ಇಂದಿನ ಆರ್ಥಿಕ ಜಗತ್ತಿನಲ್ಲಿ ಸಹಕಾರಿ ಸಂಘಗಳ ಪಾತ್ರ ಬಹುಮುಖ್ಯವಾದುದು. ಈ ನಿಟ್ಟಿನಲ್ಲಿ ಮಂಗಳೂರಿನ ಪ್ರತಿಷ್ಠಿತ ’ಧವಳ ಕೋ-ಆಪರೇಟಿವ್ ಸೊಸೈಟಿ’ ಅಲ್ಪಾವಧಿಯಲ್ಲೇ ಮೈಲಿಗಲ್ಲು ಸ್ಥಾಪಿಸಿದೆ. 2025-26ನೇ ಆರ್ಥಿಕ ವರ್ಷದಲ್ಲಿ ಸಂಘವು ಬರೋಬ್ಬರಿ 2೦೦ ಕೋಟಿ ರೂಪಾಯಿಗಳ ವಹಿವಾಟು ನಡೆಸಿ ಗಮನ ಸೆಳೆದಿದೆ.
೨೦೨೨ರಲ್ಲಿ ಪ್ರಾರಂಭವಾದ ಈ ಸಂಸ್ಥೆ, ಕೇವಲ ಮೂರು ವರ್ಷಗಳಲ್ಲಿ ಆರ್ಥಿಕವಾಗಿ ಸದೃಢವಾಗಿದೆ. ಪ್ರಸಕ್ತ ವರ್ಷದಲ್ಲಿ 50.95 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸುವ ಮೂಲಕ ಯಶಸ್ಸಿನ ಪಥದಲ್ಲಿದೆ.

ಮಂಗಳೂರಿನ ಹೃದಯಭಾಗದಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಂಘವು, ಈಗಾಗಲೇ ಚಿಕ್ಕಮಗಳೂರು ಜಿಲ್ಲೆಯ ಕಳಸ ಮತ್ತು ಕಾರ್ಕಳ ತಾಲೂಕಿನ ಹೊಸ್ಮಾರ್ನಲ್ಲಿ ತನ್ನ ಶಾಖೆಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ.
ಮಾರ್ಚ್ 31, 2026ರ ಅಂತ್ಯಕ್ಕೆ ಸಂಸ್ಥೆಯು ೨೨.೭೫ ಕೋಟಿ ರೂ. ಠೇವಣಿ ಹೊಂದಿದ್ದು, ಸುಮಾರು ೨೦.೮೦ ಕೋಟಿ ರೂ. ಸಾಲ ಸೌಲಭ್ಯವನ್ನು ತನ್ನ ಗ್ರಾಹಕರಿಗೆ ನೀಡಿದೆ.
ಸಹಕಾರಿ ಬ್ಯಾಂಕಿಂಗ್ ಮಾತ್ರವಲ್ಲದೆ, ಚಿನ್ನಾಭರಣ ಸಾಲ, ಈ-ಸ್ಟಾಂಪ್ ಮಾರಾಟ ಹಾಗೂ ಕಳಸ ಶಾಖೆಯಲ್ಲಿ ಕೃಷಿ ಉತ್ಪನ್ನಗಳ ಈಡಿನ ಸಾಲದ ವ್ಯವಸ್ಥೆಯನ್ನು ಕೂಡ ಸಂಸ್ಥೆ ಒದಗಿಸುತ್ತಿದೆ.
ತನ್ನ ಸದಸ್ಯರಿಗೆ ವಿಶೇಷ ಉಡುಗೊರೆಯಾಗಿ ಠೇವಣಿಗಳ ಮೇಲೆ ೧೦% ಹಾಗೂ ಹಿರಿಯ ನಾಗರಿಕರಿಗೆ ೧೦.೫% ಬಡ್ಡಿಯನ್ನು ಸಂಸ್ಥೆ ನೀಡುತ್ತಿದೆ.
ಸಂಸ್ಥೆಯ ಅಧ್ಯಕ್ಷರಾದ ಸುದರ್ಶನ್ ಜೈನ್ ಅವರು ಈ ಸಾಧನೆಯನ್ನು ಹೆಮ್ಮೆಯಿಂದ ಹಂಚಿಕೊಂಡಿದ್ದು, ಸಂಘವು ಸತತವಾಗಿ ಶಾಸನಬದ್ಧ ಲೆಕ್ಕಪರಿಶೋಧನೆಯಲ್ಲಿ ’ಎ’ ಶ್ರೇಣಿಯನ್ನು ಕಾಯ್ದುಕೊಂಡಿದೆ ಎಂದು ತಿಳಿಸಿದ್ದಾರೆ. ಪ್ರಾಮಾಣಿಕ ನಿರ್ದೇಶಕರು, ಸಿಬ್ಬಂದಿ ವರ್ಗ ಮತ್ತು ನಂಬಿಕಸ್ತ ಸದಸ್ಯರೇ ಈ ಯಶಸ್ಸಿಗೆ ಕಾರಣ ಎಂದು ಅವರು ಶ್ಲಾಘಿಸಿದ್ದಾರೆ.
