ಮಂಗಳೂರು ಉತ್ತರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಡಾ. ಭರತ್ ವೈ. ಶೆಟ್ಟಿಯವರ ಪ್ರಗತಿ ಪಥ ಕೈಪಿಡಿ ಬಿಡುಗಡೆ

ಸುರತ್ಕಲ್: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಭರತ್ ವೈ. ಶೆಟ್ಟಿಯವರು ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸಲು “ಪ್ರಗತಿ ಪಥ” ಕೈಪಿಡಿಯನ್ನು ಬಿಡುಗಡೆಗೊಳಿಸಿದರು. ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತಾಡಿದ ಮಂಗಳೂರು ಉತ್ತರ ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ ಅವರು, “ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಡಾ|| ವೈ ಭರತ್ ಶೆಟ್ಟಿಯವರಿಂದ ಕಳೆದ 5 ವರ್ಷಗಳಲ್ಲಿ ಸುಮಾರು 2250 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಅವುಗಳಲ್ಲಿ ಮುಖ್ಯರಸ್ತೆ ಮತ್ತು ಒಳರಸ್ತೆಗಳ ಕಾಂಕ್ರೀಟೀಕರಣ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ, ಕುಡಿಯುವ ನೀರಿನ ಯೋಜನೆಗಳು, ನಗರ ಸುಂದರೀಕರಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗಳು ಸೇರಿವೆ.

ಶಾಸಕರಾಗಿ ಆಯ್ಕೆಯಾದ ಪ್ರಾರಂಭದ ವರ್ಷದಲ್ಲಿ ಸುರಿದ ಮಹಾಮಳೆಯಿಂದಾಗಿ ಉಂಟಾದ ನೆರೆಹಾವಳಿಯ ಸಂಧರ್ಭದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಿ, ನಂತರದ 2 ವರ್ಷಗಳಲ್ಲಿ ಮಹಾಮಾರಿ ಕೋವಿಡ್ ಹೊಡೆತಕ್ಕೆ ಇಡೀ ಜಗತ್ತೇ ತತ್ತರಿಸಿದಾಗ ಕ್ಷೇತ್ರದೆಲ್ಲೆಡೆ ಆಹಾರ-ಔಷಧ-ಉಚಿತ ಆಂಬ್ಯುಲೆನ್ಸ್‍ಗಳನ್ನು ನೀಡಿ ಸಹಕರಿಸಿರುತ್ತಾರೆ. ಹೀಗೆ ಅಭಿವೃದ್ಧಿಯನ್ನು ಜನರಿಗೆ ಮುಟ್ಟಿಸಲು ಪ್ರಗತಿ ಪಥ ಅನ್ನುವ ಕೈಪಿಡಿಯನ್ನು ಬಿಡುಗಡೆಗೊಳಿಸಲಾಗಿದೆ” ಎಂದರು.ಬಳಿಕ ಮಾತಾಡಿದ ಅಭ್ಯರ್ಥಿ ಡಾ ಭರತ್ ವೈ. ಶೆಟ್ಟಿ ಅವರು, “ನನ್ನ ಅವಧಿಯಲ್ಲಿ ಕೊರೋನಾ ಮತ್ತು ನೆರೆ ಪರಿಸ್ಥಿತಿ ಬಹಳವಾಗಿ ಕಾಡಿದರೂ ಜನರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಸುಮಾರು 2250 ಕೋಟಿ ರೂ. ಅನುದಾನವನ್ನು ತಂದು ರಸ್ತೆ, ಕುಡಿಯುವ ನೀರು, ಬೀಚ್ ಟೂರಿಸಂ, ಪಾರ್ಕ್ ಅಭಿವೃದ್ಧಿ, ಹೈಟೆಕ್ ಬಸ್ ನಿಲ್ದಾಣ, ಚರಂಡಿ ಯೋಜನೆ, ಕೆರೆಗಳ ಅಭಿವೃದ್ಧಿ ತ್ಯಾಜ್ಯ ಸಂಸ್ಕರಣಾ ಘಟಕ, ಸರ್ಕಲ್, ಪ್ರಮುಖ ಜಂಕ್ಷನ್ ಗಳ ಅಭಿವೃದ್ಧಿ ಇತ್ಯಾದಿಗೆ ಆದ್ಯತೆ ನೀಡಿದ್ದೇನೆ. ಮುಡಾ, ಸ್ಮಾರ್ಟ್ ಸಿಟಿ ಅನುದಾನವನ್ನೂ ಇದಕ್ಕಾಗಿ ಬಳಸಿಕೊಂಡಿದ್ದೇನೆ. ಗೋಹತ್ಯಾ ನಿಷೇಧ ಕಾನೂನು ನಿಯಮಾವಳಿ ಬಳಸಿ ಅಕ್ರಮ 3 ಕಸಾಯಿಖಾನೆಗಳ ಮುಟ್ಟುಗೋಲು, ಕ್ಷೇತ್ರದ ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಗೊಳಿಸಲಾಗಿರುತ್ತದೆ.
ರಾಜ್ಯದ ಪ್ರಪ್ರಥಮ ಹೈಟೆಕ್ ಬಸ್‍ನಿಲ್ದಾಣ ನಿರ್ಮಾಣ, ರಾಜ್ಯದ 2ನೇ ಒಣತ್ಯಾಜ್ಯ ವಿಲೇವಾರಿ(ಒಖಈ) ಘಟಕ ನಿರ್ಮಾಣ, ಹಲವಾರು ವರ್ಷಗಳಿಂದ ಹಕ್ಕುಪತ್ರ ಪಡೆಯದ 6500 ಕುಟುಂಬಕ್ಕೆ ಹಕ್ಕುಪತ್ರ ವಿತರಣೆಯು ಪ್ರಮುಖವಾಗಿದೆ” ಎಂದರು.

“ಕಾವೂರು ಕೆರೆ ಅಭಿವೃದ್ಧಿ, ಕಾನ ಬಾಳ ರಸ್ತೆಯ ಕಾಮಗಾರಿಯು ಪ್ರಗತಿಯಲ್ಲಿದೆ.ಸುಮಾರು 20 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ, ಸುಮಾರು 5 ಕೋಟಿ ವೆಚ್ಚದಲ್ಲಿ ಸುರತ್ಕಲ್ ಜಂಕ್ಷನ್, 3.5 ಕೋಟಿ ವೆಚ್ಚದಲ್ಲಿ ಹೊನ್ನಕಟ್ಟೆ ಜಂಕ್ಷನ್, 5 ಕೋಟಿ ವೆಚ್ಚದಲ್ಲಿ ಕೊಟ್ಟಾರ ಚೌಕಿ ಜಂಕ್ಷನ್‍ಗಳಿಗೆ ನವಸ್ಪರ್ಶ ನೀಡಲಾಗುತ್ತಿದೆ. ಸುರತ್ಕಲ್‍ನಲ್ಲಿ ವಿದ್ಯುತ್ ಶವಾಗಾರ ನಿರ್ಮಾಣ, ಸರ್ವಜ್ಞ ವೃತ್ತ ಸ್ಥಾಪನೆ, ಗುರುಪುರ ಸೇತುವೆ, ಮುಲ್ಲರಪಟ್ಟ ಸೇತುವೆ, ಪಚ್ಚನಾಡಿ ರೈಲ್ವೆ ಸೇತುವೆಗಳನ್ನು ನಿರ್ಮಿಸಲಾಗಿದೆ” ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಡಾ. ಭರತ್ ವೈ. ಶೆಟ್ಟಿ, ಮಂಗಳೂರು ಉತ್ತರ ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಶರತ್ ಶೆಟ್ಟಿ, ಸಂದೀಪ್ ಪಚ್ಚನಾಡಿ, ರಾಜೇಶ್ ಕೊಟ್ಟಾರಿ, ಕೃಷ್ಣ ಶೆಟ್ಟಿ ಕಡಬ, ಮಂಡಲ ಉಪಾಧ್ಯಕ್ಷ ಮಹೇಶ್ ಮೂರ್ತಿ ಸುರತ್ಕಲ್, ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ಶ್ವೇತಾ ಪೂಜಾರಿ, ಮಂಗಳೂರು ಉತ್ತರ ಯುವಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ವಿಠಲ ಶೆಟ್ಟಿ, ಕಾರ್ಪೋರೇಟರ್ ಗಳಾದ ನಯನ ಕೋಟ್ಯಾನ್, ವರುಣ್ ಚೌಟ, ಶೋಭಾ ರಾಜೇಶ್, ಮಾಜಿ ಕಾರ್ಪೋರೇಟರ್ ಅಶೋಕ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.