ರಾಜಸ್ತಾನದ ಜಲಾವರ್ನಲ್ಲಿ ಹೆಣ್ಣುಮಕ್ಕಳ ಕಳ್ಳಸಾಗಾಣಿಕೆ ತಂಡದ ಕಾರ್ಯಾಚರಣೆಯನ್ನು ಭೇದಿಸಿರುವ ಪೋಲೀಸರು ಹದಿನೈದು ಮಂದಿ ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಿದ್ದಾರೆ.

ರಾಜಸ್ತಾನದ ಜಲಾವರ್ನ ಈ ಮಕ್ಕಳ ಕಳ್ಳಸಾಗಾಣಿಕೆ ಜಾಲದಲ್ಲಿ ಮುಂಬಯಿಯ ಮೂವರು ದಲ್ಲಾಳಿಗಳು ಇದ್ದರು. ಆ ದಲ್ಲಾಳಿಗಳ ಸಹಿತ ಒಟ್ಟು ಹನ್ನೊಂದು ಮಂದಿ ಕದೀಮ ಮಾನವ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದವರನ್ನು ಬಂಧಿಸಲಾಗಿದೆ.

ಅದೇ ವೇಳೆ ಕದೀಮರ ಕೈಗೆ ಸಿಕ್ಕಿಬಿದ್ದಿದ್ದ ಹದಿನೈದು ಮಂದಿ ಹೆಣ್ಣುಮಕ್ಕಳನ್ನು ಕಾಪಾಡಲಾಗಿದೆ. ದಲ್ಲಾಳಿಗಳ ನಡುವೆ ನಡೆದಿರುವ ಬ್ಯಾಂಕ್ ವ್ಯವಹಾರಗಳ ಮಾಹಿತಿ ಸಿಕ್ಕಿದೆ. ಅವರೆಲ್ಲರ ಆಸ್ತಿ ಮತ್ತು ಬ್ಯಾಂಕ್ ವ್ಯವಹಾರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಜಲಾವರ್ ಜಿಲ್ಲಾ ಪೋಲೀಸು ವರಿಷ್ಟಾಧಿಕಾರಿ ಅಮಿತ್ ಕುಮಾರ್ ತಿಳಿಸಿದ್ದಾರೆ.

ಇನ್ನೂ ಹೆಚ್ಚು ಬಾಲಕಿಯರನ್ನು ಕಳ್ಳಸಾಗಣೆ ಮಾಡಲಾಗಿದ್ದು, ಪೋಲೀಸು ಕಾರ್ಯಾಚರಣೆಯ ಕಾರಣಕ್ಕೆ ಕೆಲವು ಮಕ್ಕಳನ್ನು ದಲ್ಲಾಳಿಗಳು ಅವರ ಮನೆಗೆ ಕಳುಹಿಸಿರುವುದು ಕೂಡ ಗೊತ್ತಾಗಿದೆ. ಕೆಲಸ ಮತ್ತು ಆರ್ಥಿಕ ನೆರವು ನೀಡುವುದಾಗಿ ಬಡ ಪೋಷಕರನ್ನು ನಂಬಿಸಿ ಹೆಣ್ಣುಮಕ್ಕಳನ್ನು ಕರೆದೊಯ್ಯಲಾಗುತ್ತಿತ್ತು.

ಬಹುತೇಕ ಹುಡುಗಿಯರನ್ನು ಹನ್ನೊಂದರ ಪ್ರಾಯದ ಬಳಿಕ ಮುಂಬಯಿ ವೇಶ್ಯಾವಾಟಿಕೆಗೆ ತಳ್ಳಲಾಗುತ್ತಿತ್ತು. ಕೆಲವರನ್ನು ನಾಮಕಾವಾಸ್ತೆ ಧನವಂತ ಮುದುಕರಿಗೆ ಎರಡನೆಯದೋ, ಮೂರನೆಯದೋ ಮದುವೆ ಎಂದು ಮಾಡಲಾಗುತ್ತಿತ್ತು.

ಹೆಣ್ಣುಮಕ್ಕಳ ಮನೆಯವರಿಗೆ ಚೂರುಪರು ಹಣ ಕೊಡಲಾಗುತ್ತಿತ್ತು; ಕಳುಹಿಸಲಾಗುತ್ತಿತ್ತು. ತನಿಖೆ ಮುಂದುವರಿದಿದೆ.


