ನಿಡ್ಡೋಡಿಯಲ್ಲಿ ಸೀಫುಡ್ ಪಾರ್ಕ್ ನಿರ್ಮಾಣ ಕೈಬಿಡುವಂತೆ ಐವನ್ ಡಿಸೋಜಾ ಒತ್ತಾಯ
ಮೂಡುಬಿದಿರೆ: ಕೃಷಿ ಪ್ರಧಾನವಾದ ನಿಡ್ಡೋಡಿ ಪ್ರದೇಶದಲ್ಲಿ ಸೀಫುಡ್ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರವು ರೈತರ ಹಿತದೃಷ್ಟಿಯನ್ನು ಮರೆತಿದೆ. ಪಾರ್ಕ್ ನಿರ್ಮಾಣದಿಂದಾಗಿ ಕೃಷಿ ಭೂಮಿ ಸಂಪೂರ್ಣ ಹಾನಿಯಾಗಲಿದೆ. ಪರಿಸರ ಕೆಡಿಸಿ ಅಭಿವೃದ್ಧಿ ನಡೆಸುವ ಬದಲು, ಪರಿಸರಕ್ಕೆ ಪೂರಕ ಅಭಿವೃದ್ಧಿ ನಡೆಸಬೇಕು. ನಿಡ್ಡೋಡಿಯಲ್ಲಿ ಸೀಫುಡ್ ಕಾರ್ಖಾನೆಯನ್ನು ಕೈಬಿಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಿದ್ದು, ಉಸ್ತುವಾರಿ ಸಚಿವರಿಗೆ ಈ ಬಗ್ಗೆ ಒತ್ತಾಯಿಸುತ್ತೇನೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಮೂಡುಬಿದಿರೆ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾಲೂಕಾಗಿ ಮೇಲ್ದರ್ಜೆಗೇರಿರುವ ಮೂಡುಬಿದಿರೆಯಲ್ಲಿ ಸರ್ಕಾರಿ ಬಸ್ ಸೌಲಭ್ಯ, ಸರ್ಕಾರಿ ಪದವಿ, ಪದವಿಪೂರ್ವ ಕಾಲೇಜು, ತಾಲೂಕು ಕಚೇರಿಯ ನಿರ್ಮಾಣದಂತಹ ವ್ಯವಸ್ಥೆಗಳು ನನೆಗುದಿಗೆ ಬಿದ್ದಿದೆ. ಕೊರನಾದಂತಹ ಸಂದಿಗ್ದ ಪರಿಸ್ಥಿತಿಯಲ್ಲೂ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಪ್ರಯತ್ನ ಕೂಡ ನಡೆಯದಿರುವುದು ಖೇದಕರ. ಸರ್ಕಾರವು ದಿನಕ್ಕೆ ಎಂಟು ನೂರು ಮಂದಿಗೆ ಉಚಿತ ಲಸಿಕೆ ನೀಡುವಾಗ ಹತ್ತು ಸಾವಿರ ಮಂದಿಗೆ ಖಾಸಗಿ ಅಸ್ಪತ್ರೆಗಳು ಹಣ ಪಡೆದ ಲಸಿಕೆ ನೀಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಮೀಡಿಯಾ ಪ್ಯಾನಲಿಸ್ಟ್ ಪದ್ಮಪ್ರಸಾದ್ ಜೈನ್, ಕಾಂಗ್ರೆಸ್ ಮುಖಂಡರಾದ ವಿಲ್ಫ್ರೇಡ್ ಮೆಂಡೋನ್ಸಾ, ಪ್ರಕಾಶ್, ಆಲ್ವಿನ್, ಅಶಿಕ್ ಪಿರೇರಾ ಉಪಸ್ಥಿತರಿದ್ದರು.