ಎಂಆರ್ ಪಿಎಲ್ ವತಿಯಿಂದ ರಾಮಕೃಷ್ಣ ಮಠದ ಸಹಯೋಗದಲ್ಲಿ ಸ್ವಚ್ಛತ ಪಾಕ್ಷಿಕದ ಅಂಗವಾಗಿ ನಗರದ ಕದ್ರಿ ಪಾರ್ಕ್ ನಲ್ಲಿ ಸ್ವಚ್ಛತ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

“ಸ್ವಚ್ಛತೆಯೇ ಪ್ರತಿಯೊಬ್ಬರ ಜವಾಬ್ದಾರಿ” ಎಂಬ ಆಶಯದೊಂದಿಗೆ ಜುಲೈ ೧ ರಿಂದ ೧೫ ರವರೆಗೆ ದೇಶಾದ್ಯಂತ ’ಸ್ವಚ್ಛತಾ ಪಾಕ್ಷಿಕ’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ನಗರದ ಕದ್ರಿ ಉದ್ಯಾನವನದಲ್ಲಿ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಹಾಗೂ ಪ್ರವಾಸೋದ್ಯಮ ಇಲಾಖೆಯ ಮಾನ್ಯ ರಾಜ್ಯ ಸಚಿವರಾದ ಶ್ರೀ ಸುರೇಶ್ ಗೋಪಿ ಅವರು ಭಾಗವಹಿಸಿ ಮಾತನಾಡಿ, ಸ್ವಚ್ಛತೆ ಕೇವಲ ಅಭಿಯಾನವಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಮತ್ತು ಹಂಚಿಕೆಯ ಜವಾಬ್ದಾರಿಯಾಗಿದೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸ್ವಚ್ಛ ಭಾರತ ಅಭಿಯಾನ ಜನಾಂದೋಲನವಾಗಿ ಬೆಳೆದಿದ್ದು, ಅದರ ಯಶಸ್ಸಿಗೆ ಜನರ ಸಕ್ರಿಯ ಭಾಗವಹಿಸುವಿಕೆ ಅತ್ಯಗತ್ಯ ಎಂದು ಹೇಳಿದರು.

ಶ್ರೀ ರಾಮಕೃಷ್ಣ ಮಠದ ಶ್ರೀ ಜಿತಕಾಮಾನಂದ ಸ್ವಾಮೀಜಿ ಅವರು ಮಾತನಾಡಿ, ಶ್ರೀ ರಾಮಕೃಷ್ಣ ಮಠದ ವತಿಯಿಂದ ಮಂಗಳೂರು ನಗರದ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಅನೇಕ ಕೆಲಸ ಕಾರ್ಯಗಳು ನಡೆಯುತ್ತಿದೆ. ೨೦೧೫ರಿಂದಲೇ ರಾಮಕೃಷ್ಣ ಮಿಷನ್ನಿಂದ ಸ್ವಚ್ಛ ಭಾರತ್ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದೆ. ಎಂಆರ್ಪಿಎಲ್ ಸಂಸ್ಥೆ ಕೂಡ ಈ ಸ್ವಚ್ಛತಾ ಕಾರ್ಯಕ್ರಮಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದರು.

ನಂತರ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮಾತನಾಡಿ, ರಾಮಕೃಷ್ಣ ಮಿಷನ್, ಎಂಆರ್ಪಿಎಲ್ ಮತ್ತು ನಿಟ್ಟೆ ಸಂಸ್ಥೆಯ ಸಹಯೋಗದಲ್ಲಿ ಮಂಗಳೂರು ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿತ್ತು. ಸ್ವಚ್ಛತಾ ಹೀ ಸೇವಾ ಎಂಬ ಪರಿಕಲ್ಪನೆ ಅಡಿಯಲ್ಲಿ ನಮ್ಮ ಸಂಘಟನೆಯೂ ಕೆಲಸ ಮಾಡುತ್ತಿದೆ. ಆ ಮೂಲಕ ಮಂಗಳೂರು ನಗರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ ಎಂದರು.
ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, ತಾಯಿಯ ಹೆಸರಲ್ಲಿ ಗಿಡವನ್ನು ನೆಡುವಂತಹ ಎಂಬ ವಿಶೇಷವಾದ ಕಾರ್ಯಕ್ರಮ, ಶಾಲೆ, ಆರೋಗ್ಯ, ವೈದ್ಯಕೀಯ ಕ್ಷೇತ್ರಗಳಿಗೆ ತಮ್ಮ ಸಿಎಸ್ಆರ್ ಫಂಡ್ ಮೂಲಕ ಕೊಡುಗೆಗಳನ್ನು ನೀಡುವ ಮೂಲಕ ಸಾಮಾಜಿಕ ಸೇವೆಯಲ್ಲಿ ಎಂಆರ್ಪಿಎಲ್ ಸಂಸ್ಥೆ ಇದೆ ಎಂದರು.
ಇದೇ ವೇಳೆ ಸಚಿವರು ವಿದ್ಯಾರ್ಥಿಗಳಿಗೆ ಸೆಣಬಿನ ಚೀಲ ಮತ್ತು ಸಸಿಗಳನ್ನು ವಿತರಿಸಿ, ತಾಯಿಯ ಹೆಸರಿನಲ್ಲಿ ಗಿಡ ನೆಟ್ಟರು.
ಇದೇ ವೇಳೆ ಕದ್ರಿ ಪಾರ್ಕ್ನಲ್ಲಿ ಸ್ವಚ್ಛತಾ ಕಾರ್ಯಕ್ರಮ ನೆರವೇರಿತು.
ಎಂಆರ್ ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಮುಂಡ್ಕೂರು ಶ್ಯಾಮ್ ಪ್ರಸಾದ್ ಕಾಮತ್, ನಿರ್ದೇಶಕ (ರಿಫೈನರಿ) ನಂದಕಿಶೋರ್ ಪಿಳ್ಳೈ ಉಪಸ್ಥಿತರಿದ್ದರು.
ಕಾರ್ಪೊರೇಟ್ ಕಮ್ಯೂನಿಕೇಶನ್ಸ್ ವಿಭಾಗದ ಸಿಜಿಎಂ ರುಡಾಲ್ಫ್ ವಿ.ಜೆ. ನರೋನ್ಹ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

