ಮೂಡುಬಿದಿರೆ: ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಪುರಸಭಾ ಅಧಿಕಾರಿಗೆ ಚಾಟಿ ಬೀಸಿದ ಲೋಕಾಯುಕ್ತ ಅಧಿಕಾರಿಗಳು

ಮೂಡುಬಿದಿರೆ: ಇಲ್ಲಿನ ಸ್ವರಾಜ್ಯ ಮೈದಾನದ ಬಳಿ ಅಕ್ರಮವಾಗಿ ಗ್ಯಾರೇಜ್ ನಡೆಯುತ್ತಿದ್ದು ಇದರಿಂದ ಹೊರ ಬರುತ್ತಿರುವ ಕೊಳಚೆ ನೀರಿನಿಂದ ಸಾರ್ವಜನಿಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಈ ಬಗ್ಗೆ ಪುರಸಭೆಗೆ ದೂರು ನೀಡಿದಾಗ ಕ್ರಮಕೈಗೊಂಡಿಲ್ಲ ನಂತರ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು ಅವರು ಪುರಸಭೆಗೆ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು ಆದರೆ ಮತ್ತೂ ಪುರಸಭೆ ಕ್ರಮ ಕೈಗೊಂಡಿಲ್ಲವೆಂದು ಸ್ಥಳೀಯರಾದ ಸದಾನಂದ ನಾರಾವಿ ಅವರು ಗುರುವಾರ ಆಡಳಿತ ಸೌಧದಲ್ಲಿ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಲೋಕಾಯುಕ್ತಕ್ಕೆ ಲಿಖಿತ ದೂರು ನೀಡಿದರು.


ಸಮಸ್ಯೆಯ ಬಗ್ಗೆ ಆಲಿಸಿದ ಲೋಕಾಯುಕ್ತ ಅಧೀಕ್ಷಕ ಸೈಮನ್ ಸಿ.ಎ. ಅವರು ಪುರಸಭಾ ಅಧಿಕಾರಿಗಳಿಗೆ ಮಾತಿನ ಚಾಟಿ ಬೀಸಿ ಗ್ಯಾರೇಜನ್ನು ತೆರವುಗೊಳಿಸಲು ನಿಮ್ಮಿಂದ ಸಾಧ್ಯವಾಗದಿದ್ದರೆ ನಾವು ಪುರಸಭೆಯ ಮೇಲೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಸ್ವರಾಜ್ಯ ಮೈದಾನದ ದಿನವಹಿ ಮಾರುಕಟ್ಟೆಯಲ್ಲಿ ಮಾಂಸದಂಗಡಿಯ ವಾಸನೆಯುಕ್ತ ತ್ಯಾಜ್ಯ ನೀರು ರಸ್ತೆಗೆ ಹರಿದು ಬರುತ್ತಿದೆ ಹಾಗೂ ಅನಧಿಕೃತವಾಗಿ ನಡೆಯುತ್ತಿರುವ ಫಾಸ್ಟ್ ಫುಡ್ ಅಂಗಡಿಗಳಿಂದ ರಸ್ತೆಗಳಿಗೆ ಕೊಳಚೆ ನೀರು ಹರಿದು ಬರುತ್ತಿದ್ದು ಇಲ್ಲಿ ವಾಯು ವಿಹಾರ ಮಾಡುವವರಿಗೆ, ನಡೆದುಕೊಂಡು ಹೋಗುವ ಶಾಲಾ ಮಕ್ಕಳು ಸಹಿತ ಸಾರ್ವಜನಿಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಈ ಬಗ್ಗೆ ಸಾರ್ವಜನಿಕರು ಪುರಸಭೆಗೆ ಹಲವು ಬಾರಿ ದೂರು ನೀಡಿದ್ದಾರೆ ಆದರೆ ಪುರಸಭೆಯು ತಾತ್ಕಾಲಿಕವಾಗಿ ಪರಿಹಾರ ನೀಡುತ್ತಿದೆ ಹೊರತು ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ಗೋಜಿಗೆ ಹೋಗುತ್ತಿಲ್ಲವೆಂದು ರಾಜೇಶ್ ನಾಯ್ಕ್ ಅಧಿಕಾರಿಗಳ ಗಮನಕ್ಕೆ ತಂದರು ಈ ಬಗ್ಗೆಯೂ ಕ್ರಮಕೈಗೊಳ್ಳುವುದಾಗಿ ಲೋಕಾಯುಕ್ತ ಅಧಿಕಾರಿಗಳು ತಿಳಿಸಿದರು.

ಇಲ್ಲಿನ “ರಿಂಗ್ ರೋಡ್ “ನಲ್ಲಿ ಕಂಡು ಬಂದಿರುವ ಸಮಸ್ಯೆಗಳ ಬಗ್ಗೆ ಕಳೆದ ನಾಲ್ಕೂವರೆ ವರ್ಷಗಳಿಂದ ಹಿಂದೆ ನಡೆದ ಲೋಕಾಯುಕ್ತ ಸಭೆಯಲ್ಲಿ ದೂರು ನೀಡಿದ್ದು ಈ ಬಗ್ಗೆ ಅಧಿಕಾರಿಗಳು ಯಾವುದೇ ರೀತಿಯ ಕ್ರಮಕೈಗೊಂಡಿಲ್ಲವೆಂದು ಸ್ಥಳೀಯರಾದ ಧನಂಜಯ ಮೂಡುಬಿದಿರೆ ಅವರು ಅಧಿಕಾರಿಗಳ ಗಮನಕ್ಕೆ ತಂದರು.
ಈ ಬಗ್ಗೆ ಲೋಕಾಯುಕ್ತ ಎಸ್ಪಿ ಸೈಮನ್ ಸಿ.ಎ.ಅವರು ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ವಿಚಾರಿಸಿದಾಗ ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ಉತ್ತರಿಸಿದಾಗ ಪರಿವೀಕ್ಷಣೆಯ ವರದಿ ಎಲ್ಲಿದೆ ಎಂದು ಪ್ರಶ್ನಿಸಿ ನೀಡುವಂತೆ ಕೇಳಿದಾಗ ಅಧಿಕಾರಿಗಳ ಕೈಯಲ್ಲಿ ವರದಿ ಇರಲಿಲ್ಲ ಆಗ ಎರಡು ದಿನಗಳ ಒಳಗೆ ಸ್ಥಳ ಪರಿಶೀಲನೆ ವರದಿ ಸಲ್ಲಿಸಬೇಕೆಂದು ತಾಕೀತು ಮಾಡಿದರು.


ಮೂಡುಬಿದಿರೆ ಸ್ವರಾಜ್ಯ ಮೈದಾನದ ಬಳಿ ಇರುವ ಕ್ರೀಡಾ ಇಲಾಖೆಯ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವುದರಿಂದ ಕ್ರಿಕೆಟ್ ಆಡಲು ಅವಕಾಶ ಸಿಗುತ್ತಿಲ್ಲ ಆದ್ದರಿಂದ ಇಲ್ಲಿ ಕ್ರಿಕೆಟ್ ಪಂದ್ಯಾಟಗಳನ್ನು ನಡೆಸಲು ತಮಗೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ಬೆದ್ರ ಕ್ರಿಕೆಟ್ ಯೂನಿಯನ್ ನ ಅಧ್ಯಕ್ಷ ಅಶ್ರಫ್ ವಾಲ್ಪಾಡಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಗೆ ಮನವಿಯನ್ನು ಸಲ್ಲಿಸಿ ಆಗ್ರಹಿಸಿದರು. ಮೂಡುಬಿದಿರೆಯಿಂದ ಮಹಾವೀರ ಕಾಲೇಜು ಹೋಗುವ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ನೀರು, ಕೊಳಚೆ ನೀರು ತನ್ನ ಗದ್ದೆಗೆ ಸೇರುತ್ತಿದೆ ಆದ್ದರಿಂದ ಸೂಕ್ತವಾದ ಚರಂಡಿ ವ್ಯವಸ್ಥೆ ಮಾಡುವಂತೆ ಕೃಷಿಕರಾದ ರೋನಿ ಮೆಂಡೋನ್ಸಾ, ಇರುವೈಲು ಗ್ರಾ.ಪಂ.ನೂತನ ಕಟ್ಟಡ ನಿರ್ಮಾಣವು ನರೇಗಾ ಮೂಲಕವೂ ಪಂಚಾಯತ್ ಮೂಲಕವೂ ಆಗಿ ಡಬಲ್ ಬಿಲ್ಲ್ ಆಗಿರುವುದರ ಬಗ್ಗೆ ಸಂದೇಹ ವ್ಯಕ್ತ ಪಡಿಸಿ ತನಿಖೆ ನಡೆಸುವಂತೆ ದೂರು, ಸಿ.ಎಂ.ಅಮೃತ ನಗರೋತ್ಥಾನ ಯೋಜನೆಯಲ್ಲಿರುವ ಅಂಗವಿಕಲರ ಪೋಷಣಾ ಭತ್ಯೆ ಲಭಿಸದಿರುವ ಬಗ್ಗೆ ಬಾಲಕೃಷ್ಣ ನಾಯಕ್, ವಿವಿಧ ಕಡೆಗಳಲ್ಲಿ ಫ್ಲಾಟಿಂಗ್ ಆಗದಿರುವ ಬಗ್ಗೆ ಸಾರ್ವಜನಿಕರು ದೂರುಗಳನ್ನು ಸಲ್ಲಿಸಿದರು.


ಸಹಾಯಕ ಪೊಲೀಸ್ ಅಧೀಕ್ಷಕಿ ಗಾನಾ ಪಿ.ಕುಮಾರ್, ಮೂಡುಬಿದಿರೆ ತಾಲೂಕು ತಹಶೀಲ್ದಾರ್ ಮುಕುಲ್ ಜೈನ್ ಪೊಲೀಸ್ ನಿರೀಕ್ಷಕ ಸುರೇಶ್ ಈ ಸಂದರ್ಭದಲ್ಲಿದ್ದರು.
ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ 16 ಅರ್ಜಿಗಳನ್ನು ಸ್ವೀಕರಿಸಲಾಯಿತು.
ವಿವಿಧ ಇಲಾಖೆಯ 35 ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Posts

Leave a Reply

Your email address will not be published.