ದೇರಳಕಟ್ಟೆ: ಕಣಚೂರು ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನ ಕಣಚೂರು ನರ್ಸಿಂಗ್ ಸೈನ್ಸ್ ಇದರ ಆಶ್ರಯದಲ್ಲಿ ಜರಗಿದ ಅಂತರಾಷ್ಟ್ರೀಯ ದಾದಿಯರ ದಿನಾಚರಣೆ ಕಾರ್ಯಕ್ರಮ ಕಾಲೇಜಿನ ಆಡಿಟೋರಿಯಂನಲ್ಲಿ ನಡೆಯಿತು.
ಕಾಸರಗೋಡು ಮಾಲಿಕ್ ದಿನಾರ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಪ್ರೊ. ಆಲೀಸ್ ಡೇನಿಯಲ್ ಅಂತರಾಷ್ಟ್ರೀಯ ದಾದಿಯರ ದಿನಾಚರಣೆ ಕಾರ್ಯಕ್ರಮ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ದಾದಿಯರ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಫ್ಲೋರೇನ್ಸ್ ನೈಟಿಂಗ್ಹೇಲ್ ಕಾರ್ಯ ಪ್ರತಿಯೊಬ್ಬರಿಗೂ ಮಾದರಿ, ನಗುಮೊಗದೊಂದಿಗೆ ರೋಗಿಯನ್ನು ಕಾಣುವ ಮನೋಭಾವ ಬೆಳೆಸಿಕೊಳ್ಳಿ. ಅಡ್ಮಿಷನ್ನಿಂದ ಡಿಸ್ಚಾರ್ಜಿನವರೆಗೂ ರೋಗಿ ಹಾಗೂ ಅವರ ಸಂಬಂಧಿಕರ ಜವಾಬ್ದಾರಿ ದಾದಿಯರ ಮೇಲಿರುತ್ತದೆ. ಎಲ್ಲವನ್ನೂ ಆರೋಗ್ಯಯುತವಾಗಿ ನಿಭಾಯಿಸಿರಿ ಎಂದರು.

ಕಣಚೂರು ಆರೋಗ್ಯ ವಿಜ್ಞಾನ ಹಾಗೂ ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ. ಹಾಜಿ ಯು.ಕೆ ಕಣಚೂರು ಮೋನು ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಸಿರಿವಂತರ ಮಕ್ಕಳು ಎಂದಿಗೂ ದಾದಿಯರ ಕ್ಷೇತ್ರವನ್ನು ಆಯ್ಕೆ ಮಾಡುವುದನ್ನು ಕಂಡಿಲ್ಲ. ಆದರೆ ಫ್ಲೋರಿಂಗ್ ನೈಟಿಂಗ್ಹೇಲ್ ಪೋಷಕರು ಬ್ರಿಟೀಷ್ ಸರಕಾರದಲ್ಲಿ ಮಂತ್ರಿಯಾಗಿದ್ದರೂ, ಬಡಜನರ ಸೇವೆಗಾಗಿ ದಾದಿಯಾಗಿ ಸೇವೆ ನಡೆಸಿ ಎಲ್ಲರಿಗೂ ಸ್ಪೂರ್ತಿಯಾದವರು. ಸರ್ಟಿಫಿಕೇಟ್ ಮುಖ್ಯವಲ್ಲ, ಸ್ಫೂರ್ತಿಯುತ ವಿಚಾರಗಳು ಪ್ರಮುಖವಾಗಿರುತ್ತದೆ ಎಂದರು.


ಕಣಚೂರು ಆರೋಗ್ಯ ವಿಜ್ಞಾನ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕ ಅಬ್ದುಲ್ ರಹಿಮಾನ್, ವೈದ್ಯಕೀಯ ಅಧೀಕ್ಷಕ ಡಾ. ಹರೀಶ್ ಶೆಟ್ಟಿ, ಮುಖ್ಯ ಆಡಳಿತ ಅಧಿಕಾರಿ ಡಾ. ರೋಹನ್ ಮೋನಿಸ್, ಕಣಚೂರು ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಮೋಲಿ ಸಲ್ದಾನ್ಹ ,ನರ್ಸಿಂಗ್ ಸುಪರಿಂಟೆಂಡೆಂಟ್ ಶೈಲಾ ಶ್ರೀಧರ್, ಕಣಚೂರು ವೈದ್ಯಕೀಯ ಕಾಲೇಜು ಸಹ ಡೀನ್ ಡಾ. ಶಹನವಾಝ್ ಮಣಿಪ್ಪಾಡಿ, ಕಾರ್ಯಕ್ರಮ ಸಂಯೋಜಕಿ ಪ್ರಿಯಾ ಮೊಂತೇರೊ ಉಪಸ್ಥಿತರಿದ್ದರು.
