ಉಚ್ಚಿಲ ಬಡಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೃತಕ ನೆರೆ: ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ
ಕಳೆದ ನಾಲ್ಕು ವರ್ಷಗಳಿಂದ ಉಚ್ಚಿಲ ಬಡ ಗ್ರಾ.ಪಂ. ವ್ಯಾಪ್ತಿಯ ಭಾರತ್ ನಗರದ ಹನ್ನೆರಡು ಮನೆಗಳಿರುವ ಪ್ರದೇಶ ಸುತ್ತಲೂ ಮಳೆ ನೀರು ನಿಂತು ಕೃತಕ ದ್ವೀಪ ನಿರ್ಮಾಣಗೊಂಡಿದ್ದರೂ ಈ ಭಾಗದ ಶಾಸಕರಾಗಲೀ ಗ್ರಾ.ಪಂ. ಆಗಲಿ ಸ್ಪಂದಿಸುತ್ತಿಲ್ಲ ಎಂಬುದಾಗಿ ಜನ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಇಲ್ಲಿಯ ಸಮಸ್ಯೆಯ ಬಗ್ಗೆ ಮಾದ್ಯಮಕ್ಕೆ ಮಾಹಿತಿ ನೀಡಿದ ದಿವ್ಯ ಎಂಬವರು, ಮಕ್ಕಳು, ಹಿರಿಯರು, ಅನಾರೋಗ್ಯ ಪೀಡಿತರು ವಾಸ ಮಾಡುವ ಬಡ ಎರ್ಮಾಳು ಭರತ್ ನಗರ ನಿವಾಸಿಗಳಾದ ನಾವು ಮಳೆ ಬಂದರೆ ದ್ವೀಪದಂತ್ತಾಗುವ ಈ ಪ್ರದೇಶದಲ್ಲಿ ವಾಸ ಮಾಡುವ ಅನಿವಾರ್ಯ ಸ್ಥಿತಿ ಇಲ್ಲಿದೆ.
ಶಾಸಕ ಲಾಲಾಜಿ ಸಹಿತ ಗ್ರಾ.ಪಂ.ನ ಗಮನಕ್ಕೆ ಈ ಸಮಸ್ಯೆಯ ಮಾಹಿತಿ ನೀಡಿದ್ದೇವೆಯಾದರೂ ಯಾವುದೇ ಫಲ ಕಂಡಿಲ್ಲ. ಚರಂಡಿಯೊಂದನ್ನು ನಿರ್ಮಾಣ ಮಾಡಿದ್ದರಾದರೂ ಅದರಲ್ಲಿ ನೀರು ಹರಿದು ಹೋಗುತ್ತಿಲ್ಲ, ಅದರಿಂದಾಗಿ ಮನೆಯ ಸುತ್ತಲೂ ನೀರು ನಿಂತು ಮನೆ ಕುಸಿದೇ ಹೋಗುತ್ತದ್ದೋ ಎಂಬಂತ್ತಾಗಿದೆ. ಮಳೆ ನಿಂತರೂ ನೀರು ಹರಿಯದ ಕಾರಣ ನಿಂತ ನೀರಲ್ಲಿ ಸೊಳ್ಳೆ ಉತ್ಪತ್ತಿಯಾಗಿ ಮಾರಕ ರೋಗ ಭೀತಿ ಎದರುರಾಗಿದೆ. ಕೊರೋನಾ ದಿಂದ ಕಂಗ್ಗೆಟ್ಟ ನಾವು ಇದೀಗ ಈ ಸ್ಥಿತಿಯಲ್ಲಿ ಮಯೋ ವೃದ್ಧರ ಸಹಿತ ಪುಟ್ಟ ಪುಟ್ಟ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗಲು ಅಸಾಧ್ಯವಾಗಿದ್ದು, ನಮ್ಮ ಆರ್ಥಿಕ ಪರಿಸ್ಥಿತಿಯೂ ಕುಸಿದಿದೆ. ಕುಡಿಯುವ ಬಾವಿ ನೀರಿಗೂ ಮಳೆಯ ಕೆಸರು ನೀರು ತುಂಬಿದ್ದರಿಂದ ಕುಡಿಯುವ ನೀರಿಗೂ ತಾತ್ವಾರ ಅನುಭವಿಸುವಂತ್ತಾಗಿ ಎನ್ನುತ್ತಾರೆ.