ಅಶಕ್ತರ ನೆರವಿಗಾಗಿ ಪ್ರೇತವಾದ ದೇವದಾಸ್..!

ನವರಾತ್ರಿ ಬಂತೆಂದರೆ ಸಾಕು ಎಲ್ಲಾ ದೇವಿ ದೇವಸ್ಥಾನಗಳಲ್ಲಿ ವಿಶೇಷ ದೇವಿ ಆರಾಧನೆಗಳು ನಡೆದರೆ, ಇನ್ನೊಂದೆಡೆ ವಿವಿಧ ವೇಷಧಾರಿಗಳು ಮನೆ ಮನೆಗೆ ಆಗಮಿಸುವ ಮೂಲಕ ಜನರ ಮನತಣಿಸುತ್ತಾರೆ. ಹುಲಿವೇಷ, ಪುರುಷವೇಷ, ಸ್ತ್ರೀವೇಷ ಹೀಗೆ ಹಲವು ತರಹದ ವೇಷಗಳನ್ನು ನವರಾತ್ರಿಯ ಒಂಬತ್ತು ದಿನಗಳಲ್ಲಿ ನೋಡಬಹುದು. ಇಂಥಹುದೇ ಒಂದು ವೇಷದ ಮೂಲಕ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ವ್ಯಕ್ತಿಯೊಬ್ಬರು ಕಳೆದ ಹತ್ತು ವರ್ಷಗಳಿಂದ ಗಮನಸೆಳೆಯುತ್ತಿದ್ದಾರೆ. ವಿಶೇಷವಾದ ಪ್ರೇತದ ವೇಷ ಹಾಕುವ ಮೂಲಕ ತನ್ನ ಹರಕೆಯನ್ನು ತೀರಿಸುತ್ತಿರುವ ಈ ವ್ಯಕ್ತಿ ಜನ ನೀಡಿದಷ್ಟು ಹಣವನ್ನು ಪಡೆದು ಮನೋರಂಜನೆಯನ್ನೂ ನೀಡುತ್ತಿದ್ದಾರೆ.
ಹೌದು ಇದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆಮ್ಮಾಯಿ ನಿವಾಸಿ ದಿವಾಕರ್ ದೇವಾಡಿಗರ ಪ್ರತೀ ದಸರಾ ಸಂದರ್ಭದ ವೇಷ. ಪುತ್ತೂರಿನಲ್ಲಿ ಅಟೋ ಚಾಲಕನಾಗಿ ದುಡಿಯುತ್ತಿರುವ ದಿವಾಕರ್ ನವರಾತ್ರಿ ಬಂತೆಂದರೆ ಪ್ರೇತವಾಗಿ ಬಿಡುತ್ತಾರೆ. ಹೌದು ನವರಾತ್ರಿಯ ಕೊನೆಯ ಮೂರು ದಿನ ಮಾತ್ರ ಪ್ರೇತದ ವೇಷಧಾರಿಯಾಗುವ ದಿವಾಕರ್, ಪ್ರೇತದಂತೆ ಅರಚಾಡುತ್ತಾ ಮನೆ ಮನೆಗೆ, ಅಂಗಡಿ, ಅಂಗಡಿಗೆ ಅರಚಾಡುತ್ತಿರುತ್ತಾರೆ. ನವರಾತ್ರಿಯಲ್ಲಿ ಹುಲಿವೇಷ, ಪುರುಷವೇಷ, ಸ್ತ್ರೀವೇಷ ಹೀಗೆ ಹಲವು ವೇಷಗಳು ಸಾಮಾನ್ಯವಾಗಿದ್ದರೆ, ಪುತ್ತೂರಿನಲ್ಲಿ ದಿವಾಕರ್ ಹಾಕುವ ಪ್ರೇತದ ವೇಷ ತುಂಬಾನೆ ವಿಶೇಷವಾದುದು. ಹಲವು ವರ್ಷಗಳಿಂದ ನವರಾತ್ರಿಯಲ್ಲಿ ವೇಷ ಹಾಕುವುದನ್ನು ಕರಗತ ಮಾಡಿಕೊಂಡಿರುವ ದಿವಾಕರ್ ಹಿಂದೆ ರಾಘವೇಂದ್ರ ಸ್ವಾಮಿ ವೇಷ, ಈಶ್ವರನ ವೇಷ, ಕೃಷ್ಣನ ವೇಷ ಹೀಗೆ ದೇವರ ವೇಷಗಳನ್ನು ಹಾಕುತ್ತಿದ್ದರು. ಆದರೆ ಧಾರ್ಮಿಕ ವೇಷಗಳನ್ನು ಹಾಕಲು ನಿಶೇಧವೇರಿದ ಹಿನ್ನಲೆಯಲ್ಲಿ ವೇಷ ಹಾಕುವುದನ್ನೇ ಬಿಟ್ಟಿದ್ದ ದಿವಾಕರ್ ಗೆ ಕೈಕಾಲುಗಳು ಅಲುಗಾಡದಂತಹ ಸ್ಥಿತಿ ನಿರ್ಮಾಣವಾಗಿತ್ತು. ಆ ಬಳಿಕ ನವರಾತ್ರಿಗೆ ಯಾವುದಾದರೂ ವೇಷ ಹಾಕಬೇಕೆಂದು ತೀರ್ಮಾನಿಸಿದ ಅವರು ಪ್ರೇತದ ವೇಷವನ್ನು ಆಯ್ಕೆ ಮಾಡಿಕೊಂಡಿದ್ದಾರೆ.