ಉರ್ವ ಪೊಲೀಸ್ ಠಾಣೆ ಸಿಬ್ಬಂದಿ ಮೇಲೆ ಹಲ್ಲೆ..! : ಪ್ರಕರಣ ದಾಖಲು
ಮಂಗಳೂರು : ಉರ್ವ ಪೊಲೀಸ್ ಠಾಣೆಗೆ ಬಂದ ಮೂವರು ಅಲ್ಲಿನ ಸಿಬ್ಬಂದಿಯ ಜೊತೆಗೆ ಅನುಚಿತವಾಗಿ ವರ್ತಿಸಿದ್ದು, ಹಲ್ಲೆಗೆ ಯತ್ನಿಸಿದ್ದಾರೆ. ಈ ಪ್ರಕರಣದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಮಂಗಳೂರಿನ ಉರ್ವ ಠಾಣೆ ವ್ಯಾಪ್ತಿಯ ಅಪಾರ್ಟ್ಮೆಂಟ್ನಲ್ಲಿ ನಿರ್ವಹಣೆ ಶುಲ್ಕ ಕೊಡುವುದು ಹಾಗೂ ನೀರಿನ ಸಂಪರ್ಕ ಒದಗಿಸುವ ಕುರಿತು ಗಲಾಟೆ ನಡೆದಿತ್ತು. ಈ ಬಗ್ಗೆ ಮೇ ತಿಂಗಳಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು. ಬಾಲಕಿಗೆ ಹೊಡೆದ ಬಗ್ಗೆ ಪೊಕ್ಸೊ ಪ್ರಕರಣ ಹಾಗೂ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದವು. ನಂತರ ಅಪಾರ್ಟ್ಮೆಂಟ್ನವರು ರಾಜಿ ಮಾಡಿಕೊಂಡಿದ್ದು, ನೀರಿನ ಸಂಪರ್ಕ ಒದಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ಹಿಂಪಡೆಯುವುದಾಗಿ ಡಿಸಿಪಿ ಅವರಿಗೆ ತಿಳಿಸಿದ್ದರು. ಅದರಂತೆ ಸಂಬಂಧಿಸಿದ ಠಾಣಾಧಿಕಾರಿ ಬಳಿ ತೆರಳಿ, ಲಿಖಿತ ಹೇಳಿಕೆ ದಾಖಲಿಸುವಂತೆ ಸೂಚನೆ ನೀಡಿದ್ದರು. ನಿನ್ನೆ ಉರ್ವ ಠಾಣೆಗೆ ನೋವೆಲ್ ಸಿಕ್ವೇರಾ, ಜಾನ್ ಸಿಕ್ವೇರಾ ಹಾಗೂ ಅವರ ಮಗಳು ಮಾತುಕತೆ ನಡೆಸಲು ಬಂದಿದ್ದವರು ಮಹಿಳಾ ಪೊಲೀಸ್ ಸೇರಿದಂತೆ ಇಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಈ ಘಟನೆಯಲ್ಲಿ ಮಂಗಳೂರಿನ ಉರ್ವ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಪೂಜಾ ಹಿರೇಮಠ ಮತ್ತು ಹೆಡ್ ಕಾನ್ಸ್ಟೇಬಲ್ ನಾರಾಯಣ ಎಂಬುವವರು ಗಾಯಗೊಂಡಿದ್ದಾರೆ.
ಇದನ್ನು ತಡೆಯಲು ಹೋದ ಇನ್ನೊಬ್ಬ ಸಿಬ್ಬಂದಿಯ ಮೇಲೂ ಹಲ್ಲೆ ನಡೆಸಿದ್ದಾರೆ ಇಬ್ಬರೂ ಸಿಬ್ಬಂದಿಗೆ ವೆನ್ಲಾಕ್ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ ಎಂದು ಎನ್. ಶಶಿಕುಮಾರ್ ಹೇಳಿದ್ದಾರೆ.