ಮೂಡುಬಿದಿರೆ: ತಾಲೂಕಿನ ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಶ್ವತ್ಥಪುರ–ಒಂಟಿಮಾರು–ಮುಚ್ಚೂರು ಸಂಪರ್ಕ ರಸ್ತೆಯ ಮಂಗೇಬೆಟ್ಟು ಪ್ರದೇಶದಲ್ಲಿರುವ ಕಿರು ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದಲ್ಲದೆ ಅದರ ಒಂದು ಬದಿಯಲ್ಲಿ ಕುಸಿಯುತ್ತಿದ್ದು ಈ ನಿಟ್ಟಿನಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ರಸ್ತೆಯಲ್ಲಿ ಘನ ವಾಹನಗಳ ಸಂಚಾರವನ್ನು ಗ್ರಾಮ ಪಂಚಾಯತ್ ತಾತ್ಕಾಲಿಕವಾಗಿ ನಿಷೇಧಿಸಿದೆ.

ಮಂಗೇಬೆಟ್ಟು ಕಿರು ಸೇತುವೆ ಹಲವು ವರ್ಷಗಳ ಹಿಂದೆಯೇ ನಿರ್ಮಾಣಗೊಂಡಿದ್ದು, ಸಣ್ಣ ಪ್ರಮಾಣದ ವಾಹನಗಳ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿತ್ತು. ಆದರೆ ನೀರ್ಕೆರೆ ಸೇತುವೆ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಲ್ಲು, ಜಲ್ಲಿ ಸೇರಿದಂತೆ ಭಾರೀ ಸರಕು ಸಾಗಣೆ ಲಾರಿಗಳು ಈ ಮಾರ್ಗವನ್ನು ಪರ್ಯಾಯ ರಸ್ತೆಯಾಗಿ ಬಳಸುತ್ತಿದ್ದು ಇದರಿಂದ ಹಳೆಯ ಕಿರು ಸೇತುವೆಯ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ ಬಿರುಕು ಕಾಣಿಸಿಕೊಂಡಿತ್ತು.
ಸೇತುವೆಯ ಒಂದು ಬದಿಯಲ್ಲಿ ಕುಸಿತವೂ ಕಂಡುಬಂದಿದ್ದು, ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಘನ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ಸಂಬಂಧಿತ ಇಲಾಖೆಯು ಸೇತುವೆಯ ಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ದುರಸ್ತಿ ಕಾಮಗಾರಿಯನ್ನು ಶೀಘ್ರ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.


