ದಿಲ್ಲಿ ವಿಶ್ವವಿದ್ಯಾನಿಲಯದ ಶಿವಾಜಿ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದ ದೆಬೋಸ್ಮಿತ ಪೌಲ್ ಅವರ ಕೊಲೆಯು ನಿನ್ನೆ ನಡೆದಿದ್ದು ಯಾರಿಂದ, ಯಾಕಾಗಿ ನಡೆಯಿತು?
ಪೋಲೀಸರ ತನಿಖೆಯಂತೆ ದೆಬೋಸ್ಮಿತ ಪೌಲ್ ಅವರ ಕೊಲೆಯಾಗುವುದಕ್ಕೆ ಒಂದು ದಿನ ಮೊದಲು ಒಬ್ಬರು ಮಹಿಳೆ, ಒಬ್ಬ ಗಂಡಸು ಎಂದು ಇಬ್ಬರು ಮುಖ ಗವುಸು ತೊಟ್ಟವರು, ಕೈಯಲ್ಲಿ ಬ್ಯಾಗು ಹಿಡಿದವರು ಅವರ ಫ್ಲಾಟಿಗೆ ಬಂದಿದ್ದಾರೆ. ಅವರು ಕ್ಯಾಬ್ನಲ್ಲಿ ಬಂದಿದ್ದರು. ಅವರೇ ಕೊಲೆಗಾರರೇ ಅಥವಾ ಕೊಲೆಗೆ ಸಿದ್ಧತೆ, ಸೂಚನೆ ನೀಡಲು ಬಂದವರೇ ಎಂಬುದರ ಬಗೆಗೆ ತನಿಖೆ ನಡೆದಿದೆ. ದೆಬೋಸ್ಮಿತ ಅವರು ಪೂರ್ವ ದಿಲ್ಲಿಯ ವಸುಂಧರಾ ಎನ್ಕ್ಲೇವ್ನ, ಸತ್ಯಂ ಅಪಾರ್ಟ್ಮೆಂಟಿನಲ್ಲಿ ಆಕೆಯ ಸಹೋದರಿಯ ಫ್ಲಾಟಿನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು.
ದೆಬೋಸ್ಮಿತರಿಗೆ ಮದುವೆಯಾಗಿತ್ತು. ಗಂಡನ ಜೊತೆಗೆ ಬೆಂಗಳೂರಿನಲ್ಲಿದ್ದ ಅವರು ಐದು ವರುಷದ ಗಲಾಟೆ ಸಂಸಾರದ ಬಳಿಕ ೨೦೨೨ರಲ್ಲಿ ಬಿಡುಗಡೆ ಪಡೆದು ದಿಲ್ಲಿಗೆ ಬಂದು ಬೇರೆ ಕೆಲಸಕ್ಕೆ ಸೇರಿದ್ದರು. ಪೋಲೀಸರು ಕ್ಯಾಬ್ ಚಾಲಕನನ್ನು ವಶಕ್ಕೆ ಪಡೆದು ಅನುಮಾನಾಸ್ಪದ ವ್ಯಕ್ತಿಗಳ ಬಗೆಗೆ ಮಾಹಿತಿಗಳನ್ನು ಪಡೆದಿದ್ದಾರೆ; ಸದ್ಯ ಎಲ್ಲಿಗೂ ಹೋಗದಂತೆ ಡ್ರೈವರ್ಗೆ ಕಟ್ಟುನಿಟ್ಟು ಮಾಡಿದ್ದಾರೆ.
ಆ ಇಬ್ಬರು ಬರುವುದಕ್ಕೆ ಮೊದಲು ಕೊಲೆಗಾರರು ಒಳಗೆ ಸೇರಿರಬಹುದು ಎಂಬುದು ಕೂಡ ಒಂದು ಲೆಕ್ಕಾಚಾರವಾಗಿದೆ. ನನ್ನ ಸಹೋದರಿ ಫೋನೆತ್ತುತ್ತಿಲ್ಲ ಎಂದು ಸಹೋದರಿ ದೇವರತಿಯವರು ಪೋಲೀಸರಿಗೆ ಫೋನು ಮಾಡಿ ತಿಳಿಸಿದಾಗ ಕೊಲೆ ಬೆಳಕಿಗೆ ಬಂದಿದೆ. ಕೂಗಿದ್ದಾಗಲೀ, ಗೇಟಿನ ಅಲಾರಾಂ ಒತ್ತಿದ್ದಾಗಲೀ ನಡೆದಿಲ್ಲವಾದ್ದರಿಂದ ಕೊಲೆಗಾರರು ದೆಬೋಸ್ಮಿತರ ಪರಿಚಿತರಿರಬೇಕು. ತನಿಖೆ ಮುಂದುವರಿದಿದೆ.

