ಉಪ್ಪಿನಂಗಡಿಯಲ್ಲಿ ಮೀನು ಅಂಗಡಿಗೆ ಬೆಂಕಿ ಹಚ್ಚಿದ್ದ ಪ್ರಕರಣ : ಹಿಂಜಾವೇಯಿಂದ ಪ್ರತಿಭಟನೆ
ಉಪ್ಪಿನಂಗಡಿ: ಹಳೇಗೇಟು ಬಳಿ ಕೆಲ ದಿನಗಳ ಹಿಂದೆ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹಸಿ ಮೀನು ಮಾರಾಟದ ಅಂಗಡಿಗೆ ಬೆಂಕಿ ಹಚ್ಚಿರುವ ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿ ಸೆ. 6ರಂದು ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆ ಮುಂದೆ ಧರಣಿ ನಡೆಯಿತು. ಬೆಂಕಿ ಹಚ್ಚಿರುವ ಘಟನೆ ಖಂಡಿಸಿ ಹಿಂದೆ ರಾಸ್ತಾರೋಕೋ ನಡೆಸಲಾಗಿತ್ತು. ಅಲ್ಲದೆ, ಉಗ್ರ ಪ್ರತಿಭಟನೆಗೆ ನಿರ್ಧರಿಸಲಾಗಿತ್ತು. ಪೊಲೀಸ್ ಇಲಾಖೆಯ ಮನವಿ ಮೇರೆಗೆ ಪ್ರತಿಭಟನೆ ಕೈ ಬಿಡಲಾಗಿತ್ತು. ಸೆಪ್ಟೆಂಬರ್ 5ರವರೆಗೆ ಆರೋಪಿಗಳ ಬಂಧನಕ್ಕೆ ಗಡುವು ನೀಡಲಾಗಿತ್ತು.
ಈ ಮಧ್ಯೆ ಹಿಂದೂ ಜಾಗರಣ ವೇದಿಕೆ ಮುಖಂಡ ಜಗದೀಶ್ ಕಾರಂತ್ ಉಪ್ಪಿನಂಗಡಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದ್ದರು.ದುಷ್ಕರ್ಮಿಗಳ ಬಂಧನವಾಗದ ನಿಟ್ಟಿನಲ್ಲಿ ಹಿಂ.ಜಾ.ವೇ.ನೇತೃತ್ವದಲ್ಲಿ ವಿವಿಧ ಹಿಂದೂ ಸಂಘಟನೆಗಳ ಸಹಕಾರದೊಂದಿಗೆ ಸೆ.6ರಂದು ಪ್ರತಿಭಟನೆ ನಡೆಸಲಾಗಿದೆ. ಈ ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಮುರಳಿ ಕೃಷ್ಣ ಹಸಂತಡ್ಕ, ಬ. ಗಣರಾಜ್ ಭಟ್ ಕೆದಿಲ, ನರಸಿಂಹ ಶೆಟ್ಟಿ ಮಾಣಿ, ಭಾಸ್ಕರ ಧರ್ಮಸ್ಥಳ ಮಾತನಾಡಿದರು. ಪೊಲೀಸ್ ರು ಬಂದೋಬಸ್ತ್ ಏರ್ಪಡಿಸಿದ್ದರು.