ರಾಜ್ಯ ಬಜೆಟ್ ಸರ್ವತೋಮುಖ ಅಭಿವೃದ್ಧಿಗೆ ಪೂರಕ ಬಜೆಟ್ : ನಳಿನ್ ಕುಮಾರ್ ಕಟೀಲ್

ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಬಜೆಟ್ ಆಗಿದೆ. ಸರ್ವವ್ಯಾಪಿ, ಸರ್ವಸ್ಪರ್ಶಿ ಬಜೆಟ್ ಇದಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ರಾಜ್ಯ ಬಜೆಟ್ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದರು. ಆರೋಗ್ಯದಲ್ಲಿ ಪರಿವರ್ತನೆ ತರೋ ಕೆಲಸ ಸರ್ಕಾರ ಮಾಡಿದೆ. ಕೃಷಿಕರು, ಮಹಿಳೆಯರು, ಮತ್ತು ಯುವಕರ ಪರವಾದ ಬಜೆಟ್ಈಗ ಮೂರು ಲಕ್ಷ ಕೋಟಿಗೂ ಅಧಿಕ ಬಜೆಟ್ ಮಂಡನೆಯಾಗಿದೆ. ಇದು ಕೃಷಿಕನ ಕನಸಿನ ಬಜೆಟ್, ಕೃಷಿಕರ ಪರವಾದ ಬಜೆಟ್, ಐದು ಲಕ್ಷದವರೆಗೆ ರೈತರಿಗೆ ಬಡ್ಡಿ ರಹಿತ ಸಾಲ ಘೋಷಣೆ, ಅಡಿಕೆ ರೋಗ ಸಂಶೋಧನೆಗೆ ಹತ್ತು ಕೋಟಿ ಬಿಡುಗಡೆ ಮಾಡಲಾಗಿದೆ. ಕುಮ್ಕಿ ಸಮಸ್ಯೆಗಳನ್ನು ಉಪ ಸಮಿತಿಗೆ ಒಪ್ಪಿಸಲಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವ್ಯವಸ್ಥೆ, ಪದವಿ ಪಡೆದವರಿಗೆ ಎರಡು ಸಾವಿರ ಕೊಡುವ ಯೋಜನೆ, ದ.ಕ ಜಿಲ್ಲೆಗೆ ಗುರುಪುರ ನೇತ್ರಾವತಿ ನದಿಗೆ ಬಾರ್ಜ್ ಜೋಡನೆ ಮಾಡಲಾಗಿದೆ ಎಂದರು. ಇನ್ನು ಬಜೆಟ್ ಮಂಡನೆ ವೇಳೆ ವಿಪಕ್ಷ ಸದಸ್ಯರು ಕಿವಿಗೆ ಹೂ ಇಟ್ಟು ಆಗಮಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಳಿನ್ ಕುಮಾರ್ ಕಟೀಲ್ ಅವರು, ಕಾಂಗ್ರೆಸ್ ಕಳೆದ ಎಪ್ಪತ್ತು ವರ್ಷಗಳಲ್ಲಿ ಹೂ ಇಟ್ಟೇ ದಿನ ದೂಡಿದ್ದಾರೆ. ಜನರಿಗೆ ಮಂಕುಬೂದಿ ಎರಚಿ ಮಂಗ ಮಾಡಿ ಜನರನ್ನ ವಂಚಿಸಿದ್ದಾರೆ, ಮುಂದೆಯೂ ಅವರು ಶಾಶ್ವತವಾಗಿ ಕಿವಿ ಮೇಲೆ ಹೂ ಇಟ್ಟುಕೊಂಡೇ ಇರಲಿದ್ದಾರೆ ಎಂದು ಹೇಳಿದರು.
