ಮಂಗಳೂರು: ಫೆ.12 ರಿಂದ 16 ವರಗೆ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಕುಂಭ ಮಹೋತ್ಸವ
ಮಂಗಳೂರು: ಕಳೆದ ವರ್ಷ ಸಂಪೂರ್ಣವಾಗಿ ನವೀಕರಣಗೊಂಡು ಸಂಭ್ರಮದಿಂದ ಬ್ರಹ್ಮಕಲಶೋತ್ಸವವನ್ನು ಆಚರಿಸಿರುವ ಕುಲಶೇಖರದ ಶ್ರೀ ವೀರನಾರಾಯಣ ದೇವರ ವರ್ಷಾವಧಿ ಜಾತ್ರೋತ್ಸವ “ಕುಂಭ ಮಹೋತ್ಸವ” ಎಂಬ ಪದನಾಮದಲ್ಲಿ ಆಚರಿಸಲ್ಪಡುತ್ತಿದ್ದು, ಈ ಬಾರಿಯ ಮಹೋತ್ಸವ ಫೆ. 12 ರಿಂದ 16ರ ತನಕ ಸಂಭ್ರಮದಿಂದ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಶ್ರೀ ಅನಂತ ಉಪಾದ್ಯಾಯ ಮತ್ತು ಶ್ರೀ ಹರಿ ಉಪಾದ್ಯಾಯರು ತಂತ್ರಿ ಸ್ಥಾನದಲ್ಲಿದ್ದು, ಪರಮಪೂಜ್ಯರಾದ ಮಾಣಿಲ ಶ್ರೀಗಳ ಮಾರ್ಗದರ್ಶನದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ಜನಾರ್ದನ ಭಟ್ ಅವರ ಉಪಸ್ಥಿತಿಯಲ್ಲಿ ವೈದಿಕ, ಧಾರ್ಮಿಕ ವಿಧಿಗಳು ಸಂಪನ್ನಗೊಳ್ಳಲಿದೆ.
ಫೆ.12ರಂದು ಸಂಜೆ 6.30ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಶ್ರೀ ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿ ಶ್ರೀ ದುರ್ಗಾ ಮಹಾಲಕ್ಷ್ಮಿ ಕ್ಷೇತ್ರ ಮಾಣಿಲ ಹಾಗೂ ಶ್ರೀ ಶ್ರೀ ಕಾಳ ಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಆನೆಗುಂದಿ ಮಹಾ ಸಂಸ್ಥಾನಮ್ ಕಟಪಾಡಿ ಇವರುಗಳು ಆಶೀರ್ವಚನ ನೀಡಲಿದ್ದು,. ಸ್ಪೀಕರ್ ಯು.ಟಿ.ಖಾದರ್, ಸಂಸದರಾದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಿ.ವೇದವ್ಯಾಸ ಕಾಮತ್, ಮ.ನ.ಪಾ ಮಹಾಪೌರರಾದ ಸುಧೀರ್ ಶೆಟ್ಟಿ ಕಣ್ಣೂರುಮತ್ತು ಕುಲಾಲ ಸಮಾಜದ ಮುಖಂಡರು ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ ಪುರುಷೋತ್ತಮ ಕುಲಾಲ್ ಕಲ್ಬಾವಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಫೆ.13ರಂದು ಮಂಗಳವಾರ ಮದ್ಯಾಹ್ನ 12ರಿಂದ ಮಹಾ ರಥೋತ್ಸವ ನಡೆಯಲಿದ್ದು ರಾತ್ರಿ ಶ್ರೀ ದೇವರ ಜಾತ್ರಾಮಹೋತ್ಸವ ನಡೆಯಲಿದೆ. ಫೆ.14ರಂದು ರಾತ್ರಿ ವೈಭವದ ಪೇಟೆ ಸವಾರಿ ಸಂಪನ್ನಗೊಳ್ಳಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಫೆ.11 ರಂದು ಸಂಜೆ 5.30ಕ್ಕೆ ನಾಗೇಶ್ ಕುಲಾಲ್ ಸಾರಥ್ಯದ ಕಲಾಕುಂಭ ಕುಳಾಯಿ ಇವರ ಪರಮಾತ್ಮ ಪಂಜುರ್ಲಿ ಪಾರ್ದನ ಆಧಾರಿತ ತುಳುನಾಟಕ, ಫೆ.12ರಂದು ನವೋದಯ ಮಹಿಳಾ ಮಂಡಳಿ (ರಿ) ಕದ್ರಿ ಇವರ ಸಿರಿಗಂಗೆ ಭಕ್ತಿ ಪ್ರಧಾನ ತುಳುನಾಟಕ, ಫೆ.14ರಂದು ಶ್ರೀಮತಿ ಸವಂತಿ ಮತ್ತು ಬಿ.ಪ್ರೇಮಾನಂದ ಕುಲಾಲ್ ಕೋಡಿಕಲ್ ಹಾಗೂ ಕುಮಾರಿ ಶ್ರೇಯಾ ಮತ್ತು ಬೇಬಿ ಹಶ್ಮಿತಾರವರ ಸೇವೆಯಾಗಿ ಕಟೀಲು ಮೇಳದ ಶ್ರೀ ದೇವಿ ಮಹಾತ್ಮ, ಬಯಲಾಟ ಪ್ರದರ್ಶನಗೊಳ್ಳಲಿದೆ.
ಪ್ರತಿ ದಿನ ಮಧ್ಯಾಹ್ನ ರಾತ್ರಿ ಮಹಾಪ್ರಸಾದ ಅನ್ನಸಂತರ್ಪಣೆ ನಡೆಯಲಿದೆ. ಫೆ.16ರಂದು ಬೆಳಿಗ್ಗೆ ಸಂಭ್ರಮದ ಓಕುಳಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾರರ ಮಾತೃ ಸಂಘ(ರಿ) ಅಧ್ಯಕ್ಷರಾದ ಮಯೂರ್ ಉಳ್ಳಾಲ್, ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ (ರಿ)
ಅಧ್ಯಕ್ಷರುದ ಬಿ.ಪ್ರೇಮಾನಂದ ಕುಲಾಲ್ ಕೋಡಿಕಲ್, ಕ್ಷೇತ್ರದ ಆಡಳಿತ ಸಮಿತಿಯ ಮೊಕ್ತೇಸರ ಗಿರಿಧರ ಜೆ.ಮೂಲ್ಯ , ಶ್ರೀ ವೀರನಾರಾಯಣ ದೇವಸ್ಥಾನ ಸೇವಾ ಸಮಿತಿ.ಅಧ್ಯಕ್ಷರು ಸುಂದರ್ ಕುಲಾಲ್ ಶಕ್ತಿ ನಗರ ಉಪಸ್ಥಿತರಿದ್ದರು.
ಶ್ರೀ ವೀರ ನಾರಾಯಣ ದೇವರಿಗೆ ಮತ್ತು ಉತ್ಸವ ಮೂರ್ತಿಗೆ ಈ ಬಾರಿ ಸುಮಾರು 10ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ವರ್ಣ ಕವಚ ಸಮರ್ಪಿಸಲು ನಿರ್ಧರಿಸಲಾಗಿದೆ.
ದೇವಸ್ಥಾನದ ಸುತ್ತಲೂ ಮತ್ತು ವೇದಿಕೆ ಮುಂಭಾಗಕ್ಕೆ ಮೇಲ್ಚಾವಣಿಯನ್ನು ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡುವ ಯೋಜನೆಯಾಗಿದೆ.