ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಹಪಠ್ಯ ಚಟುವಟಿಕೆ ಘಟಕದ ವತಿಯಿಂದ ‘ಗೇಟ್ ಮತ್ತು ಜಾಮ್ ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳ ಮೂಲಕ ಅವಕಾಶಗಳು’ ಎಂಬ ವಿಷಯದ ಕುರಿತು ಮಾಹಿತಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಬೆಂಗಳೂರಿನ ಐಐಎಸ್ಸಿ (IISc) ಗೇಟ್ ಮತ್ತು ಜಾಮ್ ರಾಯಭಾರಿಗಳಾದ ಕೃಷ್ಣಗ ಎಂ. ಮತ್ತು ಅಖಿಲಾ ಎಸ್. ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಗೇಟ್ ಮತ್ತು ಜಾಮ್ ಪರೀಕ್ಷೆಗಳ ಅರ್ಹತಾ ಮಾನದಂಡಗಳು, ಪರೀಕ್ಷಾ ವಿಧಾನ, ಪಠ್ಯಕ್ರಮ, ಸಿದ್ಧತಾ ತಂತ್ರಗಳು ಹಾಗೂ ವೃತ್ತಿ ಅವಕಾಶಗಳ ಕುರಿತು ಅವರು ವಿವರವಾದ ಮಾಹಿತಿ ನೀಡಿದರು. ಐಐಟಿಗಳು (IITs), ಐಐಎಸ್ಸಿ ಸೇರಿದಂತೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆ ಕೈಗೊಳ್ಳಲು ಇರುವ ಅವಕಾಶಗಳ ಬಗ್ಗೆಯೂ ತಿಳಿಸಿದರು.
ಪರೀಕ್ಷಾ ಸಿದ್ಧತೆಯನ್ನು ಆರಂಭಿಕ ಹಂತದಿಂದಲೇ ಪ್ರಾರಂಭಿಸುವುದು, ವ್ಯವಸ್ಥಿತ ಅಧ್ಯಯನ ಹಾಗೂ ಪರಿಣಾಮಕಾರಿ ಸಮಯ ನಿರ್ವಹಣೆಯ ಮಹತ್ವವನ್ನು ಸಂಪನ್ಮೂಲ ವ್ಯಕ್ತಿಗಳು ಒತ್ತಿ ಹೇಳಿದರು.
ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳ ಕುರಿತು ಅರಿವು ಮೂಡಿಸುವುದರೊಂದಿಗೆ, ಉನ್ನತ ಶಿಕ್ಷಣ, ಸಂಶೋಧನೆ, ವಿದ್ಯಾರ್ಥಿವೇತನ ಹಾಗೂ ಉತ್ತಮ ವೃತ್ತಿಜೀವನದ ಅವಕಾಶಗಳನ್ನು ಅನ್ವೇಷಿಸಲು ಪ್ರೇರಣೆ ನೀಡಿತು.


