ಎಪ್ರಿಲ್ 29ರಂದು ಉಳ್ಳಾಲ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಬೃಹತ್ ರ‍್ಯಾಲಿ ಹಾಗೂ ಹಕ್ಕೊತ್ತಾಯ ಸಮಾವೇಶ

ಎಪ್ರಿಲ್ 29, ಉಳ್ಳಾಲ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಬೃಹತ್ ರ‍್ಯಾಲಿ ಹಾಗೂ ಹಕ್ಕೊತ್ತಾಯ ಸಮಾವೇಶ

ಉಳ್ಳಾಲ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಹಾಗೂ ಎಲ್ಲಾ ಜನವಿಭಾಗಗಳ ಹಲವಾರು ಪ್ರಶ್ನೆಗಳನ್ನು ಮುಂದಿಟ್ಟು ಎಪ್ರಿಲ್ 29ರಂದು ಬೆಳಿಗ್ಗೆ 10.30ಕ್ಕೆ ದೇರಳಕಟ್ಟೆ ಜಂಕ್ಷನ್‌ನಲ್ಲಿ ಹಕ್ಕೊತ್ತಾಯ ಸಮಾವೇಶವು ಜರುಗಲಿದೆ. ಇದಕ್ಕೆ ಪೂರ್ವಭಾವಿಯಾಗಿ ಬೆಳಿಗ್ಗೆ 10ಕ್ಕೆ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆ ಜಂಕ್ಷನ್ ಹಾಗೂ ನಾಟೆಕಲ್ ಜಂಕ್ಷನ್‌ನಿಂದ ಎರಡು ಬೃಹತ್ ರ‍್ಯಾಲಿಗಳು ಹೊರಡಲಿದೆ. ಹಕ್ಕೊತ್ತಾಯ ಸಮಾವೇಶವನ್ನು ಸಿಪಿಐ(ಎಂ) ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳರವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯಾದವ ಶೆಟ್ಟಿಯವರು ಭಾಗವಹಿಸಲಿದ್ದಾರೆ.

ಉಳ್ಳಾಲ ತಾಲೂಕು ರಚನೆಯಾಗಿ ಐದು ವರ್ಷ ದಾಟಿದೆ. ದೇಶದ ಯಾವುದೇ ತಾಲೂಕಿನಲ್ಲಿ ಇಲ್ಲದಷ್ಟು ಖಾಸಾಗಿ ಮೆಡಿಕಲ್ ಕಾಲೇಜುಗಳು, ಕಾರ್ಪೊರೇಟು ಆಸ್ಪತ್ರೆಗಳು, ವೃತ್ತಿಪರ ಕಾಲೇಜುಗಳು ಉಳ್ಳಾಲ ಒಂದೇ ತಾಲೂಕಿನಲ್ಲಿ ಇದೆ. ಖಾಸಗಿ ಶಿಕ್ಷಣ, ಆಸ್ಪತ್ರೆ, ಮೆಡಿಕಲ್ ಕಾಲೇಜುಗಳು ತುಂಬಿ ತುಳುಕುತ್ತಿರುವ ಉಳ್ಳಾಲ ತಾಲೂಕು ಅಭಿವೃದ್ದಿಯ ನಾಗಾಲೋಟದಲ್ಲಿ ಇದ್ದಂತೆ ಭಾಸವಾಗುತ್ತಿದೆ. ಆದರೆ ಈ ಕಣ್ಣುಕೋರೈಸುವ ಅಭಿವೃದ್ದಿಯ ಹಿಂದೆ ಅಗಾಧವಾದ ಸಮಸ್ಯೆಗಳಿವೆ. ಜನಸಾಮಾನ್ಯರ ತೀರದ ಬವಣೆಗಳಿವೆ. ಈ ಗಾಢ ಕತ್ತಲಿನಂತಹ ಸಮಸ್ಯೆಗಳ ಮೇಲೆ ಬೆಳಕು ಹಾಯಿಸುವ ಯತ್ನ ನಡೆಸಿದರೆ ಉಳ್ಳಾಲ ತಾಲೂಕಿನ ಅಭಿವೃದ್ದಿಯ ಟೊಳ್ಳುತನ ಬಯಲಾಗುತ್ತದೆ. ಸಮೃದ್ದ ಕೃಷಿ ಭೂಮಿ, ಶ್ರಮಜೀವಿ ರೈತರಿಂದ ತುಂಬಿದ್ದ ಉಳ್ಳಾಲದ ಗ್ರಾಮಗಳು ಈಗ ರಿಯಲ್ ಎಸ್ಟೇಟ್ ಧಾಳಿಯಿಂದ ಕಂಗೆಟ್ಟಿದೆ. ವಿವಿಧ ಮಸಲತ್ತುಗಳ ಮೂಲಕ ರೈತರಿಂದ ಅಗ್ಗದ ಬೆಲೆಗೆ ಭೂಮಿ ಕಿತ್ತುಕೊಂಡು ನವ ಭೂಮಾಲಕ ವರ್ಗ ಸೃಷ್ಟಿಸಲಾಗಿದೆ. ಮೆಡಿಕಲ್, ಶಿಕ್ಷಣ ಲಾಭಿಗಳಿಂದಾಗಿ ಭೂಮಿಯ ಬೆಲೆ ಗಗನಕ್ಕೇರಿದೆ. ಈ ಲಾಭಿಗಳದ್ದೇ ಹೊಸ ಸಾಮ್ರಾಜ್ಯ ರಚನೆಯಾಗಿದೆ. ಮನೆ ಬಾಡಿಗೆ ಆಕಾಶಕ್ಕೆ ತಲುಪಿದೆ. ತುಂಡು ಭೂಮಿ ಖರೀದಿಸಿ ಮನೆ ಕಟ್ಟುವುದು, ಮನೆ ಬಾಡಿಗೆ ಪಾವತಿಸುವುದು ಜನಸಾಮಾನ್ಯರ ಪಾಲಿಗೆ ಅಸಾಧ್ಯವಾಗಿದೆ.
ಮರಳು ಮಾಫಿಯಾ, ಕೆಂಪು ಮಣ್ಣು ಮಾಫಿಯಾ ಉಳ್ಳಾಲದ ನೆಲ, ಜಲವನ್ನು ಅಕ್ಷರಶಃ ದೋಚುತ್ತಿದೆ, ಮಾತ್ರವಲ್ಲ ಬರಡಾಗಿಸುತ್ತಿದೆ. ಪ್ರಕೃತಿ ಸೌಂದರ್ಯದ ಕಣಜದಂತಿರುವ ನೇತ್ರಾವತಿ ನದಿ ನಡುವಿನ ಕುದ್ರುಗಳು ಮರಳು ಮಾಫಿಯಾದ ದುರಾಸೆಗೆ ಕಳಚಿ ಬೀಳುತ್ತಿದೆ. ಸರಕಾರಿ ಆಸ್ಪತ್ರೆಗಳು ಪಾಳುಬಿದ್ದಿವೆ, ಅಥವಾ ಖಾಸಗಿ ಮೆಡಿಕಲ್ ಕಾಲೇಜುಗಳ ಪಾಲಾಗಿವೆ. ತಾಲೂಕು ರಚನೆಯಾಗಿ ಐದು ವರ್ಷ ದಾಟಿದರೂ, ಎಲ್ಲಾ ಇಲಾಖೆಗಳು ಒಂದೇ ಸೂರಿನಡಿ ಇರುವ ಸುಸಜ್ಜಿತವಾದ ತಾಲೂಕು ಕಚೇರಿ/ಮಿನಿ ವಿಧಾನ ಸೌಧ ಹೊಂದುವ ಭಾಗ್ಯ ಉಳ್ಳಾಲಕ್ಕೆ ಇನ್ನೂ ಒದಗಿ ಬಂದಿಲ್ಲ. ತಾಲೂಕು ಮಟ್ಟದ ನೂರು ಹಾಸಿಗೆಗಳ ಆಸ್ಪತ್ರೆ, ಸುಸಜ್ಜಿತವಾದ ಮಾರುಕಟ್ಟೆ, ತಾಲೂಕು ನ್ಯಾಯಾಲಯ, ಸಬ್ ರಿಜಿಸ್ಟಾರ್ ಕಚೇರಿ ತಾಲೂಕು ಮಟ್ಟದ ಕ್ರೀಡಾಂಗಣ, ರಂಗ ಮಂದಿರ, ಪುರಭವನ, ಸರಕಾರಿ ಪದವಿ ಕಾಲೇಜು, ಐಟಿಐ, ಪಾಲಿಟೆಕ್ನಿಕ್ ಹೀಗೆ ನಿಯಮದ ಪ್ರಕಾರ ತಾಲೂಕು ಒಂದಕ್ಕೆ ಇರಬೇಕಾದ ಯಾವುದೂ ಇಲ್ಲಿಗೆ ಮಂಜೂರಾಗಿಲ್ಲ, ಮಂಜೂರು ಮಾಡುವ ಯೋಚನೆಯೂ ಸಂಬಂಧಪಟ್ಟವರಿಗೆ ಇಲ್ಲ. ತಾಲೂಕಿನ ಕೊಣಾಜೆಯಲ್ಲಿ ಇರುವ ಮಂಗಳೂರು ವಿಶ್ವವಿದ್ಯಾನಿಲಯ ದಿವಾಳಿಯ ಅಂಚಿಗೆ ಬಂದು ನಿಂತಿದೆ. ‘ಖಾಸಾಗಿ ಶಿಕ್ಷಣ, ಆರೋಗ್ಯದ ವ್ಯಾಪಾರಿಗಳ, ಬಂಡವಾಳಶಾಹಿಗಳ ಅನುಕೂಲಕ್ಕೆ ತಕ್ಕುದಾದ ಮೂಲಭೂತ ಸೌಲಭ್ಯ ಒದಗಿಸುವುದೇ ತಾಲೂಕಿನ ಅಭಿವೃದ್ಧಿ’ ಎಂಬುದು ಉಳ್ಳಾಲ ತಾಲೂಕಿನ ನೀತಿಯಾಗಿದೆ.
ಇಂತಹ ಅಸಮಾನ ಅಭಿವೃದ್ದಿಯ ಬದಲಿಗೆ ತಾಲೂಕಿನ ಸರ್ವಾಂಗೀಣ ಅಭಿವೃದ್ದಿ ಹಾಗೂ, ಜನಸಾಮಾನ್ಯರ ಬವಣೆಗಳ ಪರಿಹಾರಕ್ಕಾಗಿ ಒಗ್ಗಟ್ಟಿನಿಂದ ಧ್ವನಿ ಎತ್ತುವುದು ಇಂದಿನ ಅಗತ್ಯವಾಗಿದೆ.

ಹಕ್ಕೊತ್ತಾಯದ ಸಮಾವೇಶ ಸಂದೇಶವನ್ನು ಮನೆಮನೆಗೆ ತಲುಪಿಸಲು ಈಗಾಗಲೇ 150ರಷ್ಟು ತಂಡಗಳು ರಚನೆಯಾಗಿದ್ದು, ಆ ಮೂಲಕ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು ವ್ಯಾಪಕ ಪ್ರಚಾರದಲ್ಲಿ ತೊಡಗಿದ್ದಾರೆ. ಎಪ್ರಿಲ್ 21, 22ರಂದು ಎರಡು ದಿನಗಳ ಕಾಲ ಉಳ್ಳಾಲ ತಾಲೂಕಿನಾದ್ಯಂತ ಸಂಚರಿಸಲಿರುವ ವಾಹನ ಪ್ರಚಾರ ಜಾಥಾವು ಎಪ್ರಿಲ್ 21ರಂದು ಬೆಳಿಗ್ಗೆ 9.30ಕ್ಕೆ ಮುಡಿಪು ಜಂಕ್ಷನ್‌ನಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳರವರಿಂದ ಉದ್ಘಾಟನೆಗೊಳ್ಳಲಿದ್ದು, ಅಂದು ಸಂಜೆ 6ಕ್ಕೆ ಹರೇಕಳ ಕಡವಿನ ಬಳಿಯಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಡಾ| ಕೃಷ್ಣಪ್ಪ ಕೊಂಚಾಡಿಯವರಿಂದ ಸಮರೋಪಗೊಳ್ಳಲಿದೆ. 22ರಂದು ಬೆಳಿಗ್ಗೆ 9.30ಕ್ಕೆ ಕುತ್ತಾರ್ ಜಂಕ್ಷನ್‌ನಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ. ಯಾದವ ಶೆಟ್ಟಿಯವರಿಂದ ಉದ್ಘಾಟನೆಗೊಳ್ಳಲಿದ್ದು, ಸಂಜೆ 5.30ಕ್ಕೆ ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯರಾದ ಸಂತೋಷ್ ಬಜಾಲ್‌ರವರಿಂದ ಸಮಾರೋಪಗೊಳ್ಳಲಿದೆ. 2 ದಿನಗಳ ಕಾಲ ಸುಮಾರು 25ರಷ್ಟು ಸ್ಥಳಗಳಲ್ಲಿ ಜಾಥಾ ಕಾರ‍್ಯಕ್ರಮವು ಜರುಗಲಿದ್ದು, ಪಕ್ಷದ ಜಿಲ್ಲಾ ನಾಯಕರಾದ ಬಿ.ಎಂ. ಭಟ್, ಜಯಂತಿ ಶೆಟ್ಟಿ, ಬಿ.ಕೆ. ಇಮ್ತಿಯಾಝ್, ಯೋಗೀಶ್ ಜಪ್ಪಿನಮೊಗರು, ಮನೋಜ್ ವಾಮಂಜೂರು, ಜೆ. ಬಾಲಕೃಷ್ಣ ಶೆಟ್ಟಿ, ಈಶ್ವರೀ ಬೆಳ್ತಂಗಡಿಯವರು ಪ್ರಮುಖ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.

ಎಪ್ರಿಲ್ 29ರಂದು ನಡೆಯಲಿರುವ ಬೃಹತ್ ಸಮಾವೇಶದಲ್ಲಿ ವಿವಿಧ ವಿಭಾಗದ ಜನತೆ ಅವರ ನಿರ್ದಿಷ್ಟ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಭಾಗವಹಿಸಲಿದ್ದಾರೆ. ಬೀಡಿ, ಕಟ್ಟಡ, ಬಿಸಿಯೂಟ, ಆಟೋರಿಕ್ಷಾ ಚಾಲಕರು, ಬೀದಿಬದಿ ವ್ಯಾಪಾರಸ್ಥರು ಸೇರಿದಂತೆ ಎಲ್ಲಾ ವಿಭಾಗದ ಕಾರ್ಮಿಕರು, ರೈತರು, ವಿದ್ಯಾರ್ಥಿ ಯುವಜನರು, ಮಹಿಳೆಯರು, ದಲಿತ-ಆದಿವಾಸಿ ಬಂಧುಗಳು, ದ್ವೀಪವಾಸಿಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಇಂತಹ ನ್ಯಾಯಪರ ಹೋರಾಟದಲ್ಲಿ ಉಳ್ಳಾಲ ತಾಲೂಕಿನ ಸಮಸ್ತ ಜನತೆ ಜಾತಿ ಧರ್ಮ, ಪಕ್ಷ ಭೇದ ಮರೆತು ಭಾಗವಹಿಸುವ ಮೂಲಕ ಉಳ್ಳಾಲ ತಾಲೂಕಿನ ಅಭಿವೃದ್ಧಿಗಾಗಿ ಕೈಜೋಡಿಸಬೇಕಾಗಿದೆ.

Related Posts

Leave a Reply

Your email address will not be published.