HomeFresh Newsಪೊಳಲಿ, ಉಳಾಯಿಬೆಟ್ಟು ಸೇತುವೆ ಘನ ವಾಹನ ಸಂಚಾರ ನಿಷೇಧ - ತುರ್ತು ಓಡಾಟ ಅನುಮತಿಗೆ...

ಪೊಳಲಿ, ಉಳಾಯಿಬೆಟ್ಟು ಸೇತುವೆ ಘನ ವಾಹನ ಸಂಚಾರ ನಿಷೇಧ – ತುರ್ತು ಓಡಾಟ ಅನುಮತಿಗೆ ಶಾಸಕರು ,ಸಂಸದರ ಸಲಹೆ

ಗುರುಪುರ : ಪೊಳಲಿ ಸೇತುವೆ, ಉಳಾಯಿಬೆಟ್ಟು ಸೇತುವೆ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಆರು ಹಳೆ ಸೇತುವೆಗಳ ದುರಸ್ತಿ ಅಥವಾ ಹೊಸ ಸೇತುವೆ ನಿರ್ಮಾಣ ಹಿನ್ನೆಲೆಯಲ್ಲಿ ಪೊಳಲಿ ಮತ್ತು ಉಳಾಯಿಬೆಟ್ಟು ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಗೊಳಿಸಿ ಆದೇಶ ಹೊರಡಿಸಿರುವ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರೊಂದಿಗೆ ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಡಾ. ಭರತ್ ಶೆಟ್ಟಿ, ರಾಜೇಶ್ ನಾಯ್ಕ್ ಅವರು ಡೀಸಿ ಕಚೇರಿಯಲ್ಲಿ ತುರ್ತು ಸಭೆ ನಡೆಸಿ, ಪರ್ಯಾಯ ವ್ಯವಸ್ಥೆ ಬಗ್ಗೆ ಚರ್ಚಿಸಿದರು.

ಮುಖ್ಯವಾಗಿ ಪೊಳಲಿ ಸೇತುವೆ ಮತ್ತು ಉಳಾಯಿಬೆಟ್ಟು ಕಿರು ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಿ, ದೂರದ ರಸ್ತೆಗಳಲ್ಲಿ ಸುತ್ತುಬಳಸಿ ವಾಹನ ಸಂಚಾರಕ್ಕೆ ಅವಕಾಶ ನೀಡಿರುವುದರಿಂದ ಈ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕಾರ್ಮಿಕರು, ಭಕ್ತಾದಿಗಳಿಗೆ ಸಾಕಷ್ಟು ತೊಂದರೆಯಾಗಲಿದೆ. ಇದಕ್ಕೆ ಪರ್ಯಾಯವಾಗಿ ಸೇತುವೆಗಳಲ್ಲಿ ಶಾಲಾ-ಕಾಲೇಜುಗಳ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಬಗ್ಗೆಯೂ ಸಲಹೆ ಸೂಚನೆ ನೀಡಿದರು.

ಪೊಳಲಿ ಸೇತುವೆಯ ಎರಡೂ ಕಡೆಯಲ್ಲಿ ಬಸ್ ಸೇವೆಗೆ ಅವಕಾಶ ಮಾಡಿಕೊಟ್ಟರೆ ಪ್ರಯಾಣಿಕರ ಸಮಸ್ಯೆಗೆ ಒಂದಷ್ಟು ಪರಿಹಾರ ನೀಡಿದಂತಾಗುತ್ತದೆ ಎಂದು ಸಂಸದ-ಶಾಸಕರ ನಿಯೋಗ ಡೀಸಿಯವರಿಗೆ ಮನವರಿಕೆ ಮಾಡಿದರು.

ಸಾರ್ವಜನಿಕರ ಹಿತಾಸಕ್ತಿ ದೃಷ್ಟಿಯಿಂದ ಹಳೆ ಅಥವಾ ಶಿಥಿಲ ಸೇತುವೆಗಳಲ್ಲಿ ಲಾರಿಗಳ ಸಹಿತ ಇತರ ಘನ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಆದರೆ ಪ್ರಯಾಣಿಕರ ಅನುಕೂಲಕ್ಕಾಗಿ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡಲಾಗುವುದು ಎಂದು ಜಿಲ್ಲಾಧಿಕಾರಿಯವರು ಭರವಸೆ ನೀಡಿದರು. ಸಭೆಯಲ್ಲಿ ಸಂಸದರು, ಶಾಸಕದ್ವಯರು ಹಾಗೂ ಅಪರ ಜಿಲ್ಲಾಧಿಕಾರಿ(ಎಡಿಸಿ) ಹಾಗೂ ಸಂಬಂಧಪಟ್ಟ ಇತರ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

ಆ. 17ಕ್ಕೆ ಮಹತ್ವದ ಸಭೆ :
ಪ್ರಯಾಣಿಕರ ಸಾಗಾಟ(ಬಸ್ ಸೇವೆ) ವಿಷಯದಲ್ಲಿ ಆರ್‌ಟಿಒ, ಎರಡು ಗ್ರಾಮ ಪಂಚಾಯತ್‌ಗಳ ಪಿಡಿಒಗಳು, ಬಸ್ ಸಂಘಗಳ ಪದಾಧಿಕಾರಿಗಳು, ಶಾಲಾ ಬಸ್‌ಗಳ ಪ್ರಮುಖರು ಹಾಗೂ ಇತರರೊಂದಿಗೆ ಆ. 17ರಂದು ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿಯವರು ಮಾತುಕತೆ ನಡೆಸಿಲಿರುವರು.

add - Anchan ayurvedic
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments