HomeFresh Newsಪೊಲೀಸ್ ಬಲಪ್ರಯೋಗದಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ: ಸುನೀಲ್ ಕುಮಾರ್ ಬಜಾಲ್

ಪೊಲೀಸ್ ಬಲಪ್ರಯೋಗದಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ: ಸುನೀಲ್ ಕುಮಾರ್ ಬಜಾಲ್

ಮಂಗಳೂರು, ಅ. 17: ಸುರತ್ಕಲ್ ಅಕ್ರಮ ಟೋಲ್ ಗೇಟ್ ವಿರುದ್ದ ಅಕ್ಟೋಬರ್ 18 ರಂದು ನಡೆಯುವ ಹೋರಾಟವನ್ನು ಪೊಲೀಸರ ಮೂಲಕ ಹತ್ತಿಕ್ಕಲು ಸಾಧ್ಯವಿಲ್ಲ. ಹೋರಾಟಗಾರರಿಗೆ ಪೊಲೀಸ್ ನೋಟೀಸ್ ಜಾರಿಗೊಳಿಸಿ ಬೆದರಿಸುವ ತಂತ್ರಗಳಿಗೆ ನಾವು ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ ಎಂದು ಸಿಪಿಐಎಂ ಜಿಲ್ಲಾ ಮುಖಂಡರಾದ ಸುನೀಲ್ ಕುಮಾರ್ ಬಜಾಲ್ ಇಂದು 17-10-2022 ನಗರದ ಮಿನಿವಿಧಾನ ಸೌಧದ ಮುಂಭಾಗ ಸಮಾನ ಮನಸ್ಕ ಸಂಘಟನೆಗಳಿಂದ ಪೊಲೀಸರ ಕ್ರಮವನ್ನು ಖಂಡಿಸಿ , ನ್ಯಾಯಯುತ ಹೋರಾಟವನ್ನು ಹತ್ತಿಕ್ಕುವ ಬಿಜೆಪಿ ನೀತಿಯನ್ನು ವಿರೋಧಿಸಿ ನಡೆದ ದಿಢೀರ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು .

ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ, ಜನಪರ ಹೋರಾಟದ ಮುಂದೆ ಯಾವುದೇ ಶಕ್ತಿ ನಿಲ್ಲುವುದಿಲ್ಲ. ಯಾವುದೇ ರೀತಿಯಲ್ಲಿ ಹೋರಾಟ ಹತ್ತಿಕ್ಕುವ ಪ್ರಯತ್ನವನ್ನು ನಡೆಸಿದರೂ ನಾಳಿನ ಹೋರಾಟ ನಡೆಯಲಿದೆ. ಪಕ್ಷದಿಂದ ಸಂಪೂರ್ಣ ಬೆಂಬಲವಿದೆ ಎಂದರು.

ಹಿರಿಯ ದಲಿತ ಮುಖಂಡರಾದ ಎಂ. ದೇವದಾಸ್ ಮಾತನಾಡಿ, ಹೋರಾಟಗಾರರ ಮನೆಗೆ ರಾತ್ರಿ ಹೊತ್ತು ಅದರಲ್ಲೂ ಮಹಿಳಾ ಹೋರಾಟಗಾರರ ಮನೆಗೆ ಪೊಲೀಸರು ರಾತ್ರಿ ಭೇಟಿ ನೀಡಿ ನೋಟೀಸು ನೀಡಿ ಬೆದರಿಕೆ ಹಾಕುವುದು ಪ್ರಜಾಪ್ರಭುತ್ವ ವಿರೋಧಿ ಎಂದರು.

ಈ ರೀತಿ ಸಾಮಾಜಿಕ ಚಳವಳಿಯನ್ನು ಪೊಲೀಸರ ನೋಟೀಸಿನಿಂದ ಧಮನಿಸಲು ಪ್ರಯತ್ನಿಸಿದರೆ ಹೋರಾಟ ತೀವೃಗೊಳ್ಳುವುದೇ ಹೊರತು ಹಿಂಜರಿಯಲಾಗದು ಎಂದು ಸಿಪಿಐ ಮುಖಂಡ ಬಿ. ಶೇಖರ್ ಖಂಡಿಸಿದರು.ಪ್ರತಿಭಟನೆಯಲ್ಲಿ ಹೋರಾಟಗಾರ ಎಂ.ಜಿ ಹೆಗಡೆ, ದಲಿತ ನಾಯಕ ರಘು ಎಕ್ಕಾರು, ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್, ಜೆಡಿಎಸ್ ಜಿಲ್ಲಾ ಮುಖಂಡರಾದ ಅಲ್ತಾಫ್ ತುಂಬೆ, ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಅಝೀಝ್, ಸಿಪಿಎಂ ಜಿಲ್ಲಾ ಮುಖಂಡರಾದ ವಸಂತ ಆಚಾರಿ, ಯೋಗೀಶ್ ಜಪ್ಪಿನಮೊಗರು, ಸಿಪಿಐನ ವಿ. ಕುಕ್ಯಾನ್, ಸೀತಾರಾಂ ಬೇರಿಂಜ, ಕರುಣಾಕರ್, ಸುರೇಶ್, ಸಾಮರಸ್ಯ ಮಂಗಳೂರು ಸಂಘಟನೆಯ ಸಮರ್ಥ್ ಭಟ್, ಕಾಂಗ್ರೆಸ್ ಕಾರ್ಮಿಕ ಸಂಘಟನೆಯ ಮುಖಂಡ ಲಾರೆನ್ಸ್, ಡಿವೈಎಫ್‌ಐ ಮುಖಂಡ ನವೀನ್ ಕೊಂಚಾಡಿ, ರಫೀಕ್ ಹರೇಕಳ, ಸಾದಿಕ್ ಕಣ್ಣೂರು, ಮನೋಜ್ ಉರ್ವಾಸ್ಟೋರ್, ಜಗದೀಶ್ ಬಜಾಲ್, ದಲಿತ ಹಕ್ಕುಗಳ ಸಮನ್ವಯ ಸಮಿತಿಯ ತಿಮ್ಮಯ್ಯ ಕೊಂಚಾಡಿ, ಜೆಎಂಎಸ್ ಜಿಲ್ಲಾ ಮುಖಂಡರಾದ ಪ್ರಮೀಳಾ ದೇವಾಡಿಗ, ಭಾರತಿ ಬೋಳಾರ, ಪ್ರಮೀಳಾ ಶಕ್ತಿನಗರ, ಅಸುಂತ ಡಿಸೋಜಾ, ಸಿಐಟಿಯು ಮುಖಂಡರಾದ ಮುಸ್ತಫ ಕಲ್ಲಕಟ್ಟೆ , ವಿಲ್ಲಿ ವಿಲ್ಸನ್, ಮೀನುಗಾರರ ಸಂಘಟದ ಮುಖಂಡರಾದ ತಯ್ಯೂಬ್ ಬೆಂಗರೆ, ನೌಶಾದ್ ಬೆಂಗರೆ, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ್, ವಿದ್ಯಾರ್ಥಿ ಜನತಾದಳದ ಬಿಲಾಲ್ ಮೊದಲಾದವರು ಉಪಸ್ಥಿತರಿದ್ದರು. ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಸ್ವಾಗತಿಸಿ ನಿರೂಪಿಸಿದರು ಡಿವೈಎಫ್ಐ ದ.ಕ ಜಿಲ್ಲಾಧ್ಯಕ್ಷ ರಾದ ಬಿ.ಕೆ ಇಮ್ತಿಯಾಜ್ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments