ಇರುವೈಲ್ನಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ : 35 ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ

ಮೂಡುಬಿದಿರೆ: ದ.ಕ ಜಿಲ್ಲಾಡಳಿತ , ದ.ಕ. ಜಿ.ಪಂ ವತಿಯಿಂದ ಇರುವೈಲು ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಶುಕ್ರವಾರ ನಡೆದ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಡೀಮ್ಡ್ ಫಾರೆಸ್ಟ್, ಹಾಗೂ ಖಾಸಗಿಗೆ ಸಂಬಂಧಿಸಿದ ಅರ್ಜಿಗಳನ್ನು ಪರಿಶೀಲಿಸಿ 35 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಸರ್ಕಾರದ ಮಟ್ಟದಲ್ಲಿ ಪರಿಹರಿಸಬಹುದಾದ ಅರ್ಜಿಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು. ಇರುವೈಲ್ ಪಂಚಾಯಿತಿ ಅಧ್ಯಕ್ಷ ವಲೇರಿಯನ್ ಕುಟಿನ್ಹಾ ಅಧ್ಯಕ್ಷತೆ ವಹಿಸಿದ್ದರು. 37 ಮಂದಿಗೆ ಹಕ್ಕುಪತ್ರ 20 ಮಂದಿಗೆ ಪಿಂಚಣಿ ಪತ್ರ ವಿತರಿಸಲಾಯಿತು. ಜಿಲ್ಲಾಧಿಕಾರಿ ಎಂ.ಆರ್ ರವಿಕುಮಾರ್ ಮಾತನಾಡಿ, ಇರುವೈಲ್ , ತೋಡಾರು ಗ್ರಾಮಗಳಲ್ಲಿ ಸುಮಾರು 300 ಎಕ್ರೆ ಡೀಮ್ಡ್ ಫಾರೆಸ್ಟ್ ಗುರುತಿಸಲಾಗಿದ್ದು ಶೇ50 ರಷ್ಟು ತೆರವುಗೊಂಡಿದೆ. ಅರಣ್ಯ ಇಲಾಖೆಯು ಅರಣ್ಯಕ್ಕೆ ಮೀಸಲಾದ ಜಾಗದ ಗಡಿ ಗುರುತು ನಡೆಸಬೇಕು. ಕಂದಾಯ ಮತ್ತು ಸರ್ವೆ ಇಲಾಖೆಯು ಕಂದಾಯಕ್ಕೆ ಸಂಬಂಧಿಸಿದ ಜಾಗದ ಗುರುತು ಮಾಡಬೇಕು. ಡೀಮ್ಡ್ ಫಾರೆಸ್ಟ್ ವಿರಹಿತವಾದ ಸ್ಥಳವನ್ನು ಅರ್ಹ ಫಲಾನುಭವಿಗಳಿಗೆ ನೀಡಲು ಕ್ರಮಕೈಗೊಳ್ಳಬೇಕು ಪಂಚಾಯತ್ ವತಿಯಿಂದ ತುರ್ತಾಗಿ ನಿವೇಶನ ರಹಿತರ ಪಟ್ಟಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದರು.

ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ತಹಸೀಲ್ದಾರ್ ಸಚ್ಚಿದಾನಂದ ಸತ್ಯಪ್ಪ ಕುಚನೂರು, ತಾ.ಪಂ ಕಾರ್ಯನಿರ್ವಹಣಾಧಿಕಾರಿ ದಯಾವತಿ, ಇರುವೈಲ್ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.ಬಳಿಕ ಜಿಲ್ಲಾಧಿಕಾರಿಯವರು ಎಸ್.ಸಿ ಎಸ್.ಟಿ ಕಾಲೋನಿಗೆ ಭೇಟಿ ನೀಡಿ ಕುಂದು ಕೊರತೆ ಪರಿಶೀಲಿಸಿದರು. ಹಾಗೂ ಇರುವೈಲ್ ಪ್ರಾಥಮಿಕ ಶಾಲೆ, ಅಂಚೆ ಕಚೇರಿ ಬಳಿ ತಡೆಗೋಡೆ ನಿರ್ಮಿಸುವ ಕುರಿತು ಸ್ಥಳ ಪರಿಶೀಲನೆ ನಡೆಸಿದರು.
