ಹಾಸನ: ಕಾರಿನೊಳಗೆ ಗ್ರಾಮ ಪಂಚಾಯಿತಿ ನೌಕರರೊಬ್ಬರ ಶವ ಪತ್ತೆ

ಹಾಸನ: ಚನ್ನರಾಯಪಟ್ಟಣದ ರಾಮೇಶ್ವರ ಬಡಾವಣೆಯಲ್ಲಿ ರಸ್ತೆ ಬದಿ ನಿಂತಿದ್ದ ಕಾರಿನೊಳಗೆ ಗ್ರಾಮ ಪಂಚಾಯಿತಿ ನೌಕರರೊಬ್ಬರ ಶವ ಪತ್ತೆಯಾಗಿದೆ.

ದಿಡಗ ಗ್ರಾಮ ಪಂಚಾಯಿತಿಯ ಸಹಾಯಕ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಶಿವಪ್ರಸಾದ್ (32) ಎಂಬಾತ ತಮ್ಮ ಕಾರಿನೊಳಗೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

ಆಲೂರು ತಾಲ್ಲೂಕಿನ ಸಿದ್ದಾಪುರ ಗ್ರಾಮದ ನಿವಾಸಿಯಾಗಿದ್ದ ಶಿವಪ್ರಸಾದ್, ಅತಿಯಾಗಿ ಮದ್ಯ ಸೇವಿಸುವ ಚಟ ಹೊಂದಿದ್ದ ಎನ್ನಲಾಗಿದೆ. ನಿನ್ನೆ ತಡರಾತ್ರಿ ಮದ್ಯ ಸೇವಿಸಿ, ತಮ್ಮ ರೆನಾಲ್ಟ್ ಕಾರಿನೊಳಗೆ (KA-13-M-7321) ಮಲಗಿದ್ದ ಅವರು, ಕಾರಿನಲ್ಲೇ ಮೃತಪಟ್ಟಿದ್ದಾರೆ.

ಕಾರಿನ ಕೀ ಒಳಗಿರುವುದು ಹಾಗೂ ಕಾರು ನಿಂತ ಸ್ಥಿತಿಯಲ್ಲಿಯೇ ಇರುವುದನ್ನು ಗಮನಿಸಿದ ಸ್ಥಳೀಯರು, ಕೂಡಲೇ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮೆಕಾನಿಕ್ ಸಹಾಯದಿಂದ ಕಾರಿನ ಡೋರ್‌ಲಾಕ್ ತೆಗೆದು ಪರಿಶೀಲಿಸಿದಾಗ, ಶಿವಪ್ರಸಾದ್ ಕಾರಿನೊಳಗೆ ಮೃತಪಟ್ಟಿರುವುದು ದೃಢಪಟ್ಟಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Related Posts

Leave a Reply

Your email address will not be published.