಾಗೂ  ಪಿ.ಯು.ಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ  ವಿದ್ಯಾರ್ಥಿಗಳನ್ನು ಮತ್ತು ಇದೇ ಸಮುದಾಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ  ಪೋಲೀಸ್‌  ವರಿಷ್ಟಾಧಿಕಾರಿ ಡಾ. ಕೆ. ಅರುಣ್‌, ಅಪರ ಜಿಲ್ಲಾಧಿಕಾರಿ   ಮಮತಾದೇವಿ ಜಿ. ಎಸ್, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಪರಿಶಿಷ್ಟ ಪಂಗಡಗಳ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಐ.ಟಿ.ಡಿ.ಪಿ ಯೋಜನಾ ಸಮನ್ವಯಾಧಿಕಾರಿ ನಾರಾಯಾಣ ಸ್ವಾಮಿ ಎಂ. ಸ್ವಾಗತಿಸಿ, ಐ.ಟಿ.ಡಿ.ಪಿ ಸಿಬ್ಬಂದಿ ಶ್ರೀದೇವಿ    ನಿರೂಪಿಸಿ, ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments