ಕಾರ್ಕಳ: ಇಂದಿನ ಡಿಜಿಟಲ್ ಯುಗದಲ್ಲಿ ಸುದ್ದಿಗಳು ಅತ್ಯಂತ ಧಾವಂತ ಹಾಗೂ ವೇಗದಿಂದ ಸಾಗುತ್ತಿವೆ. ಮಾಹಿತಿ ತಂತ್ರಜ್ಞಾನ ಬೆಳೆದಂತೆಲ್ಲಾ ಸುದ್ದಿಗಳ ಹರಿವು ಹೆಚ್ಚಾಗಿದ್ದು, ಈ ಹಂತದಲ್ಲಿ ಪ್ರಸಾರವಾಗುವ ಮಾಹಿತಿಗಳಲ್ಲಿ ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂಬುದನ್ನು ಸರಿಯಾಗಿ ವಿಮರ್ಶಿಸಿ ಜನರಿಗೆ ತಲುಪಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಕರಾವಳಿ ಪ್ರಾಧಿಕಾರ ಅಧ್ಯಕ್ಷ ಎಂ.ಎ ಗಪೂರ್ ಹೇಳಿದರು.
ಅವರು ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕಾರ್ಕಳ ಇದರ ನೇತೃತ್ವದಲ್ಲಿ ಕ್ರಿಯೆಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳ ಇದರ ಸಹಯೋಗದಲ್ಲಿ ಕ್ರಿಯೆಟಿವ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜರ್ಮನಿಯಿಂದ ಆಗಮಿಸಿ ಕರಾವಳಿಯ ಶಿಕ್ಷಣ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾ, ಇಲ್ಲಿನ ಸ್ಥಳೀಯ ಭಾಷೆಯನ್ನು ಕಲಿತು ಪತ್ರಿಕಾರಂಗವನ್ನು ಹುಟ್ಟುಹಾಕಿದ ಹರ್ಮನ್ ಮೊಗ್ಲಿಂಗ್ ಅವರ ಕೊಡುಗೆ ಇಂದಿನ ಪತ್ರಿಕೋದ್ಯಮಕ್ಕೆ ಬಲವಾದ ಬುನಾದಿಯಾಗಿದೆ ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗಕ್ಕೆ ಅತ್ಯಂತ ಗೌರವಯುತ ಸ್ಥಾನವಿದೆ. ಸಮಾಜದ ನಾಲ್ಕನೇ ಅಂಗವಾಗಿ ಕಾವಲುಗಾರನಂತೆ ಕೆಲಸ ಮಾಡುವುದು ಮಾಧ್ಯಮಗಳ ಮೇಲಿರುವ ದೊಡ್ಡ ಜವಾಬ್ದಾರಿಯಾಗಿದೆ ಎಂದರು. ಮಾಧ್ಯಮ ರಂಗದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಸಾಮಾಜಿಕ ಕಳಕಳಿ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿಯಲು ಸಾಧ್ಯ ಎಂದು ಈ ಸಂದರ್ಭ ಅಭಿಪ್ರಾಯಪಟ್ಟರು
ಸಂಪನ್ಮೂಲ ವ್ಯಕ್ತಿ ಯಾಗಿ ಭಾಗವಹಿಸಿದ ಹಿರಿಯ ಪತ್ರಕರ್ತ ಬಿಪಿನ್ ಚಂದ್ರಪಾಲ್ ನಕ್ರೆ ಮಾತನಾಡಿ, ಇಂದು ಬ್ರೇಕಿಂಗ್ ನ್ಯೂಸ್’ ನೆಪದಲ್ಲಿ ಟಿವಿ ಹಾಗೂ ಮೊಬೈಲ್ ಪರದೆ ಮೇಲೆ ಬರುವ ಸುದ್ದಿಗಳು ಸತ್ಯ-ಸುಳ್ಳುಗಳ ಗೊಂದಲಕ್ಕೆ ಈಡಾಗಬಹುದು. ಡಿಜಿಟಲ್ ಮಾಧ್ಯಮದಲ್ಲಿ ಸುಳ್ಳು ಸುದ್ದಿಯನ್ನು ಅಳಿಸಬಹುದು ಅಥವಾ ಅಡಗಿಸಬಹುದು. ಆದರೆ, ಮುದ್ರಣ ಪತ್ರಿಕೆಗಳಲ್ಲಿ ಅದು ಸಾಧ್ಯವಿಲ್ಲ. ಪತ್ರಿಕೆಗಳಲ್ಲಿ ಆಳವಾದ ಸತ್ಯಶೋಧನೆ ನಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಮುದ್ರಣ ಪತ್ರಿಕಾರಂಗ ಮತ್ತೆ ಶಕ್ತಿಯುತವಾಗಿ ಭುಗಿದೇಳುತ್ತಿರುವುದು ಸಮಾಧಾನಕರ ಸಂಗತಿ ಎಂದರು.ದೇಶದ ಭವಿಷ್ಯ ನಿರ್ಮಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಅಂಗವಾದ ಮಾಧ್ಯಮಗಳ ಜವಾಬ್ದಾರಿಯಾಗಿದೆ. ಆದರೆ, ಈ ನಾಲ್ಕನೇ ಸ್ತಂಭದ ಸ್ವರೂಪ ಕೆಲವೊಮ್ಮೆ ಬದಲಾಗಿ ಸ್ತಂಭವೇ ಬಾಗುತ್ತಿರುವುದು ವಿಷಾದನೀಯ. ಹೀಗಾಗಿ ಪತ್ರಿಕಾ ಮಾಧ್ಯಮ ಜಾಗೃತವಾಗಬೇಕು. ಪತ್ರಿಕೆಗಳಿಗೂ ವಿದ್ಯಾರ್ಥಿಗಳಿಗೂ ನಿಕಟ ಸಂಬಂಧವಿದ್ದು, ಭಾಷೆ ಮತ್ತು ಜ್ಞಾನದ ಜೊತೆಗೆ ಸಾಮಾಜಿಕ, ವೈಜ್ಞಾನಿಕ ಹಾಗೂ ವೈಚಾರಿಕತೆಯನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸ ಪತ್ರಿಕೆಗಳಿಂದ ಆಗುತ್ತಿದೆ ಎಂದು ನಕ್ರೆ ಕಿವಿಮಾತು ಹೇಳಿದರು.
ಕ್ರಿಯೆಟಿವ್ ಶಿಕ್ಷಣ ಸಂಸ್ಥೆಯ ಸಹ ಸಂಸ್ಥಾಪಕ ಗಣಪತಿ ಕೆ.ಎಸ್ ಮಾತನಾಡಿ ಪತ್ರಕರ್ತರು ಸಮಾಜ ಮತ್ತು ಸರಕಾರದ ಮಧ್ಯೆ ಬೆಸುಗೆ ಮೂಡಿಸುತ್ತಾರೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಿ. ಸುಬ್ರಹ್ಮಣ್ಯ ಕುರ್ಯ ಮಾತನಾಡಿ ಬದುಕಿನ ಅರಿವು, ಜ್ಞಾನವೃದ್ದಿ ಜಾಗ್ರತಿಗಾಗಿ ಪತ್ರಿಕೆ ಓದುವುದು ಅವಶ್ಯ. ಓದುವ ಅಭಿರುಚಿ ಹೆಚ್ಚಲಿ ಎಂದು ಹಾರೈಸಿದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ರಾಜ್ಯ ಸಮಿತಿ ಸದಸ್ಯ ಆಸ್ಟ್ರೊ ಮೋಹನ್ ಮಾತನಾಡಿ ನಾವೀಗ ನವಮಾಧ್ಯಮ ಬಂದ ಮೇಲೆ ಹಿಟ್ ಆ್ಯಂಡ್ ರನ್ ಪ್ರಕರಣ ಹೆಚ್ಚುತ್ತಿದೆ. ಬರವಣಿಗೆ ಮಾತ್ರ ಮಾನ್ಯತೆ ಪಡೆಯುತ್ತವೆ. ನಮ್ಮಲ್ಲಿ ಕಲ್ಪನಾ ಶಕ್ತಿ ಹೆಚ್ಚಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ ಕಾರ್ಯನಿರತ ಪತ್ರಕರ್ತದ ಸಂಘದ ತಾಲೂಕು ಅಧ್ಯಕ್ಷ ಮೊಹಮ್ಮದ್ ಶರೀಪ್ ಮಾತನಾಡಿ, ಯಾವುದೇ ರಂಗದಲ್ಲಿ ಇದ್ದರೂ ನಿಷ್ಠೆ ಮುಖ್ಯ. ಪತ್ರಕರ್ತರು ಸವಾಲುಗಳನ್ನು ಎದುರಿಸಿ ಸಮಾಜದ ನಡುವೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಪ್ರಜಾವಾಣಿ ವರದಿಗಾರ ವಾಸುದೇವ ಭಟ್ ಪ್ರಸ್ತಾವನೆಗೈದು. ಪ್ರತಿ ಜುಲೈ ತಿಂಗಳ 1 ರಂದು ಪತ್ರಿಕಾ ದಿನಾಚರಣೆ ನಡೆಸಲಾಗುತ್ತದೆ. ಪತ್ರಿಕಾ ಸುದ್ದಿಯಲ್ಲಿ ಇಂಚಿಗೂ ಬೆಲೆ ಇರುತ್ತದೆ. ರಂಜಿಕತೆ ಇರುವುದಿಲ್ಲ.ಪತ್ರಿಕೆಗಳು ಪ್ರಜಾಪ್ರಭುತ್ವದ ನಾಲ್ಕನೆ ಪ್ರಧಾನ ಸ್ತಂಬವಾಗಿದೆ. ಪತ್ರಿಕೆಗಳು ಸರಕಾರಿ ಸೌಲಭ್ಯಗಳನ್ನು ಜನರಿಗೆ ತಿಳಿಸುವುದು. ಸಮಾಜದಲ್ಲಿ ಜಾಗೃತಿ ಮೂಡಿಸುವ, ಅಲ್ಪ ಮನೊರಂಜನೆ ನೀಡುತ್ತವೆ ಎಂದರು. ಮುಂದುವರೆದ ಯುಗದಲ್ಲಿ ತಾಂತ್ರಿಕ ಪ್ರಭಾವ, ಕೃತಕ ಬುದ್ದಿಮತ್ತತೆಯಿಂದ ಹೊಸ ತಂತ್ರಜ್ಞಾನಗಳು ಬಂದಿವೆ ಎಂದರು.
ಕ್ರಿಯೆಟಿವ್ ಶಿಕ್ಷಣ ಸಂಸ್ಥೆಯ ಸಹಸಂಸ್ಥಾಪಕ ಅಶ್ವತ್ಥ್ ಎಸ್.ಎಲ್ ಅವರನ್ನು ಗೌರವಿಸಲಾಯಿತು. ಅವರ ಪರವಾಗಿ ಸಹಸಂಸ್ಥಾಪಕ ಗಣಪತಿ ಕೆ.ಎಸ್ ಸ್ವೀಕರಿಸಿದರು.
ಪ್ರಧಾನ ಕಾರ್ಯದರ್ಶಿ ಹರೀಶ್ ಸಚ್ಚರಿಪೇಟೆ, ಕೋಶಾಧಿಕಾರಿ ಸತೀಶ್ ಶೆಟ್ಟಿ ವಾಮನಪದವು ವೇದಿಕೆಯಲ್ಲಿದ್ದರು.
ಜಿಲ್ಲಾ ಸಮಿತಿ ಉಪಾಧ್ಯಕ್ಷ ಉದಯಕುಮಾರ್ ಮುಂಡ್ಕೂರು ಸ್ವಾಗತಿಸಿದರು. ಕ್ರಿಯೆಟಿವ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಸಂಘದ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಾದ ಪ್ರಜ್ಞಾ ರಾವ್ ಎಂ, ಶಿಥಿಲ್ ಎಸ್ ಶೆಟ್ಟಿ, ಸಮೀಕ್ಷಾ, ಐಪುನ್ ಮರಿಯಂ ಫಾತಿಮ, ತನಿಷ್ ಕುಮಾರ್, ಇವರಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಹರೀಶ್ ಆಚಾರ್ಯ ಹೆಸರು ವಾಚಿಸಿದರು.
ಚೈತ್ರಾ ಕಬ್ಬಿನಾಲೆ ನಿರೂಪಿಸಿದರು. ಅವಿನ್ ಶೆಟ್ಟಿ ವಂದಿಸಿದರು.


