ಪ್ರವೀಣ್ ನೆಟ್ಟಾರ್ ಸ್ಮರಣಾರ್ಥ ಬಿಲ್ಲವ ಸಂಘದಿಂದ 14 ಬಡ ಕುಟುಂಬಗಳಿಗೆ ಸೂರು

ಪುತ್ತೂರು:- ದುಷ್ಕರ್ಮಿಗಳಿಂದ ಹತ್ಯೆಗೀಡಾದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಅವರ ಕುಟುಂಬದವರಿಗೆ ದ.ಕ ಹಾಗೂ ಉಡುಪಿ ಬಿಲ್ಲವ ಪ್ರಮುಖರು 45 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಡುವುದಾಗಿ ಹೇಳಿದ್ದು ಇದೀಗ ಇದಕ್ಕೆ ಅವಕಾಶ ಇಲ್ಲದ ನಿಟ್ಟಿನಲ್ಲಿ ಇದೇ ಹಣದಿಂದ ಪ್ರವೀಣ್ ನೆಟ್ಟಾರ್ ಸ್ಮರಣಾರ್ಥ ದ.ಕ ಉಡುಪಿ ವಿಧಾನಸಭಾ ಕ್ಷೇತ್ರದ 14 ಮಂದಿ ಹಿಂದುಳಿದ ವರ್ಗಗಳ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಬಿಲ್ಲವ ಮುಖಂಡ ಜಯಂತ್ ನಡುಬೈಲ್ ತಿಳಿಸಿದ್ದಾರೆ.

ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪ್ರವೀಣ್ ನೆಟ್ಟಾರ್ ಹತ್ಯೆಯಾಗಿ ಬಳಿಕ ಅವರಿಗೆ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಈ ಕುರಿತು ಅವರ ಮನೆಯವರಿಗೆ ಮನೆ ನಿರ್ಮಾಣದ ಬಗ್ಗೆ ಭರವಸೆ ನೀಡಿದ್ದರು.ಅಲ್ಲದೇ ಈ ಸಂದರ್ಭದಲ್ಲಿ ಮನೆಯ ತ್ರಿಡಿ ವಿನ್ಯಾಸದ ಜೊತೆ ಮನೆ ನಿರ್ಮಾಣಕ್ಕೆ ಏಳು ಲಕ್ಷ ರೂಪಾಯಿ ಮುಂಗಡ ಹಣವನ್ನು ಪ್ರವೀಣ್ ನೆಟ್ಟಾರ್ ಅವರ ಮನೆಯವರ ಮೂಲಕ ಗುತ್ತಿಗೆದಾರರಿಗೆ ನೀಡಲಾಗಿತ್ತು.ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಮನೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದರು.ಇದಕ್ಕೆ ಭೂಮಿ ಪೂಜೆಯು ನಡೆದಿದೆ ಹಾಗೂ ಇದು ಸ್ವಾಗತಾರ್ಹ ಈ ವಿಚಾರದಲ್ಲಿ ಸಂಸದರು ಬಿಲ್ಲವ ಮುಖಂಡರಲ್ಲಿ ಚರ್ಚಿಸಿ ಈ ವಿಚಾರಕ್ಕೆ ಇಳಿಯಬೇಕಿತ್ತು ಎಂಬುದು ಬಿಲ್ಲವ ಮುಖಂಡರಿಂದ ಅಭಿಪ್ರಾಯವಿದ್ದು ನಮ್ಮ ಯಾವುದೇ ವಿರೋಧವಿಲ್ಲ ಎಂದು ತಿಳಿಸಿದರು.ಅದಾದ ಬಳಿಕ ಗುತ್ತಿಗೆದಾರರಿಗೆ ನೀಡಿದ ಏಳು ಲಕ್ಷವನ್ನು ನಾವು ಹಿಂಪಡೆದಿದ್ದೇವೆ ಎಂದು ತಿಳಿಸಿದರು.ಇದೀಗ ನೆಟ್ಟಾರು ಕುಟುಂಬಕ್ಕೆ ಮನೆ ನಿರ್ಮಿಸಲು ಬಳಸುವ 45ಲಕ್ಷ ರೂ ನಲ್ಲಿ ತಲಾ ಐದು ಲಕ್ಷ ರೂ ವೆಚ್ಚದಲ್ಲಿ14 ಮನೆ ನಿರ್ಮಿಸಿ ಕೊಡುವ ಯೋಜನೆಯಾಗಿದ್ದು ಇದೀಗ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ತಾಲೂಕಿನ ಪುಣಚ ಗ್ರಾಮದ ನಿವಾಸಿ ಚಂದ್ರಾವತಿ ಹಾಗೂ ಬಂಟ್ವಾಳ ಸಜಿಪ ಮೂಡ ನಿವಾಸಿ ಸುಂದರಿ ಅವರ ಕುಟುಂಬಕ್ಕೆ ಮೊದಲ ಹಂತದಲ್ಲಿ ಮನೆ ನಿರ್ಮಾಣವಾಗಲಿದ್ದು ಕಾಮಗಾರಿಯನ್ನು ಮುಂದಿನ ವಾರದಲ್ಲಿ ಹಮ್ಮಿಕೊಳ್ಳಲಾಗಿದೆ.ಉಳಿದ 12 ಮನೆಗಳನ್ನು ಬಂದ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಿಕೊಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.