HomeFresh Newsಕೇಂದ್ರದ ರೈತ ವಿರೋಧಿ ಮತ್ತು ಕಾರ್ಮಿಕ ವಿರೋಧಿ ನೀತಿಗೆ ಖಂಡನೆ: ಕುಂದಾಪುರದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಕೇಂದ್ರದ ರೈತ ವಿರೋಧಿ ಮತ್ತು ಕಾರ್ಮಿಕ ವಿರೋಧಿ ನೀತಿಗೆ ಖಂಡನೆ: ಕುಂದಾಪುರದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಕುಂದಾಪುರ: ಕೊರೋನಾ ಮಹಾಮಾರಿಯಿಂದಾಗಿ ದೇಶದ ಆರ್ಥಿಕ ವ್ಯವಸ್ಥೆಯೇ ಸಂಪೂರ್ಣ ಹದಗೆಟ್ಟು ಹೋಗಿದೆ. ರೈತರು, ಕೂಲಿ ಕಾರ್ಮಿಕರು, ಜನಸಾಮಾನ್ಯರು ಪರದಾಟ ನಡೆಸುತ್ತಿರುವ ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕೇಂದ್ರ ಸರ್ಕಾರ ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿ ತರುವ ಮೂಲಕ ರೈತರನ್ನು, ಕಾರ್ಮಿಕರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಕೆ.ಶಂಕರ್ ಆರೋಪಿಸಿದರು.

ಅವರು ಕೃಷಿ ಕಾಯ್ದೆ, ವಿದ್ಯುತ್ ಮಸೂದೆ, ಕಾರ್ಮಿಕರ ಸಂಹಿತೆಗಳ ರದ್ದತಿಗಾಗಿ, ನಿರುದ್ಯೋಗ ಹಾಗೂ ಬೆಲೆ ಏರಿಕೆಯ ವಿರುದ್ದ ರಾಷ್ಟ್ರವ್ಯಾಪಿ ಭಾರತ್ ಬಂದ್ ಬೆಂಬಲಿಸಿ ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಸೋಮವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.ಸಿಐಟಿಯು ಕುಂದಾಪುರ ತಾಲೂಕು ಸಂಚಾಲಕ ಎಚ್ ನರಸಿಂಹ ಮಾತನಾಡಿ, ಕೊರೋನಾ ಹಿನ್ನೆಲೆ ಎಲ್ಲಾ ವಿಭಾಗದ ಜನರು ಸಂಕಷ್ಟದಲ್ಲಿರುವ ಕಾರಣ ಮುಷ್ಕರದಲ್ಲಿ ಭಾಗಹಿಸದೆ ಸಾಂಕೇತಿಕವಾಗಿ ಪ್ರತಿಭಟನೆ ಮಾಡುವ ಮೂಲಕ ಈ ಹೋರಾಟಕ್ಕೆ ನೈತಿಕ ಬೆಂಬಲವನ್ನು ಕೊಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ರೈತ, ಕಾರ್ಮಿಕರ, ಹಾಗೂ ಎಲ್ಲಾ ವಿಭಾಗದ ಜನರ ಪರಿವಾಗಿ ಈ ಹೋರಾಟವನ್ನು ಮುಂದುವರೆಸುತ್ತೇವೆ ಎಂದರು.

 

ಪ್ರತಿಭಟನೆಯನ್ನುದ್ದೇಶಿಸಿ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಮಹಾಬಲ ವಡೇರಹೋಬಳಿ, ಅಂಗನವಾಡಿ ಸಂಘಟನೆಯ ತಾಲೂಕು ಅಧ್ಯಕ್ಷೆ ಆಶಾಲತಾ, ಆಟೋ ಚಾಲಕರ ಸಂಘದ ಚಂದ್ರಶೇಖರ ದೇವಾಡಿಗ,ಮಾತನಾಡಿದರು. ಡಿವೈಎಫ್‌ಐ ತಾಲೂಕು ಅಧ್ಯಕ್ಷ ರಾಜೇಶ ವಡೇರಹೋಬಳಿ, ಆಟೋ ಚಾಲಕ ಸಂಘದ ರಾಜು ದೇವಾಡಿಗ, ಬೀಡಿ ಯೂನಿಯನ್‌ನ ಬಲ್ಕಿಸ್, ಮುಖಂಡರಾದ ದಾಸ ಭಂಡಾರಿ, ಪ್ರಕಾಶ್ ಕೊಣಿ, ಸಂತೋಷ ಹೆಮ್ಮಾಡಿ, ಸಿಐಟಿಯು, ಡಿವೈಎಫ್‌ಐ, ಅಂಗನವಾಡಿ, ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments