ಉಡುಪಿಯಲ್ಲಿ ಝರಾ ಹೋಟೆಲ್ ಕಟ್ಟಡ ತೆರವು ವಿಚಾರ:ಉಡುಪಿ ಶಾಸಕರ ವಿರುದ್ಧ ಹರಿಹಾಯ್ದ ಎಸ್ಡಿಪಿಐ
ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಎಷ್ಟು ಅಕ್ರಮ ಕಟ್ಟಡಗಳಿವೆ, ಅಕ್ರಮ ಮಳಿಗೆಗಳಿವೆ ಎಂಬುದನ್ನು ಪಟ್ಟಿ ಮಾಡಿ ಕೊಡುತ್ತೇವೆ. ಇದನ್ನೇಲ್ಲಾ ಕೆಡವಲು ಒತ್ತಾಯಿಸಿ ಪ್ರತಿಭಟನೆ ನಡೆಸಲು ಯಶ್ಪಾಲ್ ಸುವರ್ಣ ಅವರು ತಯಾರಿದ್ದಾರೆಯೇ. ಈ ಬಗ್ಗೆ ಅವರು ಬಹಿರಂಗ ಚರ್ಚೆಗೆ ಸಿದ್ಧರಿದ್ದಾರೆಯೇ ಎಂದು ಎಸ್.ಡಿ.ಪಿ.ಐ ವಕ್ತಾರ ರಿಯಾಝ್ ಕಡಂಬು ಅವರು ಸವಾಲು ಹಾಕಿದ್ದಾರೆ.
ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ಯಶ್ ಪಾಲ್ ಸುವರ್ಣ ಅವರು ಶಾಂತವಾಗಿರುವ ಉಡುಪಿಯ ಶಾಂತಿಯನ್ನು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ. ಕೇವಲ ಝರಾ ಹೋಟೆಲ್ ಅಕ್ರಮ ಎಂದು ಹೇಳಿ ಅದನ್ನು ತೆರವುಗೊಳಿಸದೇ ಇದ್ದರೆ ಪ್ರತಿಭಟನೆ ಮಾಡುವುದಾಗಿ ಯಶ್ ಪಾಲ್ ಸುವರ್ಣ ಅವರು ಉಡುಪಿ ನಗರ ಸಭೆಗೆ ಬೆದರಿಕೆಯೊಡ್ಡಿ ಹೇಳಿಕೆಯೊಂದನ್ನು ನೀಡಿದ್ದಾರೆ. ನೀವು ಈಗ ಜನಪ್ರತಿನಿಧಿ, ಒಬ್ಬ ಶಾಸಕನಾಗಿ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದೀರ ಅನ್ನೋದು ನೆನಪಿರಲಿ ಎಂದರು.

ಈಗಾಗಲೇ ಕೆಡವಿ ತೆರವುಗೊಳಿಸಿರುವ ಕಟ್ಟಡ. ಅಲ್ಲಿ ಯಾವುದೇ ಹೊಸ ಕಾಮಗಾರಿ ನಡೆಯದೇ ಇರುವಾಗ ಯಶ್ಪಾಲ್ ಸುವರ್ಣ ಅವರು ಪೌರಾಯುಕ್ತರಿಗೆ ಯಾಕೆ ಒತ್ತಡ ಹಾಕುತ್ತಿದ್ದಾರೆ. ನಗರ ಸಭೆಯ ಅಧಿಕಾರಿಗಳಿಗೆ ಅವರ ಕಾನೂನಿನ ಪ್ರಕಾರ ಕೆಲಸ ಮಾಡಲು ಬಿಡಿ. ಅವರ ಕೆಲಸಕ್ಕೆ ನಾವು ಅಡ್ಡಿಪಡಿಸುವುದಿಲ್ಲ. ಅಭಿವೃದ್ಧಿ ಕೆಲಸಗಳು ಸಾಕಷ್ಟು ಮಾಡಲು ಇರುವಾಗ ಅದನ್ನು ಬಿಟ್ಟು ಒಬ್ಬ ವ್ಯಕ್ತಿಯನ್ನು ಟಾರ್ಗೆಟ್ ಮಾಡಿ ಅವರ ಉದ್ಯಮಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದರು.ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧ್ಯಕ್ಷ ಶಾಹಿದ್ ಆಲಿ, ಪ್ರಧಾನ ಕಾರ್ಯದರ್ಶಿ ಆಶ್ರಫ್ ಬಾವ ಉಪಸ್ಥಿತರಿದ್ದರು.


















