ಮೂಡುಬಿದಿರೆಯ ಯುವ ಲೇಖಕಿ ರೇಶಲ್ ಫೆರ್ನಾಂಡಿಸ್ ಗೆ ಅಂತರಾಷ್ಟ್ರೀಯ ಮನ್ನಣೆ

ಮೂಡುಬಿದಿರೆ: ಕರಾವಳಿಯ ಪ್ರತಿಭೆ, ಯುವ ಲೇಖಕಿ ಹಾಗೂ ವಾಗ್ಮಿ ರೇಶಲ್ ಫೆರ್ನಾಂಡಿಸ್ ಅವರು ಸಾಹಿತ್ಯ ಮತ್ತು ಸಾಮಾಜಿಕ ಚಿಂತನೆಗಳಲ್ಲಿ ನಡೆಸುತ್ತಿರುವ ನಿರಂತರ ಸಾಧನೆಗೆ ಈಗ ಅಂತರಾಷ್ಟ್ರೀಯ ಮಟ್ಟದ ಮನ್ನಣೆ ಲಭಿಸಿದೆ. ರಾಜ್ಯಮಟ್ಟದ ‘ಕಿತ್ತೂರು ರಾಣಿ ಚೆನ್ನಮ್ಮ’ ಪ್ರಶಸ್ತಿ ಪುರಸ್ಕೃತರಾದ ಇವರು, ತಮ್ಮ ಸಾಹಿತ್ಯಿಕ ಕೊಡುಗೆಗಳ ಮೂಲಕ ಜಾಗತಿಕ ಗಮನ ಸೆಳೆಯುತ್ತಿದ್ದಾರೆ.

ಪ್ರತಿಷ್ಠಿತ ಅಂತರರಾಷ್ಟ್ರೀಯ ಸಾಹಿತ್ಯಿಕ ಮ್ಯಾಗಜೀನ್ ‘ಲಿಟರೇಚರ್ ಟುಡೇ’ ರೇಶಲ್ ಅವರ ಸಾಹಿತ್ಯಿಕ ಕೆಲಸವನ್ನು ಮುಕ್ತಕಂಠದಿಂದ ಶ್ಲಾಘಿಸಿದೆ. ತನ್ನ ಇತ್ತೀಚಿನ ಸಂಚಿಕೆಯಲ್ಲಿ ಇವರ ಸಾಧನೆಯ ಕುರಿತು ವಿಶೇಷ ಲೇಖನವನ್ನು ಪ್ರಕಟಿಸಿ ಗೌರವಿಸಿದೆ. ಅಲ್ಲದೆ, ಭಾರತೀಯ ಕ್ಯಾಥೋಲಿಕ್ ಪ್ರೆಸ್ ಅಸೋಸಿಯೇಷನ ಇವರಿಗೆ ‘ಜೆ. ಮಾರಿಸ್ ಜೀವಮಾನ ಸಾಧನೆ ಪ್ರಶಸ್ತಿ’ ನೀಡಿ ಪುರಸ್ಕರಿಸಿದೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸಕ್ರಿಯ ಕಾರ್ಯಕರ್ತೆಯೂ ಆಗಿರುವ ರೇಶಲ್, ಈವರೆಗೆ ಐದು ಪ್ರಮುಖ ಪುಸ್ತಕಗಳನ್ನು ಹೊರತಂದಿದ್ದಾರೆ. ಇವುಗಳಲ್ಲಿ ಮುಖ್ಯವಾಗಿ Bharat at 2047: Role of Youth (2047ರ ಭಾರತ: ಯುವಜನರ ಪಾತ್ರ), Swaraj: A Good Governance Wheel of Democracy (ಸ್ವರಾಜ್: ಪ್ರಜಾಪ್ರಭುತ್ವದ ಉತ್ತಮ ಆಡಳಿತ ಚಕ್ರ)
ಈ ಕೃತಿಗಳು ಯುವ ಸಮೂಹದಲ್ಲಿ ರಾಷ್ಟ್ರಪ್ರೇಮ ಮತ್ತು ಆಡಳಿತಾತ್ಮಕ ಜ್ಞಾನವನ್ನು ಮೂಡಿಸುವಲ್ಲಿ ಯಶಸ್ವಿಯಾಗಿವೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಇವರ ಸೈದ್ಧಾಂತಿಕ ಬರಹಗಳನ್ನು ವಿಶೇಷವಾಗಿ ಸ್ಮರಿಸಲಾಯಿತು.

ಕೇವಲ ಸಾಹಿತ್ಯಕ್ಕೆ ಸೀಮಿತವಾಗದ ರೇಶಲ್, ರಾಷ್ಟ್ರ ನಿರ್ಮಾಣದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಪ್ರಸ್ತುತ ದಿಶಾ ಭಾರತ್ , ಸಮರ್ಥ ಭಾರತ್ ,ಬೆಂಗಳೂರಿನ ಚಿಂತಕರ ವೇದಿಕೆ ಮುಂತಾದ ಪ್ರಮುಖ ಸಂಸ್ಥೆಗಳಲ್ಲಿ ಸದಸ್ಯರಾಗಿ ರಾಷ್ಟ್ರೀಯ ವಿಚಾರಧಾರೆಗಳನ್ನು ಹರಡುವಲ್ಲಿ ಶ್ರಮಿಸುತ್ತಿದ್ದಾರೆ.

Related Posts

Leave a Reply

Your email address will not be published.